ಸಮಾಜ ಕಟ್ಟುವ ಕಾರ್ಯ ನಿಜಶರಣ ಅಂಬಿಗರ ಚೌಡಯ್ಯನವರು ಮಾಡಿದ್ದಾರೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಾದರು ನಾವು ಬೇರೆ ಬೇರೆ ಕೆಲಸಗಳಿಂದ ಬೇರೆ ಬೇರೆ ಜಾತಿ ಮಾಡಿಕೊಂಡಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಅವರು ಜ. 21ರಂದು ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕಂತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, 12 ನೇ ಶತಮಾನದ ಬಸವಣ್ಣನವರ ಸಮಕಾಲಿನ ಶ್ರೇಷ್ಠ ವಚನಕಾರರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರೂ ಒಬ್ಬರು. ಇಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಅಧ್ಯಕ್ಷ ಅರವಿಂದ ಏಗನಗೌಡರ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರು ಶ್ರೇಷ್ಠ ವಚನಕಾರ ಆಗಿದ್ದರು. ಶರಣರು ನಿಜವಾದ ಧರ್ಮ, ತತ್ವ, ಸಿದ್ದಾಂತ, ನೇರ ನುಡಿಗಳಿಂದಾಗಿ ಪ್ರಸಿದ್ಧರಾಗಿದ್ದರು. ಯಾವುದೇ ಜಾತಿ ಭೇದ ಇಲ್ಲವೆಂದು ಬದುಕಿದರು. ಜಾತಿ ತಾರತಮ್ಯ, ಮೌಢ್ಯದ ವಿಚಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇವರ ವಿಚಾರವನ್ನು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಒಪ್ಪಿಕೊಂಡು ನಿಮ್ಮಿಂದ ಕಲಿಯುವುದು ಬಹಳಷ್ಟಿದೆ. ನೀವೂ ನಿಜವಾದ ನಿಜ ಶರಣರು ಆಗಿದ್ದರಿ ಎಂದು ಶರಣರು ಭಾವಿಸಿ, ಗೌರವಿಸುತಿದ್ದರು ಎಂದರು.
ಕಲಘಟಗಿಯ ಚಿಂತಕ ಹನುಮಂತಪ್ಪ ಸರಾವರಿ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರಿ ಆರ್.ಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಧಾರವಾಡ ಜಿಲ್ಲಾ ಗಂಗಮತಸ್ಥರ ನೌಕಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರು ಮತ್ತೂರ, ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಉಪಾಧ್ಯಕ್ಷ ಗುರಪ್ಪ ಸಿದ್ದಪ್ಪ ಜಿಡ್ಡಿ, ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಮನೋಜಕುಮಾರ ಕರ್ಜಗಿ, ಕಾರ್ಯದರ್ಶಿ ಅಶೋಕಕುಮಾರ ಬೆಸ್ತ, ಖಜಾಂಚಿ ಯಲ್ಲಪ್ಪ ಸುಣಗಾರ, ತಾಲೂಕ ಅಧ್ಯಕ್ಷ ಮಂಜುನಾಥ ಭೀಮಕ್ಕನವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.