ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ವೇತನವನ್ನು ಕನಿಷ್ಟ ₹30,000 ಹೆಚ್ಚಳ ಮಾಡುವಂತೆ ಹಾಗೂ ಅದಕ್ಕಾಗಿ ಮುಂದಿನ ಬಜೆಟ್ನಲ್ಲಿ ಅನುದಾನ ನಿಗದಿಪಡಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಮನವಿ ಸಲ್ಲಿಸಿತು.
“ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸುಮಾರು 4,659ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಮಾಸಿಕ ₹12,000 ದಂತೆ ವೇತನ ಪಡೆಯುತ್ತಿದ್ದಾರೆ. ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಸಿಗುವ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟ. ಇನ್ನು ಅತಿಥಿ ಉಪನ್ಯಾಸಕರು ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಸಾಕಷ್ಟು ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಅತಿಥಿ ಉಪನ್ಯಾಸಕರ ಜೀವನದ ಎತ್ತಿನ ಬಂಡಿಯ ಹಗ್ಗ-ಜಗ್ಗಾಟ ಹಳ್ಳ ಹಿಡಿಯುತ್ತಿದೆ. ರಾಜ್ಯದ ನೂರಾರು ಕಾಲೇಜುಗಳು ಅತಿಥಿ ಉಪನ್ಯಾಸಕರಿಲ್ಲದೆ ನಡೆಯುವುದೇ ಕಷ್ಟ, ಕಾಲೇಜುಗಳಲ್ಲಿ ದ್ವಿತೀಯ ದರ್ಜೆ ಸಹಾಯಕನಿಗೆ ಕೊಡುವಂತ ಸಂಬಳಕ್ಕಿಂತಲೂ ಕಡಿಮೆ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಸಮಾಜದಲ್ಲಿ ಅತಿಥಿ ಉಪನ್ಯಾಸಕರೂ ಗೌರವಯುತ ಬದುಕು ನಡೆಸಲು ಅನುವು ಮಾಡಿಕೊಡಬೇಕು” ಎಂದು ಮನವಿ ಮಾಡಲಾಯಿತು.
“ಹಲವು ವರ್ಷಗಳಿಂದ ಈ ಕುರಿತು ಹೋರಾಟಗಳ ಮೂಲಕ ಸಮಸ್ಯೆಗಳನ್ನು ಗಮನಕ್ಕೆ ತರಲಾಗಿದೆ. ಆದರೆ ಯಾವ ಸರ್ಕಾರವೂ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ ರಾಜ್ಯದ ಅನೇಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅನೇಕ ಬೋಧನಾ ಹುದ್ದೆಗಳಿಗೆ ಖಾಯಂ ಉಪನ್ಯಾಸಕರು ಇಲ್ಲದೇ ಅತಿಥಿ ಉಪನ್ಯಾಸಕರಿಂದಲೇ ತರಗತಿಗಳು ನಡೆಯುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಖಾಯಂ ಉಪನ್ಯಾಸಕರಿಗಿಂತಲೂ ಹೆಚ್ಚು ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಿಸುವುದು ನ್ಯಾಯ ಸಮ್ಮತವಾಗಿದೆ. ಹಾಗಾಗಿ ಮುಂಬರುವ ಬಜೆಟ್ನಲ್ಲಿ ಅನುದಾನ ನಿಗದಿಪಡಿಸಬೇಕು” ಎಂದು ಒತ್ತಾಯಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ನಾಳೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ?
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಪದ್ಮಪ್ರಭ ಇಂದ್ರ, ಉಪಾಧ್ಯಕ್ಷ ರಾಜೇಶ್ ಭಟ್ ಪಿ, ಜಂಟಿ ಕಾರ್ಯದರ್ಶಿ ಎಸ್ ಜಿ ನಾಗರತ್ನ, ಅಶ್ವಿನಿ ಕೆ ಎಸ್, ಶಿಕ್ಷಣ ತಜ್ಞ ವಿ ಎನ್ ರಾಜಶೇಖರ್, ನಿವೃತ್ತ ಪ್ರಾಚಾರ್ಯ ಬೈರೇಗೌಡ, ಕಾರ್ಯಕಾರಿಣಿ ಸಮಿತಿ ಸದಸ್ಯ ಸುಧೀರ್ ಕುಮಾರ್, ಜಗದೀಶ್, ಸುಲತಾ, ಭರತ್ ಕುಮಾರ್, ತಾರಾಸಿಂಗ್, ಸತೀಶ್, ಸದಾಶಿವ ಮುರುಗೋಡು, ವಾಸು, ಗುರುರಾಜ್, ಮಮತಾ, ನಿತ್ಯಾನಂದ, ಶಂಕರ್ ಪೂಜಾರಿ, ಸುಮಿತ್ರಾ, ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.
