ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೇವನಹಳ್ಳಿ ತಾಲೂಕಿನ ಬೊಮ್ಮವಾರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ರೈತರಿಗಾಗಿ 2024-25ನೇ ಸಾಲಿನ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ದೇವನಹಳ್ಳಿ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ಅಟಲ್ ಭೂಜಲ್ ಯೋಜನೆಯಡಿ (ABY) ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಅಟಲ್ ಭೂಜಲ್ ಯೋಜನೆಯಡಿ ಕರ್ನಾಟಕದ 14 ಜಿಲ್ಲೆಗಳ, 41 ತಾಲ್ಲೂಕುಗಳಲ್ಲಿ ಬರುವಂತಹ 1199 ಗ್ರಾಮ ಪಂಚಾಯತಿಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷಾನಗೊಳ್ಳುತ್ತಿದ್ದು, ಅಂತರ್ಜಲದ ಅತಿಬಳಕೆಯನ್ನು ಕಡಿಮೆ ಮಾಡುವುದು. ಅಂತರ್ಜಲದ ಸುಸ್ಥಿರ ನಿರ್ವಹಣೆ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್; ಜನಪರ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರ ನಡೆ ಸರ್ವಥಾ ಸರಿಯಲ್ಲ
ಕಾರ್ಯಕ್ರಮದಲ್ಲಿ ಅಟಲ್ ಭೂಜಲ್ ಯೋಜನೆಯ ಹಿರಿಯ ಭೂ ವಿಜ್ಞಾನಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೋಡಲ್ ಅಧಿಕಾರಿ ಪಲ್ಲವಿ, ತಾಂತ್ರಿಕ ಸಹಾಯಕರಾದ ನಿಷಿತ, ಕೃಷಿ ತಜ್ಞೆ ದೀಪ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಲಾಖೆ ಅಂತರ್ಜಲ ತಜ್ಞರಾದ ಮೋಹನ್, ಜೈನ್ ನೀರಾವರಿ ಸಂಸ್ಥೆಯ ತೋಷಿತ್ ರೈ, ಜೈರಾಮ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆರ್.ಕೆ.ಶಾಲಾದ, ಸಹಾಯಕ ಕೃಷಿ ನಿರ್ದೇಶಕಿ ಸುಮಂಗಲ, ಕೃಷಿ ಅಧಿಕಾರಿ ಸತ್ಯನಾರಾಯಣ ಸೇರಿದಂತೆ ದೇವನಹಳ್ಳಿ ತಾಲ್ಲೂಕಿನ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮದ ರೈತರು ಉಪಸ್ಥಿತರಿದ್ದರು.