ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

Date:

Advertisements
ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ ಬಿಟ್ಟರೆ, ಉಳಿದ 55 ವರ್ಷಗಳ ಕಾಲ ಈಶ್ವರ್ ಖಂಡ್ರೆ, ಅವರ ಸಹೋದರ ಮತ್ತು ತಂದೆಯೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೂ, ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಹಾದಿ ತಪ್ಪಿರುವುದು ದುರದೃಷ್ಟಕರ ಸಂಗತಿ.

‘ಅಪ್ಪ ಹಾಕಿದ ಆಲದ ಮರಕ್ಕೆ ಗಂಟು ಬಿದ್ದವ’ರಂತೆ ತಮ್ಮ ತಂದೆಯಿದ್ದ ಪಕ್ಷದಲ್ಲಿ ಗುರುತಿಸಿಕೊಂಡು ತಾವೂ ಬೆಳೆದು, ಪಕ್ಷವನ್ನೂ ಕಟ್ಟಿದವರು ಈಶ್ವರ್ ಖಂಡ್ರೆ. ಬೀದರ್‌ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸತತ ನಾಲ್ಕನೇ ಬಾರಿಗೆ ಗೆದ್ದಿರುವ ಈಶ್ವರ್‌ ಖಂಡ್ರೆ, ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಅರಣ್ಯ ಖಾತೆಯ ಸಚಿವರಾಗಿದ್ದಾರೆ.

ಇಂಜಿನಿಯರಿಂಗ್ ಪದವಿ ಪಡೆದಿರುವ ಈಶ್ವರ್‌ ಖಂಡ್ರೆ, ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಅವರು ಮೂಲತಃ ಭಾಲ್ಕಿಯವರೇ ಆಗಿದ್ದು, ಅವರ ತಂದೆ ಭೀಮಣ್ಣ ಖಂಡ್ರೆ ಭಾಲ್ಕಿಯಲ್ಲಿ ಕಾಂಗ್ರೆಸ್‌ ಅನ್ನು ಕಟ್ಟಿ ಬೆಳೆಸಿದವರು. ಪ್ರಜಾ ಸಮಾಜಮಾದಿ ಪಕ್ಷದಿಂದ ರಾಜಕೀಯ ಆರಂಭಿಸಿದ್ದ ಭೀಮಣ್ಣ ಖಂಡ್ರೆ, 1962ರಲ್ಲಿ ಶಾಸಕರಾಗಿದ್ದರು. 1967ರಲ್ಲಿ ಕಾಂಗ್ರೆಸ್‌ ಸೇರಿದ ಅವರು, ಕೈ ಪಕ್ಷದಿಂದ ಸತತ ನಾಲ್ಕು ಬಾರಿ ಗೆದ್ದು, ಐದನೇ ಅವಧಿಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಭೀಮಣ್ಣ ಖಂಡ್ರೆ ಅವರು 70ರ ದಶಕದಲ್ಲಿ ಸಚಿವರೂ ಆಗಿದ್ದರು.

ಅವರ ಇಬ್ಬರು ಮಕ್ಕಳಲ್ಲಿ ಮೊದಲನೆಯ ಮಗ ವಿಜಯ್‌ ಕುಮಾರ್‌ ಖಂಡ್ರೆ ಕೂಡ ಇದೇ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ, 2004ರಲ್ಲಿ ಕ್ಷೇತ್ರವನ್ನು ತಮ್ಮ ಸಹೋದರ ಈಶ್ವರ್‌ ಖಂಡ್ರೆಗೆ ಬಿಟ್ಟುಕೊಟ್ಟರು. 2004ರಲ್ಲಿ ರಾಜಕೀಯ ಆರಂಭಿಸಿದ ಈಶ್ವರ ಖಂಡ್ರೆ, ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋದರ ಸಂಬಂಧಿ, ಬಿಜೆಪಿಯ ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ವಿರುದ್ಧ ಸೋಲುಂಡರು.

Advertisements

2008ರಲ್ಲಿ ಪ್ರಕಾಶ್‌ ಖಂಡ್ರೆ ಅವರನ್ನು ಮಣಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಎರಡನೇ ಬಾರಿಗೆ ಗೆದ್ದ ಖಂಡ್ರೆ ಅವರು ಅಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ, 2016ರಲ್ಲಿ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವರಾಗಿದ್ದರು. ಬೀದರ್‌ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು. ಜಿಲ್ಲೆಯಲ್ಲಿ ಅವರ ಪ್ರಭಾವ ಹೆಚ್ಚಿದ್ದು, 2018ರ ಮತ್ತೊಮ್ಮೆ ಗೆಲುವು ಸಾಧಿಸಿ, ಹ್ಯಾಟ್ರಿಕ್‌ ಹೊಡೆದಿದ್ದರು. ಮಾತ್ರವಲ್ಲದೆ, ಜಿಲ್ಲೆಯ 6 ಕ್ಷೇತ್ರಗಳ ಪೈಕಿ, ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರ ಸತತ ಮೂರು ಸುದೀರ್ಘ ಗೆಲುವು ಮತ್ತು ವರ್ಚಸ್ಸನ್ನು ಕಂಡ ಕಾಂಗ್ರೆಸ್‌ ಹೈಕಮಾಂಡ್‌, 2018ರಲ್ಲಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಅಲ್ಲದೆ, ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

