ಸುಪ್ರೀಂ ಕೋರ್ಟ್ ಆದೇಶದನ್ವಯ ತ್ವರಿತಗತಿಯಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಿ, ಎ ಜೆ ಸದಾಶಿವ ಆಯೋಗದ ವರದಿಯನ್ನು ತರಿಸಿಕೊಂದು ದತ್ತಾಂಶವನ್ನು ಪರಿಶೀಲಿಸಿ ಶೀಘ್ರವೇ ಸರ್ಕಾರಕ್ಕೆ ವರದಿಯನ್ನು ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಹಾಸನ ಜಿಲ್ಲಾ ಸಮಿತಿ ಹಾಗೂ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದ ಅವರು, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಏಕಸದಸ್ಯ ಆಯೋಗದ ಗೌರವಾನ್ವಿತ ಡಾ. ನಾಗಮೋಹನ ದಾಸ್ ಅವರಿಗೆ ಮನವಿ ಸಲ್ಲಿಸಿದರು.
“ಹಿಂದೆ ಸದಾಶಿವ ಆಯೋಗದ ವರದಿಯನ್ನು ಡಾ. ನಾಗಮೋಹನದಾಸ್ ಏಕಸದಸ್ಯ ಆಯೋಗಕ್ಕೆ ಹಸ್ತಾಂತರಿಸುವಂತೆ ಮತ್ತು ಸದರಿ ಆಯೋಗ ಸರ್ಕಾರಕ್ಕೆ ಪತ್ರ ಬರೆದು ದತ್ತಾಂಶವನ್ನು ಸಂಗ್ರಹಿಸಲು 2025ರ ಜನವರಿ 10ರಿಂದ ಕಾರ್ಯಪ್ರವೃತ್ತವಾಗಿದ್ದು, ನಿಖರವಾದ ದತ್ತಾಂಶ ಎ ಜೆ ಸದಾಶಿವ ಆಯೋಗದ ವರದಿಯಲ್ಲಿದೆ. ಅದನ್ನು ಮುಖ್ಯಂತ್ರಿಗಳಿಗೆ ಪತ್ರ ಬರೆದು ತರಿಸಿಕೊಳ್ಳಬೇಕು. ಮುಖ್ಯಮಂತ್ರಿಗಳು ಕೂಡಲೇ ಸದಾಶಿವ ಆಯೋಗದ ವರದಿಯನ್ನು ಹಸ್ತಾಂತರಿಸಬೇಕೆಂಬುದರ ಅನ್ವಯ ಈಗಾಗಲೇ ಶಾಲಾ, ಕಾಲೇಜು, ವಿಶ್ವವಿದ್ಯಾಲಯ ಮತ್ತು 39 ಇಲಾಖೆಗಳ ದತ್ತಾಂಶವನ್ನು ಪಡೆಯಲು ಆಯೋಗ ಕಾರ್ಯಪ್ರವೃತ್ತವಾಗಿರುವುದು ಶ್ಲಾಘನೀಯ” ಎಂದರು.

“ಕೂಡಲೇ ವರದಿಯನ್ನು ಪಡೆದು ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಬೇಕು. ಮುಖ್ಯಮಂತ್ರಿಗಳು ಕೂಡಲೇ ವರದಿಯನ್ನು ಪಡೆದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ ಬಾಬು ಜಗಜೀವನರಾಮ್ ಜಯಂತಿ ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು, ಅದರ ಒಳಗಾಗಿ ಒಳಮೀಸಲಾತಿ ಜಾರಿಮಾಡಬೇಕು” ಎಂದು ಆಗ್ರಹಿಸಿದರು.
“ಹಾಸನ ಜಿಲ್ಲೆಯ ಎಂಟೂ ತಾಲೂಕುಗಳಲ್ಲಿಯೂ ಮಾದಿಗ, ಪೌರಕಾರ್ಮಿಕ ಜಾತಿ ಮತ್ತು ಉಪಜಾತಿಯವರಿದ್ದು, ಅರಸೀಕೆರೆಯಲ್ಲಿ 8 ಸಮಗಾರ ಕುಟುಂಬಗಳು, 10 ದೊಕ್ಕಲಿಗ ಕುಟುಂಬಗಳು, ಆಲೂರು ತಾಲೂಕಿನಲ್ಲಿ 1 ಮೋಚಿ ಕುಟುಂಬ, ಸಕಲೇಶಪುರದಲ್ಲಿ 3 ಸಮಗಾರ ಕುಟುಂಬಗಳಿದ್ದು, ನಗರ ಪ್ರದೇಶದಲ್ಲಿ ಮಾತ್ರ ಪೌರಕಾರ್ಮಿಕ ಕುಟುಂಬಗಳಿವೆ. ಇವರೆಲ್ಲರೂ ಮಾದಿಗ ಸಂಬಂಧಿತ ಉಪಜಾತಿಗಳೇ ಆಗಿವೆ. ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಮಾದಿಗ ಸಮದಾಯವೇ ಪ್ರಬಲ ಸಂಖ್ಯೆಯಲ್ಲಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ, ಗೊಂದಲವಿರುವುದು ಸತ್ಯ. ಇದರಿಂದ ಮಾದಿಗ ಸಮುದಾಯದ ನಿಖರ ಸಂಖ್ಯೆಯು ಕಡಿಮೆಯಾಗಿರುತ್ತದೆ. ಆದ್ದರಿಂದ ಆಯೋಗ ಸಮಗ್ರವಾಗಿ ಪರಿಶೀಲಿಸಬೇಕು. ಕೂಡಲೇ ವರದಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ಒತ್ತಾಯಿಸಿದರು.
