2022-23ನೇ ಸಾಲಿನಿಂದ ಅಸ್ತಿತ್ವಕ್ಕೆ ಬಂದಿರುವ ಬೀದರ್ ವಿಶ್ವವಿದ್ಯಾಲಯವು ತಾನು ಮುದ್ರಿಸಿರುವ ಪ್ರಸಕ್ತ ಸಾಲಿನ ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕಣ್ಣಿಗೆ ರಾಚುವಂತೆ ಹಲವು ಕಡೆ ತಪ್ಪುಗಳನ್ನೆಸಗಿ ಕನ್ನಡಕ್ಕೆ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ.
ಬೀದರ್ ವಿಶ್ವವಿದ್ಯಾಲಯದ ಬಿ.ಎ. ಹಾಗೂ ಬಿ.ಕಾಂ. ಪದವಿಯ 1ನೇ ಸೆಮಿಸ್ಟರ್ನ (ಎಸ್ಇಪಿ) ಪರೀಕ್ಷೆಯ ಭಾರತ ಸಂವಿಧಾನ (ಐಸಿ) ವಿಷಯದ ಪ್ರಶ್ನೆ ಪತ್ರಿಕೆಯ ಆಂಗ್ಲ ಮಾಧ್ಯಮದಲ್ಲಿ ಮುದ್ರಿಸಿದ ಬಹು ಆಯ್ಕೆ ಪ್ರಶ್ನೆಯೊಂದಕ್ಕೆ ಉತ್ತರವೇ ಇಲ್ಲ. ಇನ್ನು ಕನ್ನಡ ಭಾಷೆಯಲ್ಲಿ ಕೊಡಲಾಗಿರುವ ಕೆಲವು ಪ್ರಶ್ನೆಗಳಲ್ಲಿ ಪದಗಳನ್ನು ತಪ್ಪಾಗಿ ಮುದ್ರಿಸಿ ಪ್ರಶ್ನೆಯೇ ಅರ್ಥ ಆಗದಂತೆ ಮಾಡಿರುವುದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿತ್ತು.

ಬಿಎ ಪ್ರಥಮ ಸೆಮಿಸ್ಟರ್ನ ಭಾರತ ಸಂವಿಧಾನ (ಐಸಿ) ಪ್ರಶ್ನೆ ಪತ್ರಿಕೆಯಲ್ಲಿ ʼಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರುʼ ಎಂದು ಮುದ್ರಣಗೊಂಡ ಪ್ರಶ್ನೆ ಇಂಗ್ಲಿಷ್ನಲ್ಲಿ ಸರಿಯಾಗಿದೆ. ಅದೇ ಪ್ರಶ್ನೆ ಕನ್ನಡ ಅನುವಾದ ʼಭಾರತ ಕರಡು ಸಮಿತಿಯ ಅಧ್ಯಕ್ಷರುʼ ಎಂದು ಮುದ್ರಣವಾಗಿದೆ. ಇಲ್ಲಿ ʼಸಂವಿಧಾನʼ ಎಂಬ ಮುಖ್ಯ ಪದವೇ ಇಲ್ಲದಂತಾಗಿದೆ. ಇದೇ ಪ್ರಶ್ನೆ ಪತ್ರಿಕೆಯಲ್ಲಿ ʼಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆʼ ಎಂಬ ಬಹು ಆಯ್ಕೆ ಪ್ರಶ್ನೆಗೆ ಕನ್ನಡದಲ್ಲಿ ಉತ್ತರವಿದೆ. ಅದೇ ಆಂಗ್ಲ ಭಾಷೆಯಲ್ಲಿ ಕೊಡಲಾಗಿರುವ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ.
