ರಾಜ್ಯದ ಎಲ್ಲ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ಜಾಧವ ಮಾತನಾಡಿ, ರಾಜ್ಯ ಸರ್ಕಾರದ ಇಲಾಖಾ ಅಧಿಕಾರಿಗಳು ಅವರ ಅಧೀನದ ಅಧಿಕಾರಿಗಳ ಹಾಗೂ ನೌಕರರ ಆಸ್ತಿ ವಿವರಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡುತ್ತಿರುವುದು ಮತ್ತು ಅಕ್ರಮ ಅಸ್ತಿ ಗಳಿಸಿರುವ ನೌಕರರ ವಿರುದ್ಧ ತನಿಖೆಯ ದಾರಿ ತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರುವುದರಿಂದ ಕರ್ನಾಟಕ ಲೋಕಾಯುಕ್ತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಿಹಾರೋಪಾಯವನ್ನು ಸೂಚಿಸಿರುತ್ತಾರೆ. ಈ ವಿಚಾರವಾಗಿ ಅವರು ಎಲ್ಲ ಸರ್ಕಾರಿ ನೌಕರರ ಆಸ್ತಿ ವಿವರವನ್ನು ಕಡ್ಡಾಯವಾಗಿ ಪ್ರತಿವರ್ಷ ಸಂಗ್ರಹಿಸಿ, ಆ ವಿವರಗಳನ್ನು ಪೋರ್ಟಲ್ನಲ್ಲಿ ಆಪ್ ಲೋಡ್ ಮಾಡಿ, ಆ ವಿವರಗಳು ನಿರಂತರವಾಗಿ ಲೋಕಾಯುಕ್ತ ಸಂಸ್ಥೆಗೆ ಮುಕ್ತವಾಗಿ ಲಭ್ಯವಾಗುವ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಶಿವಾನಂದ ಎಡಹಳ್ಳಿ ಮಾತನಾಡಿ, ತಮಿಳುನಾಡು ಸರ್ಕಾರದಂತೆ ಕರ್ನಾಟಕದಲ್ಲಿಯೂ ನೌಕರರ ಆಸ್ತಿ ಮತ್ತು ಸರ್ವಿಸ್ ರೆಕಾರ್ಡ್ ವಿವರಗಳನ್ನು ಮಾಹಿತಿ ಹಕ್ಕಿನಡಿ ನೀಡಲು ನಿರಾಕರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಲೋಕಪಾಲರಿಗೆ ಸಲ್ಲಿಸುತ್ತಿರಬೇಕಾದರೆ ಅದೇ ರೀತಿ ರಾಜ್ಯ ಸರ್ಕಾರದ ನೌಕರರ ವಿವರಗಳನ್ನು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತೆ ಮಾಡುವುದಕ್ಕೆ ಯಾವುದೇ ವಿರೋಧವಿರಬಾರದು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಎಸ್ಡಿಪಿಐ ನೂತನ ಜಿಲ್ಲಾಧ್ಯಕ್ಷರಾಗಿ ಅತಾವುಲ್ಲಾ ದ್ರಾಕ್ಷಿ ಆಯ್ಕೆ
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ ಚಡಚಣ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ರಾಕೇಶ ಇಂಗಳಗಿ, ಪ್ರವೀಣ ಕನಸೇ ಮತ್ತಿತರರಿದ್ದರು.
