ಕ್ರಿಯೇಟಿವ್ ಎಕಾನಮಿಯೇ ಭಾರತದ ಭವಿಷ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿಪ್ರಾಯವೂ ಕೂಡ ಅದೇ ಆಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ ಎಲ್ ಮುರುಗನ್ ಅಭಿಪ್ರಾಯಪಟ್ಟರು.
ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಎನ್ಎಫ್ಡಿಸಿ ಮುಖಾಂತರ ದೇಶದ ಮನರಂಜನಾ ಉದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದು, ಕ್ರಿಯೇಟಿವ್ ಎಕಾನಮಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಮುಂಬೈನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಎವಿಜಿಸಿ ಪ್ರಾರಂಭಿಸಲಾಗುತ್ತಿದೆ” ಎಂದು ತಿಳಿಸಿದರು.
“ಪ್ರಸ್ತುತ ಓಟಿಟಿ ಯುಗದಲ್ಲಿ ಸಿನಿಮಾ ಉದ್ಯಮವು ಹಿಂದಿಗಿಂತಲೂ ಅತಿ ಕಡಿಮೆ ಅವಧಿಯಲ್ಲಿ ಹಲವು ಪಟ್ಟು ಬೆಳವಣಿಗೆ ಸಾಧಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಉದ್ಯಮವು ಸದಾ ಸಮಾಜದ ಹಿತ ಮತ್ತು ದೇಶದ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡೆ ಮುನ್ನಡೆಯಬೇಕು” ಎಂದು ಚಿತ್ರೋದ್ಯಮಿಗಳಿಗೆ ಕಿವಿಮಾತು ಹೇಳಿದರು.

“ಇಡೀ ವಿಶ್ವದಲ್ಲೇ ಭಾರತೀಯ ಚಲನಚಿತ್ರಗಳು ಮೇಕಿಂಗ್, ತಂತ್ರಜ್ಞಾನ, ಕಥೆಗಳಿಂದ ಸದ್ದು ಮಾಡುತ್ತಿವೆ. ಕನ್ನಡದ ಕಾಂತಾರ, ತೆಲುಗಿನ ಆರ್ಆರ್ಆರ್, ಬಾಹುಬಲಿ ಮುಂತಾದ ಚಲನಚಿತ್ರಗಳು ವಿಶ್ವ ಮಟ್ಟಕ್ಕೆ ಜನಪ್ರಿಯತೆ ಗಳಿಸಿ ಭಾರತೀಯ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದಿವೆ. ಈ ಮೊದಲು ಸಿನಿಮಾ ಚಿತ್ರೀಕರಣದ ಅನುಮತಿಗಾಗಿ ಇಲಾಖೆಯಿಂದ ಇಲಾಖೆಗೆ ಅಲೆಯಬೇಕಾದ ಅನಿವಾರ್ಯತೆಯಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ಕುಳಿತಲ್ಲೇ ಆನ್ ಲೈನ್ ಮೂಲಕ ಎಲ್ಲಾ ಇಲಾಖೆಗಳ ಅನುಮತಿ ಪಡೆಯುವ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಭಾರತವು ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲಿ ಕಥೆಗಳ ಆಗರವೆನಿಸಿದೆ. ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದ್ದು, ಭಾರತದಲ್ಲಿ ನಿರ್ಮಿತ ಸಿನಿಮಾಗಳು ಕೂಡ ಈಗ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ ಬದಲಾಗಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿವೆ” ಎಂದು ಸಂತಸ ವ್ಯಕ್ತಪಡಿಸಿದರು.
“ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ ಘೋಷಣೆ ಮಾಡಿದ್ದರು. ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದ್ದು. ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಲಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಿನಿಮಾ ಉದ್ಯಮಕ್ಕೆ ಕಾಲಿಡಲು ಬಯಸುವ ಯುವ ಸಿನಿ ಪ್ರೇಮಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದರು.
ಪ್ರಸ್ತುತ ಹಾಲಿವುಡ್ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಮೈಸೂರು ಸಿನಿಮಾ ಸೊಸೈಟಿ ಮತ್ತು ಪರಿದೃಶ್ಯ ಚಿತ್ರೋತ್ಸವದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಅಲ್ಪ ಕಾಲದಲ್ಲೇ ಮೈಸೂರು ಸಿನಿಮಾ ಸೊಸೈಟಿ ಬೆಳೆದ ಪರಿ, ಸೊಸೈಟಿಯವರ ಶ್ರಮವನ್ನು ಪ್ರಶಂಸಿಸಿದರು.
ನಟ, ನಿರ್ದೇಶಕ ಸುನಿಲ್ ಪುರಾಣಿಕ್ ಮಾತನಾಡಿ, “ಈ ರೀತಿಯ ಚಟುವಟಿಕೆಗಳಿಂದಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತೊಮ್ಮೆ ಚಿತ್ರ ನಿರ್ಮಾಣದ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ಮೈಕ್ರೋ ಫೈನಾನ್ಸ್ಗಳ ದೌರ್ಜನ್ಯ ಖಂಡಿಸಿ ಮಹಿಳಾ ಸಂಘಟನೆಗಳ ಪ್ರತಿಭಟನೆ
ವೇದಿಕೆಯಲ್ಲಿ ಸಾಮಾಜಿಕ ಉದ್ಯಮಿ ಡಾ ಜಗನ್ನಾಥ ಶೆಣೈ, ಮೈಸೂರು ಸಿನಿಮಾ ಸೊಸೈಟಿಯ ಅಧ್ಯಕ್ಷ ಡಾ ಚಂದ್ರಶೇಖರ್ ಜಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಹಾಗೂ ಇತರರು ಇದ್ದರು.
