ಫೆಬ್ರವರಿ 16ರಂದು ದಾವಣಗೆರೆಯಲ್ಲಿ ಸ್ವಾಭಿಮಾನಿ ಬಳಗದ ವತಿಯಿಂದ ವಿಚಾರ ಸಂಕ್ರಾಂತಿ ಕಾರ್ಯಕ್ರಮ ಹಾಗೂ ‘ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ?’ ಎನ್ನುವ ವಿಶೇಷ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ ಬಿ ವಿನಯ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾರ್ಯಕ್ರಮದಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ಜಯದೇವ ವೃತ್ತದಲ್ಲಿನ ಶ್ರೀ ಶಿವಯೋಗ ಮಂದಿರ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿರಕ್ತಮಠದ ಶ್ರೀ ಬಸವಪ್ರಭು ಮಹಾಸ್ವಾಮೀಜಿ, ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಚೆನ್ನಪ್ಪಸ್ವಾಮಿ ಒಡೆಯರ್ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ, ಪ್ರಜ್ಞಾವಂತ ಹೋರಾಟಗಾರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.
“ಒಟ್ಟು 282 ಪ್ರಬಂಧಗಳು ಸ್ವೀಕೃತಗೊಂಡಿದ್ದು, ಬಹುತೇಕ ಪ್ರಬಂಧಗಳು ಕುಟುಂಬ ರಾಜಕಾರಣದ ವಿರುದ್ಧವೇ ಬಂದಿವೆ. ಮೂರು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮೂವರಿಗೆ ಮೊದಲ ಬಹುಮಾನವಾಗಿ ₹20 ಸಾವಿರ, ದ್ವಿತೀಯ ಬಹುಮಾನ ಮೂವರಿಗೆ ₹15 ಸಾವಿರದಂತೆ ಬಹುಮಾನ ನೀಡಲಾಗುವುದು. ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಅಕ್ರಮ ಮಣ್ಣು ಮಾಫಿಯಾಕ್ಕೆ ಬಲಿಯಾದ ಸ್ಮಶಾನ
ಸುದ್ದಿಗೋಷ್ಠಿಯಲ್ಲಿ ಬಳಗದ ಶಿವಕುಮಾರ್ ಶೆಟ್ಟರ್, ವಿರೂಪಾಕ್ಷಪ್ಪ ಪಂಡಿತ್, ಎಸ್ ಎಂ ಸಿದ್ದಲಿಂಗಪ್ಪ, ಮೊಹಮದ್ ಸಾಧಿಕ್, ಚಂದ್ರಶೇಖರ್ ಹಾಗೂ ಇನ್ನಿತರರು ಹಾಜರಿದ್ದರು.
