ಕರ್ನಾಟಕ ಚಲನಚಿತ್ರ ಅಕಾಡೆಮಿಯು ಮಾರ್ಚ್ 01ರಿಂದ 08ರವರೆಗೂ ಹಮ್ಮಿಕೊಂಡಿರುವ 16ನೇ ಅಂತಾರಾಷ್ಟ್ರೀಯ ಬೆಂಗಳೂರು ಚಲನಚಿತ್ರೋತ್ಸವವನ್ನು ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಆಯೋಜಿಸಬೇಕು ಎಂದು ಒತ್ತಾಯಿಸಿ ನಾವು ದ್ರಾವಿಡ ಕನ್ನಡಿಗರು ಚಳವಳಿಯಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕನ್ನಡ ಚಲನಚಿತ್ರ ಅಮೃತೋತ್ಸವ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
“ಈಗ ಹಮ್ಮಿಕೊಂಡಿರುವ ಚಲನಚಿತ್ರೋತ್ಸವದ ಸಮಯದಲ್ಲಿ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳೂ ಕೂಡ ಆರಂಭವಾಗುತ್ತಿವೆ. ಚಲನಚಿತ್ರೋತ್ಸವ ಮತ್ತು ಆಕಾಡೆಮಿಯ ಉದ್ದೇಶವೇ ಯುವ ಜನತೆ ಈ ಉತ್ಸವದಿಂದ ವಿಭಿನ್ನ ರೀತಿಯಾ ಸಿನಿಮಾಗಳನ್ನು ನೋಡಲಿ, ಅದರಿಂದ ಸ್ಪೂರ್ತಿಗೊಂಡು ಸಿನಿಮಾ ಶಿಕ್ಷಣ ಪಡೆದು ಸ್ಥಳಿಯವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸುವಂತಹ ಕನ್ನಡ ಸಿನಿಮಾ ತೆಗೆಯಲಿ ಎಂಬುದಾಗಿದೆಯಲ್ಲವೇ?” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಸಂಕಷ್ಟಕೀಡಾಗಿದ್ದ ಕುಟುಂಬ: ಲಕ್ಷ್ಮೀ ಹೆಬ್ಬಾಳ್ಕರ್ ಸಹಾಯ
“ಯುವಜನರು ದ್ವಿತೀಯ ಪಿಯುಸಿ ಮುಗಿಸಿ ಸಿನಿಮಾ ಶಿಕ್ಷಣದಲ್ಲಿ ಪದವಿ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆ ದಿನವೇ ಚಲನಚಿತ್ರೋತ್ಸವ ಇರುವುದರಿಂದ ಭಾಗವಹಿಸುವುದಾದರು ಹೇಗೆ? ಇಲ್ಲಿ ಮತ್ತೊಂದು ಅಪಾಯವಿದ್ದು, ಸಿನಿಮಾ ಮೇಲಿರುವ ಸೆಳೆತದಿಂದ ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದು ಆಸಕ್ತಿಯಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ತಪ್ಪಿಸಿ ಚಲನಚಿತ್ರೋತ್ಸವಕ್ಕೆ ಹಾಜರಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಚಲನಚಿತ್ರೋತ್ಸವವು ಪರೀಕ್ಷೆಯ ನಂತರ ನಡೆದರೆ, ಸಿನಿಮಾ ಶಿಕ್ಷಣದಲ್ಲಿ ಪದವಿ ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳೂ ಕೂಡ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ಹಾಗಾಗಿ ಚಲನಚಿತ್ರೋತ್ಸವವನ್ನು ಮುಂದೂಡಬೇಕು” ಎಂದು ಮನವಿ ಮಾಡಿದರು.