ಮೊದಲು ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸಬೇಕೆಂಬ ಕಾನೂನು ಜಾರಿಯಾಗಬೇಕು.
ಆಧುನಿಕ ದಿನಮಾನಗಳಲ್ಲಿ ರಾಜಕಾರಣಿಗಳು, ಹೆಸರಾಂತ ವ್ಯಕ್ತಿಗಳು, ಹೋರಾಟಗಾರರು ಸರ್ಕಾರಿ ಶಾಲೆಗಳನ್ನು ಉಳಿಸಿ, ಸರ್ಕಾರಿ ಶಾಲೆಗಳನ್ನು ಬೆಳೆಸಿ ಎಂಬ ಮಾತುಗಳನ್ನಾಡುವುದನ್ನು ನಾವು ಕೇಳಿದ್ದೇವೆ. ಆದರೆ, ಇವರುಗಳು ಮಾಡುತ್ತಿರುವುದಾದರೂ ಏನು? ಶಾಲೆಗಳ ಅಭಿವೃದ್ಧಿಯನ್ನು ಯಾರು ಮಾಡಬೇಕು? ಹೇಗೆ ಮಾಡಬೇಕು? ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೆಲಸಗಳಲ್ಲಿ ನಮ್ಮ ಪಾತ್ರ ಹೇಗಿರಬೇಕು ಎಂಬ ಅರಿವೇ ಇಲ್ಲದೆ ಸರ್ಕಾರಿ ಶಾಲೆಗಳ ಪ್ರಗತಿಯ ಕುರಿತು ಮಾತನಾಡುತ್ತಿದ್ದಾರೆ.
ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಸರ್ಕಾರಿ ಶಾಲೆಯ ಒಳಿತನ್ನು ಬಯಸುತ್ತಿದ್ದೇವೆ ಎಂದು ನಟಿಸುವ ಇವರುಗಳು, ಅವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದಾರೆಯೇ?, ಇಲ್ಲ. ಸರ್ಕಾರಿ ಕೆಲಸ ಬೇಕು, ಸರ್ಕಾರದ ಸೌಲಭ್ಯ ಬೇಕು, ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಬೇಡ. ಇದಕ್ಕೆ ಕಾರಣ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆ ಮತ್ತು ದೋಷಪೂರಿತ ಶಿಕ್ಷಣದ ಕುರಿತು ಇವರುಗಳು ಈಗಾಗಲೇ ಅರಿತಿರುವುದು.
ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು ತಮ್ಮದೇ ಆದ ಖಾಸಗಿ ಶಾಲೆಗಳಿಗೆ ಒತ್ತು ನೀಡುತ್ತಿರುವುದಷ್ಟೇ ಅಲ್ಲದೆ, ಮೂಲಭೂತ ಸೌಕರ್ಯಗಳು, ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಹಣದ ಲೂಟಿಯಲ್ಲಿ ಆಸಕ್ತರಾಗಿದ್ದಾರೆ. ವೈಯಕ್ತಿಕ ಬೆಳವಣಿಗೆಯತ್ತ ಮುಖ ಮಾಡಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ದಿ ಕುರಿತು ಮಾತನಾಡುವ ಇಂತಹವರು ತಮ್ಮ ಮಕ್ಕಳನ್ನು ಅದೇ ಸರ್ಕಾರಿ ಶಾಲೆಗಳಲ್ಲಿ ಓದಿಸುವ ಮನಸ್ಸು ಮಾಡಬೇಕು. ಖಾಲಿ ಮಾತುಗಳನ್ನಾಡುವ ಹಣವಂತರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿಗೊಳಿಸುವತ್ತ ಗಮನಹರಿಸಿ ಮೂಲಭೂತ ಸೌಕರ್ಯಗಳು, ಉತ್ತಮ ಕುರ್ಚಿಗಳು, ಬೆಂಚುಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ವ್ಯವಸ್ಥೆ, ಉತ್ತಮ ರೀತಿಯಲ್ಲಿ ಶಿಕ್ಷಕರಿಗೆ ತರಬೇತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾರ್ಪಾಡು ಮಾಡಬಹುದಲ್ಲವೇ?.
ಇತ್ತೀಚೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವ ರಾಜಕಾರಣಿಯೊಬ್ಬರು ತಮಗೆ ಬರುವ ವೇತನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನ ಮಾಡುತ್ತಿದ್ದಾರೆ. ಹುಟ್ಟೂರಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಯನ್ನು ಕಟ್ಟಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಮ್ಮ ಹುಟ್ಟು ಹಬ್ಬಕ್ಕೊಂದು ಸರ್ಕಾರಿ ಶಾಲೆಗೆ ಮರುಹುಟ್ಟು ನೀಡುವ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತ ಕೆಲಸಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಇವರ ಮಾದರಿಯಲ್ಲಿ ಪ್ರತಿಯೊಬ್ಬರೂ ನಡೆದಾಗ ಸರ್ಕಾರಿ ಶಾಲೆ, ಮಾದರಿ ಶಾಲೆ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಇದರ ಜತೆಗೆ ನಮ್ಮ ರಾಜ್ಯದಲ್ಲಿ ಮೊದಲು ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸಬೇಕೆಂಬ ಕಾನೂನು ಜಾರಿಯಾಗಬೇಕು. ಆಳುವ ವರ್ಗದವರಿಂದ ಬದಲಾವಣೆಗಳು ಮೊದಲು ಆರಂಭವಾದರೆ ಪ್ರಜೆಗಳು ಇದನ್ನು ಅನುಕರಣೆ ಮಾಡುವುದು ನಿಸ್ಸಂದೇಹ.
ಬರಹ : ಮೇಘನಾ ಯು ಶಂಕರಘಟ್ಟ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಕುವೆಂಪು ವಿವಿ.