ರೈತರಿಂದ ಭತ್ತ ಖರೀದಿಸಿ ಸುಮಾರು ₹60 ಲಕ್ಷ ಮೊತ್ತವನ್ನು ಕೊಡದೆ ಮೋಸವೆಸಗಿ ಪರಾರಿಯಾದ ವ್ಯಾಪಾರಿ ವಿರುದ್ಧ ರೈತರು ರಾಯಚೂರು ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪರಾರಿಯಾಗಿರುವ ವ್ಯಾಪಾರಿ ಮಲ್ಲೇಶ ಎಂಬಾತನ ವಿರುದ್ಧ ರೈತರು ದೂರು ನೀಡಿದ್ದಾರೆ. ಸಿಂಧನೂರು ತಾಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತ ಖರೀದಿಸಿದ ವ್ಯಾಪಾರಿಯೊಬ್ಬ ರೈತರಿಗೆ ₹60 ಲಕ್ಷ ಪಾವತಿಸದೇ ಪರಾರಿಯಾಗಿದ್ದಾನೆ.
ಕಾರಟಗಿಯಲ್ಲಿ ‘ಮಹಾಮಲ್ಲೇಶ್ವರ ಟ್ರೇಡಿಂಗ್’ ಹೆಸರಿನಲ್ಲಿ ಕಮಿಷನ್ ಏಜೆಂಟ್ರಾಗಿ ವ್ಯವಹಾರ ಮಾಡುತ್ತಿದ್ದ ಮಲ್ಲೇಶಗೆ ಉಪ್ಪಳ ಗ್ರಾಮದ ಸೂರ್ಯಬಾಬು 460 ಚೀಲ, ಕೆ ಎಂ ಬಸವರಾಜ 170 ಚೀಲ, ಬಸವರಾಜ ಸಂಗಟಿಯಿಂದ 200, ರಾಮರಾವ್ 1800 ಚೀಲ, ಜಿ ಗೋವಿಂದ 250 ಚೀಲ ಸೇರಿದಂತೆ 30 ಮಂದಿ ರೈತರು ಡಿಸೆಂಬರ್ ಮೊದಲ ವಾರದಲ್ಲಿ ಆರ್ಎನ್ಆರ್ ತಳಿಯ ಭತ್ತವನ್ನು ಮಾರಾಟ ಮಾಡಿದ್ದರು.
75 ಕೆಜಿ ಭತ್ತಕ್ಕೆ ₹1800, ಪ್ರತಿ ಕ್ವಿಂಟಲ್ಗೆ ₹2400 ಬೆಲೆ ನಿಗದಿ ಪಡಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ಮಲ್ಲೇಶ ಭರವಸೆ ನೀಡಿದ್ದ. ಅವಧಿ ಮುಗಿದ ನಂತರ ರೈತರು ಅಂಗಡಿಗೆ ಬಂದಾಗ ಬೀಗ ಹಾಕಲಾಗಿತ್ತು. ಎರಡ್ಮೂರು ದಿನಗಳಿಂದ ಅಲೆದಾಡಿದರೂ ಅಂಗಡಿ ಮಾಲೀಕರ ಪತ್ತೆಯಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಲೈನ್ ಮೆನ್ಗಳ ಕೊರತೆ | ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ಗಳ ನೇಮಕ: ಸಚಿವ ಕೆ ಜೆ ಜಾರ್ಜ್
“ಉಪ್ಪಳದ ಭೀಮಯ್ಯ ಅವರ ಜೊತೆಯಲ್ಲಿ ಪಾಲುದಾರನಾಗಿ ಮೂರು ವರ್ಷಗಳಿಂದ ಕಾರಟಗಿಯ ಮಲ್ಲೇಶ ವ್ಯಾಪಾರ ಮಾಡುತ್ತಿದ್ದರಿಂದ ರೈತರಿಗೆ ಪರಿಯಚವಾಗಿದ್ದ. ಮಲ್ಲೇಶ ಕಳೆದ ವರ್ಷ ಇದೇ ರೀತಿ ಉದ್ರಿ ಪಡೆದು ಹೇಳಿದ ಮಾತಿನಂತೆ ಹಣ ಕೊಟ್ಟಿದ್ದನು. ಆದರೆ ಈಗ ಓಡಿ ಹೋಗಿದ್ದಾನೆ” ಎಂದು ಉಪ್ಪಳದ ರೈತರಾದ ರಾಮರಾವ್, ಸೂರ್ಯಬಾಬು ಅಳಲು ತೋಡಿಕೊಂಡಿದ್ದಾರೆ.
