ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥರ ಪಠ್ಯ ಪುಸ್ತಕಗಳಿಂದ ಉತ್ತಮ ಅಲೋಚನೆಗಳು ಬರಲು ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಭಿಪ್ರಾಯಪಟ್ಟರು
ತುಮಕೂರು ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಕೋಚಿಂಗ್ ಸೆಂಟರ್ ದಶಮಾನೋತ್ಸವ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೈನರಿ ರಾಜಕೀಯದಲ್ಲಿ ಬಲ ಪಂಥೀಯ ಪಠ್ಯ, ಎಡ ಪಂಥೀಯ ಪಠ್ಯ ಎಂದು ಇವೆ. ಅದರೆ ಇವುಗಳಿಂದ ಸತ್ಯದ ಅಲೋಚನೆ ಬರಲು ಸಾಧ್ಯವಿಲ್ಲ. ಬದಲಾಗಿ ಸೀಮಿತ ಅಲೋಚನೆ ಬರಲು ಸಾಧ್ಯ. ಹಾಗಾಗಿ ಸತ್ಯ ಇತಿಹಾಸವಿರುವ ಸಮಸಮಾಜದ ಪಠ್ಯಗಳನ್ನು ಜನರ ಮುಂದೆ ಇಡಬೇಕಿದೆ ಎಂದರು.
ಎಡ ಮತ್ತು ಬಲ ಪಂಥಗಳು ನ್ಯಾಯಕ್ಕಾಗಿ ನಿಂತಿರುವ ಐಡಿಯಾಲಜಿಗಳು. ಬಲ ಪಂಥ ಅವೈಜ್ಞಾನಿವಾಗಿ ಸತ್ಯವನ್ನು ವ್ಯಾಖ್ಯಾನಿಸುತ್ತ ವೈಜ್ಞಾನಿಕತೆ ಇಲ್ಲದ ಕಥೆಗಳನ್ನು ಕಟ್ಟಿ ದ್ವೇಷವನ್ನು ಹುಟ್ಟಿಸುತ್ತಿದೆ. ಎಡ ಪಂಥ ಬಂಡವಾಳಶಾಹಿ ನಮ್ಮ ಶತ್ರು ಎಂದು ಹೇಳುತ್ತಿದೆ. ಇದು ಒಂದು ಸೀಮಿತ ಅಲೋಚನೆ. ಭಾರತ ದೇಶದಲ್ಲಿ ಬಂಡವಾಳಶಾಹಿ ಜೊತೆ, ಪುರುಷ ಪ್ರಧಾನ ವ್ಯವಸ್ಥೆಯಿದೆ. ಬ್ರಾಹ್ಮಣ್ಯ ಜಾತಿ ವ್ಯವಸ್ಥೆಯಿದೆ. ಸಾಂಸ್ಕೃತಿಕ ತಾರತಮ್ಯವಿದೆ. ಆಧ್ಯಾತ್ಮಿಕ ದಾಳಿ ನಡೆದಿದೆ. ಈ ಎಲ್ಲವನ್ನು ಗುರುತಿಸಿ ಈ ಅನ್ಯಾಯಗಳನ್ನು ಕಿತ್ತು ಹಾಕುವ ಮನಸ್ಥಿತಿ ಇರಬೇಕು. ಈ ದೃಷ್ಠಿಯಲ್ಲಿ ಎಡ ಪಂಥೀಯ ನ್ಯಾಯ ಸೀಮಿತ ನ್ಯಾಯವಾಗಿದೆ. ಹಾಗಾಗಿ ಎಡ ಪಂಥ, ಬಲ ಪಂಥ, ಮಧ್ಯ ಪಂಥ ಅಲ್ಲ, 20 ನೇ ಶತಮಾನದಲ್ಲಿ ಹೋರಾಡಿದ ಅಂಬೇಡ್ಕರ್, ತಂದೆ ಪೆರಿಯಾರ್, ಕಾನ್ಶಿ ರಾಮ್ ಅಂಥವರ ಸತ್ಯ ಪಂಥ ನಮ್ಮದು. ಅಸಮಾನತೆ ಮತ್ತು ಅನ್ಯಾಯ ನಮ್ಮ ಶತ್ರುಗಳು. ಇವುಗಳನ್ನು ಸತ್ಯ ಪಂಥದಿಂದ ದೂರ ಮಾಡಬಹುದು ಎಂದರು.
