ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲೂ ಸಂಭ್ರಮ, ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.
ಇಂದು ದೆಹಲಿಯ ಕರ್ತವ್ಯ ಪಥದಲ್ಲಿ ಆಕರ್ಷಕ ಪಥ ಸಂಚಲನ ನಡೆಯಲಿದೆ. 76ನೇ ಗಣರಾಜೋತ್ಸವದ ಪರೇಡ್ನಲ್ಲಿ ದೇಶದ ಮಿಲಿಟರಿ ಶಕ್ತಿ ಜೊತೆಗೆ ದೇಶದ ಭವ್ಯ ಪರಂಪರೆ, ಸಂಸ್ಕೃತಿಯ ಅನಾವರಣ ಆಗಲಿದೆ. ಕರ್ನಾಟಕದ ಲಕ್ಕುಂಡಿ ಶಿಲ್ಪಕಲೆಯ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದೆ.
ಈ ಬಾರಿ ಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿ ಘೋಷಣೆಯೊಂದಿಗೆ ಗಣರಾಜೋತ್ಸವ ಆಚರಣೆ ಮಾಡಲಾಗುತ್ತಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸಮ್ಮುಖದಲ್ಲಿ ಪರೇಡ್ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ. 10,000 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ಇದೇ ಮೊದಲಬಾರಿಗೆ 5,000 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
ಪರೇಡ್ನಲ್ಲಿ 15 ರಾಜ್ಯಗಳು, ಕೇಂದ್ರಾಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಂದ ಸ್ತಬ್ಧಚಿತ್ರ ಪ್ರದರ್ಶನ, ಹತ್ತು ಸಾವಿರಕ್ಕೂ ಅಧಿಕ ವಿಶೇಷ ಅತಿಥಿಗಳು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಹಾಗಾಗಿ ಕರ್ತವ್ಯ ಪಥದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, 15,000ಕ್ಕೂ ಅಧಿಕ ಪೊಲೀಸರು, 70 ಪ್ಯಾರಾ ಮಿಲಿಟರಿ ಕಂಪನಿಗಳ ನಿಯೋಜನೆ ಮಾಡಲಾಗಿದೆ.
ಒಟ್ಟು 6 ಹಂತಗಳಲ್ಲಿ ಭದ್ರತೆಯನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ, 500 ಎಐ ಕ್ಯಾಮೆರಾಗಳ ಅಳವಡಿಸಲಾಗಿದೆ. 40 ಅಧಿಕ ಕಂಟ್ರೋಲ್ ರೂಂಗಳಿಂದ ಇಡೀ ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.