ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಯುಎಇ ಘಟಕದ ಆಶ್ರಯದಲ್ಲಿ ನಾಳೆ (ಫೆಬ್ರವರಿ 9) ದುಬೈನ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ‘ಬ್ಯಾರಿ ಮೇಳ-2025’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
“ಯುಎಇಯಲ್ಲಿ ಸುಮಾರು 1,80,000 ಕನ್ನಡಿಗರಿದ್ದು, ಅದರಲ್ಲಿ ಸುಮಾರು 45,000 ಬ್ಯಾರಿಗಳಿದ್ದಾರೆ. ಕನ್ನಡಿಗರೂ ಒಳಗೊಂಡಂತೆ ಬ್ಯಾರಿ ಕುಟುಂಬಗಳನ್ನು ಒಂದೆಡೆ ಸೇರಿಸಿ, ‘ಬ್ಯಾರಿ ಮೇಳ – 2025ʼ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ಈದಿನ ಡಾಟ್ ಕಾಮ್ ಪ್ರತಿನಿಧಿಯೊಂದಿಗೆ ಮಾತನಾಡಿದ ಬಿಸಿಸಿಐ ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ತಿಳಿಸಿದರು.
“ಬ್ಯಾರಿ ಉದ್ದಿಮೆದಾರರು ಮತ್ತು ವೃತ್ತಿಪರರು ಸೇರಿಕೆಂಡು ಸ್ಥಾಪಿಸಿರುವ ಬಿಸಿಸಿಐನ ಕೇಂದ್ರ ಕಚೇರಿಯು ಮಂಗಳೂರಿನಲ್ಲಿದ್ದು, ಇದರ ಯುಎಇ ಘಟಕ ಕಳೆದ ಆರು ವರ್ಷಗಳಿಂದ ದುಬೈನಲ್ಲಿ ಕಾರ್ಯಾಚರಿಸುತ್ತಿದೆ. ಯುಎಇನಲ್ಲಿರುವ ಎಲ್ಲ ಉದ್ದಿಮೆದಾರರನ್ನು ಒಂದೇ ವೇದಿಕೆಯಡಿ ತಂದು, ಅವರ ನಡುವೆ ಸಂಪರ್ಕ ಸಾಧಿಸುವ ಕೊಂಡಿಯಾಗಿರುವುದು ಹಾಗೂ ಹೊಸದಾಗಿ ಉದ್ದಿಮೆ ಆರಂಭಿಸುವ ಯುವಜನರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಬಿಸಿಸಿಐನ ಮೂಲ ಧ್ಯೇಯ” ಎಂದು ಹಿದಾಯತ್ ಅಡ್ಡೂರು ಹೇಳಿದರು.
“ಉದ್ದಿಮೆದಾರರಿಗೆ ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಪ್ರಗತಿ ಸಾಧನೆಗೆ ಮಾಹಿತಿ ನೀಡುವುದರ ಜೊತೆಗೆ ಉದ್ಯೋಗ ಹುಡುಕಿಕೊಂಡು ಯುಎಇಗೆ ಬರುವ ಯುವಜನರಿಗೆ ಬಿಸಿಸಿಐ ದುಬೈ ಘಟಕ ಸೂಕ್ತ ಮಾರ್ಗದರ್ಶನ ಮತ್ತು ಔದ್ಯೋಗಿಕ ಕೌಶಲಗಳ ತರಬೇತಿ ನೀಡುತ್ತದೆ. ಬ್ಯಾರಿ ಮೇಳದಲ್ಲಿ ಯುಎಇ ಮತ್ತು ಹತ್ತಿರದ ದೇಶಗಳಿಂದ ಸುಮಾರು 10000ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ” ಎಂದು ಬಿಸಿಸಿಐ ಯುಎಇ ಘಟಕದ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಅಡ್ಡೂರು ಹೇಳಿದರು.