ಸಂವಿಧಾನ ಜಾಥಾ ಮಾಡುವವರು, ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಕಂಠಪಾಠ ಮಾಡಿಸುವವರು, ಸಂವಿಧಾನ ಪೀಠಿಕೆಯ ಟೀ ಶಾರ್ಟ್ ಹಾಕಿಕೊಳ್ಳುವವರು ಸಂವಿಧಾನ ಎತ್ತಿ ಹಿಡಿದಿಲ್ಲ. ಯಾರು ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೋ ಅವರು ಸಂವಿಧಾನ ಎತ್ತಿ ಹಿಡಿದ್ದಾರೆ ಎಂದರು.
ಹಿರಿಯ ಹೋರಾಟಗಾರ ದೊರೆರಾಜು ಮಾತನಾಡಿ ಶಿಕ್ಷಣ, ಉದ್ಯಮವಾದ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯದಿಂದ ಬರುವವರು ಶಿಕ್ಷಣ ಪಡೆಯಲು, ಉದ್ಯೋಗ ಪಡೆಯಲು ಸ್ಪರ್ಧೆ ಮಾಡುವಂತಾಗಿದೆ. ಹೀಗಾಗಿ ತುಮಕೂರಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವಂತೆ ಹಲವು ಬಾರಿ ಅಧಿಕಾರಸ್ಥರ ಬಳಿ ಮನವಿ ಮಾಡಿದರು ಕಾರ್ಯರೂಪಕ್ಕೆ ಬಂದಿಲ್ಲ ಎಂದರು
ಪ್ರಸ್ತುತ ತರಬೇತಿ ಕೇಂದ್ರದಲ್ಲೂ ಸ್ಪರ್ಧೆ ಇದೆ. ತುಮಕೂರಿನಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಅಗತ್ಯವಿದೆ. ಇನ್ನಾದರು ಈ ಕೆಲಸ ಆಗಬೇಕು. ಗುಣಮಟ್ಟದ ತರಬೇತಿ ನೀಡಬೇಕು. ಪ್ರಸ್ತುತ ಯುವಜನತೆ ಬುದ್ದಿವಂತರಾಗಿದ್ದಾರೆ. ಅದರೆ ವರ್ತಮಾನ ಗ್ರಹಿಸುತ್ತಿಲ್ಲ. ವರ್ತಮಾನ ಗ್ರಹಿಸಿದರೆ ಮಾತ್ರ ಭವಿಷ್ಯ ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅಕ್ಕ ಐಎಎಸ್ ಅಕಾಡಮಿ ನಿರ್ದೇಶಕ ಶಿವಕುಮಾರ್, ಉಪನ್ಯಾಸಕ ಕೊಟ್ಟಶಂಕರ್, ಡಾ. ಬಿ. ಆರ್. ಅಂಬೇಡ್ಕರ್ ಶೈಕ್ಷಣಿಕ, ಸಾಮಾಜಿಕ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ. ಜೆ. ಜಯಶೀಲ್, ತುಮಕೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಸ್. ಗುಂಡೂರ, ಕಂಟಲಗೆರೆ ಸಣ್ಣಹೊನ್ನಯ್ಯ, ದಲಿತ ಸಾಹಿತ್ಯ ಪರೀಷತ್ ನ ಗಣಪತಿ ಗೋ ಚನ್ನಸ್ವಾಮಿ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಪವನ ಗಂಗಾಧರ್,ಡಾ. ಬಿ ಆರ್ ಅಂಬೇಡ್ಕರ್ ಕೋಚಿಂಗ್ ಸೆಂಟರ್ ನಿರ್ದೇಶಕ ನಾಗರಾಜ್ ಇನ್ನಿತರರು ಇದ್ದರು.