2023ರಲ್ಲಿ ಅವರನ್ನು ಮಣಿಸಲು ಬಿಜೆಪಿಯ ಪ್ರಮುಖ ಮುಖಂಡರಾದ ಪ್ರಕಾಶ್‌ ಖಂಡ್ರೆ ಮತ್ತು ಡಿ.ಕೆ ಸಿದ್ರಾಮು ಅವರು ಭಾರೀ ಕಸರತ್ತು ನಡೆಸಿದ್ದರು. ಈ ಬಾರಿ ಬಿಜೆಪಿ ಮತ್ತೆ ಪ್ರಕಾಶ್‌ ಖಂಡ್ರೆ ಅವರಿಗೇ ಟಿಕೆಟ್ ನೀಡಿತ್ತು. ಆದರೂ, ಈಶ್ವರ್‌ ಖಂಡ್ರೆ ನಾಲ್ಕನೇ ಬಾರಿಗೆ ಗೆದ್ದು ಬೀಗಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಅರಣ್ಯ ಖಾತೆಯನ್ನು ನಿಭಾಯಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಮೌಢ್ಯವನ್ನು ಮೆಟ್ಟಿ ಗೆಲ್ಲುತ್ತಿರುವ ಸತೀಶ್ ಜಾರಕಿಹೊಳಿ

ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ ಬಿಟ್ಟರೆ, ಉಳಿದ 55 ವರ್ಷಗಳ ಕಾಲ ಈಶ್ವರ್ ಖಂಡ್ರೆ, ಅವರ ಸಹೋದರ ಮತ್ತು ತಂದೆಯೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ, ಈ ಪೈಕಿ ಬಹುತೇಕ ಅವಧಿಗಳಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೂ, ಕ್ಷೇತ್ರವು ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಾಗದೇ ಇರುವುದು ದುರದೃಷ್ಟಕರ. ಖಂಡ್ರೆ ಕುಟುಂಬಕ್ಕೆ ಜನರು ಮಣೆ ಹಾಕುತ್ತಿದ್ದರೂ, ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆಯ ಗಡಿ ತಾಲೂಕಾಗಿರುವ ಭಾಲ್ಕಿ, ಎಲ್ಲ ಸರ್ಕಾರಗಳಲ್ಲಿಯೂ ಮಲತಾಯಿ ಧೋರಣೆಗೆ ಒಳಗಾಗಿದೆ. ಇಂದಿಗೂ ಉತ್ತಮ ರಸ್ತೆ, ಕುಡಿಯುವ ನೀರು, ಉತ್ತಮ ಆರೋಗ್ಯ ಸೌಲಭ್ಯಗಳು ಹಾಗೂ ಮೂಲ ಸೌಕರ್ಯಗಳಿಲ್ಲದೆ ಭಾಲ್ಕಿ ಹೆಣಗಾಡುತ್ತಿದೆ. ಬೀದರ್ ಜಿಲ್ಲೆಯ ರೈತರು ತೊಗರಿ ಮತ್ತು ಕಬ್ಬು ಬೆಳೆಯುತ್ತಿದ್ದಾರೆ. ಆದರೆ, ಇತ್ತೀಚೆಗೆ ಎದುರಾದ ನೆಟೆ ರೋಗದಿಂದ ತೊಗರಿ ಹಾಳಾಗಿ, ರೈತರು ನಷ್ಟ ಅನುಭಿವಿಸಿದ್ದಾರೆ. ಇನ್ನು ಕಬ್ಬು ಬೆಳೆಯುವವರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರು ಆರು ತಿಂಗಳ ಕಾಲ ತಮ್ಮ ಹಣಕ್ಕಾಗಿ ಕಾಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಭಾಲ್ಕಿ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳು ನೀರಾವರಿ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿವೆ. 30-40 ವರ್ಷಗಳಿಂದ ಕಾರಂಜಾ ಮುಳುಗಡೆ ಸಂತ್ರಸ್ತರು ಪರಿಹಾರಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.  ಇದೆಲ್ಲದರ ನಡುವೆ ಜಿಲ್ಲೆಯ ಯುವಜನರು ನಿರುದ್ಯೋಗದಿಂದಾಗಿ ಜಿಲ್ಲೆ ತೊರೆದು ಬೆಂಗಳೂರು ಹಾಗೂ ಇತರ ರಾಜ್ಯಗಳ ಪ್ರಮುಖ ನಗರಗಳಿಗೆ ವಲಸೆ ಹೋರಟಿದ್ದಾರೆ. ಇಂತಹ ಸಂದರ್ಭದಲ್ಲಿ, ಎರಡನೇ ಬಾರಿಗೆ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ಕ್ಷೇತ್ರವನ್ನು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯವರೇ, ತಮ್ಮ ಕಷ್ಟಗಳನ್ನು ನೀಗಿಸುವರೇ ಎಂದು ಕ್ಷೇತ್ರದ ಮತ್ತು ಜಿಲ್ಲೆಯ ಜನರು ಎದುರು ನೋಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X