ಸಾವಿರಾರು ನೋಂದಾಯಿತ ಪ್ರಯಾಣಿಕರ ಬಸ್ಗಳಲ್ಲಿ ಪರವಾನಗಿ ಪಡೆಯದ ಕಂಡಕ್ಟರ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಛತ್ತೀಸ್ಗಢ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಾಗಿದೆ. ಈ ಪ್ರಕರಣವನ್ನು ಗಂಭೀರ ವಿಷಯವೆಂದು ಪರಿಗಣಿಸಿರುವ ಛತ್ತೀಸ್ಗಢ ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಲು ಸಮ್ಮತಿ ನೀಡಿದ್ದು, ವಿಚಾರಣೆ ಆರಂಭಿಸಿದೆ.
ಛತ್ತೀಸ್ಗಢದಲ್ಲಿ ಒಟ್ಟು 68,396 ನೋಂದಾಯಿತ ಪ್ರಯಾಣಿಕ ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಬಸ್ಗಳಿಗೆ ಮಾತ್ರವೇ ಪರವಾನಗಿ ಪಡೆದ ಕಂಡಕ್ಟರ್ಗಳನ್ನು ನೇಮಿಸಿಕೊಳ್ಳಲಾಗಿದ್ದು, ಹಲವರು ಪರವಾನಗಿ ಇಲ್ಲಿದೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅರ್ಜಿದಾರ ವಿನೇಶ್ ಚೋಪ್ರಾ ಆರೋಪಿಸಿದ್ದಾರೆ.
“ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕ ಬಸ್ಗಳು ಪರವಾನಗಿ ಪಡೆದ ಕಂಡಕ್ಟರ್ಗಳಿಲ್ಲದೆ ಚಲಿಸುತ್ತಿವೆ. ಇದು ಕಾನೂನಿನ ನಿಬಂಧನೆಗಳು ಮತ್ತು ಪ್ರಯಾಣಿಕರು, ಸಾರ್ವಜನಿಕರು ಮತ್ತು ಚಾಲಕರ ಸುರಕ್ಷತೆಗೆ ವಿರುದ್ಧವಾಗಿದೆ. ವಯಸ್ಸಾದ ನಾಗರಿಕರು, ಮಕ್ಕಳು, ಮಹಿಳೆಯರು, ಅನಾರೋಗ್ಯ ಪೀಡಿತರು ಮತ್ತು ಇತರ ಪ್ರಯಾಣಿಕರು ಇದರಲ್ಲಿ ಸಂಚರಿಸುತ್ತಾರೆ. ಅವರ ಸುರಕ್ಷತೆ ಮತ್ತು ಅನುಕೂಲಕರ ಪ್ರಯಾಣ ಅತ್ಯಗತ್ಯ ವಿಚಾರವಾಗಿದೆ” ಎಂದು ಅರ್ಜಿದಾರರು ಹೇಳಿದ್ದಾರೆ.
ಅರ್ಜಿದಾರರ ಕಳವಳವನ್ನು ಆಲಿಸಿದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.
“ರಾಜ್ಯದಲ್ಲಿ ಕಂಡಕ್ಟರ್/ಪರವಾನಗಿ ಕಂಡಕ್ಟರ್ಗಳಿಲ್ಲದೆ ಪ್ರಯಾಣಿಕರ ಬಸ್ಗಳು/ಸ್ಟೇಜ್ ಕ್ಯಾರೇಜ್ಗಳು ಕಾರ್ಯನಿರ್ವಹಿಸುತ್ತಿರುವ ಸಮಸ್ಯೆಯನ್ನು ಪಿಐಎಲ್ನಲ್ಲಿ ಅರ್ಜಿದಾರರು ಪ್ರಸ್ತಾಪಿಸಿದ್ದಾರೆ. ಪರವಾನಗಿ ಕಂಡಕ್ಟರ್ ಪಾತ್ರವನ್ನು 1988 ರ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮದಲ್ಲಿ ವಿವರಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ ಪಡೆದ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾರೂ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದ್ದು ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 29, ಮಾನ್ಯ ಕಂಡಕ್ಟರ್ ಪರವಾನಗಿ ಹೊಂದಿರುವ ಜನರು ಮಾತ್ರ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಬಹುದು. ಈ ಪರವಾನಗಿ ಇಲ್ಲದ ಯಾರನ್ನಾದರೂ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಲು ಯಾರಾದರೂ ನೇಮಿಸಿಕೊಳ್ಳುವುದು ಕಾನೂನುಬಾಹಿರ ಎಂದು ಹೇಳುತ್ತದೆ.
ಈ ವರದಿ ಓದಿದ್ದೀರಾ?: ಮೋದಿ ಪರ್ವದಲ್ಲಿ ಮೇಯುವವರಿಗೆ ಮಣೆ: ಅಪ್ಪಿತಪ್ಪಿ ಸಿಕ್ಕಿಬಿದ್ದ ಸಿಜಾರಿಯಾ
ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ಗೆ ಈ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಜೊತೆಗೆ ಪರವಾನಗಿ ಪಡೆದ ಕಂಡಕ್ಟರ್ ಇಲ್ಲದೆ ಯಾವುದೇ ಪ್ರಯಾಣಿಕ ಬಸ್ / ಸ್ಟೇಜ್ ಕ್ಯಾರೇಜ್ ರಸ್ತೆಯಲ್ಲಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಪಾಯಿಂಟ್ಗಳನ್ನು ಪರಿಶೀಲಿಸುವಂತೆ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
“ಮಾಹಿತಿ ಹಕ್ಕಿನ ಅಡಿಯಲ್ಲಿ, ರಾಜಧಾನಿ ರಾಯ್ಪುರದಲ್ಲಿ 16321 ಬಸ್ಗಳಲ್ಲಿ ಕೇವಲ 21 ಪರವಾನಗಿ ಪಡೆದ ಕಂಡಕ್ಟರ್ಗಳು ಮತ್ತು ರಾಯ್ಗಢದಲ್ಲಿ 5992 ಬಸ್ಗಳಿಗೆ 41 ಪರವಾನಗಿ ಪಡೆದ ಕಂಡಕ್ಟರ್ಗಳಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಈ ಎರಡು ಪ್ರಮುಖ ಜಿಲ್ಲೆಗಳೆ ಇಂತಹ ದಯನೀಯ ಪರಿಸ್ಥಿತಿಯನ್ನು ಹೊಂದಿರುವಾಗ, ಇಡೀ ರಾಜ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು” ಎಂದು ಅರ್ಜಿದಾರರ ವಕೀಲ ರಿಷಬ್ ಬಿಸೆನ್ ಹೇಳಿದ್ದಾರೆ.