“ಮುಖ್ಯಮಂತ್ರಿಗಳು ಈ ವರದಿಯನ್ನು ಪಡೆದು ಕೂಡಲೇ ಒಳಮೀಸಲಾತಿಯನ್ನು ಜಾರಿ ಮಾಡಿ ನಮ್ಮಲ್ಲಿರುವ ಗೊಂದಲವನ್ನು ಸರಿಪಡಿಸಿ ಪರಿಶಿಷ್ಟ ಜಾತಿಯವರಾದ ನಾವು ಒಗ್ಗಟ್ಟಾಗಿ ಹೋಗಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಮುಖ್ಯಮಂತ್ರಿಗಳು ಹಾಗೂ ನಾಗಮೋಹನದಾಸ್ ಆಯೋಗದ ದತ್ತಾಂಶದ ವರದಿಯನ್ನು ಕೂಡಲೇ ಪಡೆದು ಒಳಮೀಸಲಾತಿ ಜಾರಿಮಾಡಬೇಕು. ಆದಿದ್ರಾವಿಡ ಮತ್ತು ಆದಿಕರ್ನಾಟಕವೆಂದು ನಮ್ಮ ಜಾತಿಯನ್ನು ನಮೂದಿಸದೆ ನಮ್ಮ ಮೂಲ ಜಾತಿಗಳಿಂದ ಅಂದರೆ ಮಾದಿಗ, ದೋಹರ, ಸಮಗಾರ, ದೊಕ್ಕಲಿಗ, ಮೋಚಿ ಇತ್ಯಾದಿ ಹೆಸರುಗಳಿಂದಲೂ ಪ್ರಮಾಣ ಪತ್ರವನ್ನು ನೀಡಬೇಕು. ಆದಿದ್ರಾವಿದ ಮತ್ತು ಆದ ಕರ್ನಾಟಕ ಮೈಸೂರು ವಿಭಾಗದ 9 ಜಿಲ್ಲೆಗಳಲ್ಲಿರುವ ಗೊಂದಲವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

“ಹಾಸನ ಜಿಲ್ಲೆಯಲ್ಲಿ ನಮ್ಮ ಸಮುದಾಯವನ್ನು ಆದಿದ್ರಾವಿಡ(ಮಾದಿಗ)ವೆಂದು ಕರೆಯಲಾಗುತ್ತಿದ್ದು, ಅದೇ ಅರಸೀಕೆರೆ ತಾಲೂಕಿನಲ್ಲಿ ಆದಿ ಕರ್ನಾಟಕ(ಮಾದಿಗ)ವೆಂದು ಕರೆಯಲಾಗುತ್ತಿದೆ. ಈ ಗೊಂದಲವನ್ನೂ ಕೂಡ ಬಗೆಹರಿಸಬೇಕು. ಬೇರೆ ತಾಲೂಕುಗಳಲ್ಲಿಯೂ ಕನಿಷ್ಠ ಒಂದು ಗ್ರಾಮದಲ್ಲಿ 10 ಜನರಾದರೂ ಮಾದಿಗರು ಆದಿ ಕರ್ನಾಟಕವೆಂಬ ಸರ್ಟಿಫಿಕೇಟ್ ಇದ್ದು, ನಮ್ಮ ಸಂಖ್ಯೆ ಕಡಿಮೆಯಾಗಲು ಕಾರಣವಾಗಿರುತ್ತದೆ. ಆದ್ದರಿಂದ ನಮ್ಮ ಮೂಲಜಾತಿಯ ಹೆಸರಿನಿಂದಲೇ ನಮಗೆ ಸರ್ಟಿಫಿಕೇಟ್ ನೀಡಿ ಸದರಿ ಗೊಂದಲವನ್ನು ಬಗೆಹರಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಆಗ್ರಹಿಸಿದರು.
“ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ವರ್ಗೀಕರಣದ ಶಿಫಾರಸನ್ನು ಪರಿಗಣಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ.17ರ ಅನುಪಾತದಲ್ಲಿ ಹೆಚ್ಚುವರಿ ಶೇ.2ರಷ್ಟು ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎ ಬಿ ಸಿ ಡಿ ವರ್ಗೀಕರಣದ ಗುಂಪುಗಳಿಗೆ ಸಮಾನವಾಗಿ ಹಂಚಬೇಕು. ಅದರಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7ರಷ್ಟು ಮೀಸಲಾತಿಯನ್ನು ನಿಗದಿಪಡಿಸಬೇಕು” ಎಂದು ಆಗ್ರಹಿಸಿದರು.
“ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಗಳನ್ನು ತಡೆಹಿಡಿಯಬೇಕು. 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಪ್ರತ್ಯೇಕ ಅಭಿವೃದ್ಧಿಗೆ ನಿಗಮವನ್ನು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸಿಎಸ್ಆರ್ ನಿಧಿಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಅತ್ಯಾಧುನಿಕ ಡಿಜಿಟಲ್ ಶಿಕ್ಷಣ
“ಸಮಾಜ ಕಲ್ಯಾಣ ಇಲಾಖೆಯ ಬಜೆಟ್ನಲ್ಲಿ ಮತ್ತು ಎಸ್ಸಿ/ಎಸ್ಟಿ /ಟಿಎಸ್ಪಿ ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಅದೇ ಅರ್ಥಿಕ ವರ್ಷದಲ್ಲಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಈ ಮೂಲಕ ಮಾದಿಗ ಸಂಘಟನೆ ಮತ್ತು ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಆಗ್ರಹಿಸಿದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ ಆರ್ ವಿಜಯಕುಮಾರ್, ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ಕ ದ ಸಂ ಸ ರಾಜ್ಯ ಸಂಚಾಲಕ ಸೋಮಶೇಖರ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್ ಸೇರಿದಂತೆ ಬಹುತೇಕರು ಇದ್ದರು.