ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE)ರ ಎರಡನೇ ಆವೃತ್ತಿಯ ಸಮಾವೇಶಕ್ಕೆ ರಾಜ್ಯವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸಜ್ಜಾಗಿದ್ದು, ಫೆಬ್ರವರಿ 26 ರಿಂದ 28ರವರೆಗೆ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎರಡನೇ ಆವೃತ್ತಿಯ ಕರ್ಟನ್ ರೈಸರ್, ಬ್ರೋಚರ್ ಮತ್ತು ಲಾಂಛನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, “ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದಲ್ಲದೆ, ಸಮಾಜವನ್ನು ಮೇಲೆತ್ತುವ ಮತ್ತು ಶಾಂತಿ, ಪ್ರಬುದ್ಧತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಪ್ರವಾಸೋದ್ಯಮದ ಅಗಾಧ ಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದೇವೆ” ಎಂದರು.
“ಪ್ರವಾಸೋದ್ಯಮವು ಜನರ ನಡುವೆ, ರಾಜ್ಯಗಳ ನಡುವೆ ದೇಶ-ದೇಶಗಳ ನಡುವೆ, ಸಂಸ್ಕೃತಿಗಳ ನಡುವೆ ಸೌಹಾರ್ದಯುತ ವಾತಾವರಣ ಉಂಟುಮಾಡುತ್ತದೆ. ಪ್ರವಾಸೋದ್ಯಮವು ಸಮಾಜದ ಎಲ್ಲಾ ವರ್ಗಗಳ ಜನರ ನಡುವೆ
ಸೇತುವೆಯಾಗಿ ಕೆಲಸಮಾಡುವ ಶಕ್ತಿ ಹೊಂದಿದೆ. ಜೀವನದ ವಿವಿಧ ದೃಷ್ಟಿಕೋನಗಳನ್ನು ಭಾವನೆಗಳನ್ನು, ಇತರರಿಗೆ ಪರಸ್ಪರ ಗೌರವವನ್ನು ಪ್ರವಾಸವು ಕಲಿಸಿಕೊಡುತ್ತದೆ. ಜೀವನದ ಕಲೆ. ಸಂತೋಷ ನೆಮ್ಮದಿ, ಶಾಂತಿಯನ್ನು ದೇಶಿ-ವಿದೇಶಿ ಪ್ರವಾಸಿಗರು ನಮ್ಮ ರಾಜ್ಯದಲ್ಲಿ ಪಡೆಯುತ್ತಾರೆ” ಎಂದು ಹೇಳಿದರು.
“ಕರ್ನಾಟಕ ಪ್ರವಾಸೋದ್ಯಮ ವಲಯವು ಗಮನಾರ್ಹ ಪರಿವರ್ತನಾ ಪಥದಲ್ಲಿದೆ.ನಮ್ಮ ಸರ್ಕಾರವು ನೂತನ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತಂದಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿಯು ಕರ್ನಾಟಕ ರಾಜ್ಯವನ್ನು ಶಾಂತಿ, ಜ್ಞಾನ ಮತ್ತು ಉನ್ನತಿಯ ಸಂಕೇತವನ್ನಾಗಿ ರೂಪಿಸುವ ನಕಾಶೆಯಾಗಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರ ಮುಖಾಂತರ, ನಾವು ಹೆಚ್ಚಿನ ಸಾಮರಸ್ಯ ಮತ್ತು ಪ್ರಬುದ್ಧ ಸಮಾಜವನ್ನು ನಿರ್ಮಿಸಲು ಬಯಸುತ್ತೇವೆ. ರಾಜ್ಯದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು ಬಂಡವಾಳ ಹೂಡಿಕೆ ಮತ್ತು ಆಕರ್ಷಣೆ, ಕೌಶಲ್ಯಾಭಿವೃದ್ಧಿ ಮೂಲಕ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ನಾವು ಬದ್ಧರಾಗಿದ್ದೇವೆ. ಸಮುದಾಯ ಕೇಂದ್ರಿತ ಉಪಕ್ರಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರವಾಸೋದ್ಯಮ ವಲಯದ ಲಾಭ ನೀಡಬೇಕೆನ್ನುವ ಗುರಿಯನ್ನು ಹೊಂದಿದ್ದೇವೆ. “ಸರ್ವರಿಗೂ ಸಮಪಾಲು, ಸಮಬಾಳು” ಪರಿಕಲ್ಪನೆಯ ಮೂಲಕ ಸಮ ಸಮಾಜದ ನಿರ್ಮಾಣದ ಉದ್ದೇಶವನ್ನು ಹೊಂದಿದ್ದೇವೆ” ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಾಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ, ನಿರ್ದೇಶಕ ಡಾ. ರಾಜೇಂದ್ರ ಕೆ.ವಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.