“ಬ್ಯಾರಿ ಸಮುದಾಯದ ಉದ್ಯಮಿಗಳು, ಉದ್ಯಮದಲ್ಲಿ ಆಸಕ್ತಿಯಿರುವವರು, ತಮ್ಮ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗಲು ಬಯಸುವವರು, ತಮ್ಮ ಸರಕು, ಇನ್ನಿತರ ವಸ್ತುಗಳಿಗೆ ಉತ್ತಮ ಪ್ರಚಾರ ಬಯಸುವವರು, ಉದ್ಯೋಗದ ಹುಡುಕಾಟದಲ್ಲಿರುವ ಯುವಕ-ಯುವತಿಯರು, ವಿದ್ಯಾರ್ಥಿಗಳು ಮತ್ತು ಮಕ್ಕಳು ಕುಟುಂಬ ಸಮೇತರಾಗಿ ಬ್ಯಾರಿ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಯುಎಇಯಲ್ಲಿರುವ ಅನೇಕ ಸಂಘ-ಸಂಸ್ಥೆಗಳು ನಮಗೆ ಬೆಂಬಲವನ್ನು ಘೋಷಿಸಿವೆ. ಬ್ಯಾರಿ ಸಮುದಾಯದ ಇತಿಹಾಸದಲ್ಲಿ ಹೊರದೇಶದಲ್ಲಿ ನಡೆಯಲಿರುವ ಅತೀ ದೊಡ್ಡ ಮೇಳ ಇದಾಗಿದೆ” ಎಂದು ʼಬ್ಯಾರಿ ಮೇಳ – 2025ʼರ ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ತಿಳಿಸಿದರು.

“ಜಗತ್ತಿನಾದ್ಯಂತ ಇರುವ ಬ್ಯಾರಿ ಉದ್ಯಮಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯುಎಇನಲ್ಲಿರುವ ಬ್ಯಾರಿ ಉದ್ಯಮಿಗಳಲ್ಲದೆ, ಸೌದಿ ಅರೇಬಿಯಾ, ಕುವೈತ್, ಖತಾರ್, ಬಹರೈನ್, ಒಮಾನ್ ಸೇರಿದಂತೆ ಜಿಸಿಸಿ(ಗಲ್ಫ್) ದೇಶಗಳು ಮತ್ತು ಭಾರತದ ಉದ್ಯಮಿಗಳು ಬ್ಯಾರಿ ಮೇಳದಲ್ಲಿ ಭಾಗವಹಿಸಲು ಈಗಾಗಲೇ ದುಬೈ ತಲುಪಿದ್ದಾರೆ” ಎಂದು ʼಬ್ಯಾರಿ ಮೇಳ -2025ʼರ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಮುಸ್ತಾಕ್ ಕದ್ರಿ ಹೇಳಿದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ವಿಡಿಯೋ ಮಾಡಲು ಹೋದಾಗ ದುರಂತ: ಎತ್ತಿನಗಾಡಿ ಹರಿದು ವ್ಯಕ್ತಿ ಸಾವು
“ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು ಗುರುತಿಸಿ ಬ್ಯಾರಿ ಮೇಳದಲ್ಲಿ ಗೌರವಿಸಲಾಗುವುದು. ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು ಒಳಗೊಂಡಂತೆ ವಿವಿಧ ಉದ್ಯಮ ಕ್ಷೇತ್ರದ 75ಕ್ಕೂ ಹೆಚ್ಚಿನ ಮಳಿಗೆಗಳು ಬ್ಯಾರಿ ಮೇಳದಲ್ಲಿರಲಿವೆ. ಬ್ಯಾರಿ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಉಚಿತ ರಾಫೆಲ್ ಡ್ರಾದಲ್ಲಿ ಪಾಲ್ಗೊಳ್ಳಬಹುದಾಗಿದ್ದು ಐಪ್ಯಾಡ್, ಐಫೋನ್, ಟಿವಿ ಮತ್ತು ಇನ್ನಿತರ ಹಲವು ಆಕರ್ಷಕ ಬಹುಮಾನಗಳನ್ನು ಡ್ರಾ ಮೂಲಕ ನೀಡಲಾಗುವುದು” ಎಂದು ಬಿಸಿಸಿಐ ಯುಎಇ ಘಟಕದ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್ ಹೇಳಿದರು.
