ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐದು ಜನ ಮೃತಪಟ್ಟಿರುವ ದಾರುಣ ಘಟನೆ ಸುರಪುರ ತಾಲ್ಲೂಕಿನ ತಿಂಥಣಿ ಬಳಿ ಬುಧವಾರ ಮಧ್ಯಾಹ್ನ ಜರುಗಿದೆ.
ಶಹಾಪುರದ ಹಳಿಸಗರ ನಿವಾಸಿಗಳಾದ ಆಂಜನೇಯ (35), ಗಂಗಮ್ಮ(28) ಮತ್ತು ಅವರ ಪುತ್ರ 1 ವರ್ಷದ ಹನುಮಂತು ಮತ್ತು ಅಂಜನೇಯ ಅವರ ಸಹೋದರನ ಮಕ್ಕಳಾದ ಪವಿತ್ರ(5) ಮತ್ತು ರಾಯಪ್ಪ(3) ಮೃತರು ಎಂದು ತಿಳಿದುಬಂದಿದೆ.
ತಿಂಥಣಿ ಗ್ರಾಮದ ಕಮಾನ್ ಸಮೀಪ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಲಿಂಗಸೂಗೂರು ಕಡೆಯಿಂದ ಚಿಂಚೋಳಿ ಕಡೆಗೆ ಹೊರಟಿದ್ದ ಬಸ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಎದುರಿನಲ್ಲಿ ಚಲಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ದಂಪತಿ ಹಾಗೂ ಮೂವರು ಮಕ್ಕಳು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.