ಬಿ.ಎ. ಹಾಗೂ ಬಿ.ಕಾಂ. ಪದವಿಯ 1ನೇ ಸೆಮಿಸ್ಟರ್ನ ಭಾರತ ಸಂವಿಧಾನ (ಐಸಿ) ವಿಷಯದ ಪ್ರಶ್ನೆ ಪತ್ರಿಕೆಯ ಆಂಗ್ಲ ಮಾಧ್ಯಮದಲ್ಲಿ ಮುದ್ರಿಸಿದ ಪ್ರಶ್ನೆಗಳಲ್ಲಿ ಹೆಚ್ಚಿನ ಅವಾಂತರಗಳಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಕೊಡಲಾಗಿರುವ ಅದೇ ಪ್ರಶ್ನೆಗಳಲ್ಲಿ ಪದಗಳನ್ನು ತಪ್ಪು ತಪ್ಪಾಗಿ ಮುದ್ರಿಸಲಾಗಿದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ನ್ಯಾಯಾಲಯ-ನ್ಯಾಯಲಯ, ನ್ಯಾಯಾಧೀಶರು-ನ್ಯಾಯಧೀಶರು, ವಿಧೇಯಕ-ವಿಧ್ಯೇಯಕ ಹಾಗೂ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು-ಮೂರ್ಮು ಎಂದು ತಪ್ಪಾಗಿ ಮುದ್ರಣಗೊಂಡಿವೆ.

ಬಿ.ಎ. ಪ್ರಥಮ ಸೆಮಿಸ್ಟರ್ನ ರಾಜ್ಯಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಯಲ್ಲಿ ಪಿತಾಮಹ-ಪಿತಮಹ, ಸಾಮಾಜಿಕ-ಸಮಾಜಿಕ, ಕಾನೂನಿನ-ಕಾನುನಿನ ಎಂದು ತಪ್ಪಾಗಿ ಮುದ್ರಣಗೊಂಡಿವೆ. ಬಿಎ ಮೂರನೇ ಸೆಮಿಸ್ಟರ್ನ (ಎನ್ಇಪಿ) ಪ್ರಶ್ನೆ ಪತ್ರಿಕೆಯಲ್ಲಿ ಒಂದೇ ಪದದ ಅರ್ಥ ಚಲಕ-ಚಲ ಎಂದು ಎರಡು ಕಡೆ ತಪ್ಪಾಗಿ ಮುದ್ರಣಗೊಂಡಿರುವುದು ನೋಡಬಹುದು. ಹೀಗೆ ಪ್ರಶ್ನೆ ಪತ್ರಿಕೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು ಇದು ʼಗೂಗಲ್ ಅನುವಾದʼ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿ.ಎ. ಪ್ರಥಮ ಸೆಮಿಸ್ಟರ್ನ ಪರೀಕ್ಷೆಯ ʼಭಾರತ ಸಂವಿಧಾನʼ ವಿಷಯದ ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಬರೋಬ್ಬರಿ 10 ತಪ್ಪುಗಳು ನುಸುಳಿವೆ. ಈ ಪ್ರಶ್ನೆ ಪತ್ರಿಕೆಗಳು ಮುದ್ರಣಕ್ಕೆ ಹೋಗುವ ಮುನ್ನ ಕರಡು ತಿದ್ದುವ ಕೆಲಸವಾಗಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಇಂತಹ ಹಲವು ತಪ್ಪುಗಳಿದ್ದರೂ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹೇಳಿದಂತೆ ಪರೀಕ್ಷೆ ಬರೆದು ಮುಗಿಸಿದ್ದಾರೆ.
ಇವು ಕೆಲವು ಉದಾಹರಣೆಗಳಷ್ಟೇ, ಪ್ರಶ್ನೆ ಪತ್ರಿಕೆಗಳು ಓದುತ್ತಾ ಹೋದಂತೆ ಇಂತಹ ಹಲವು ಎಡವಟ್ಟುಗಳು ಕಾಣಸಿಗುತ್ತವೆ. ವಿಶ್ವವಿದ್ಯಾಲಯದ ಪ್ರಮಾದದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕನ್ನಡ ಅನುವಾದ ಮಾಡುವಾಗ ಮಾಡಿರುವ ಎಡವಟ್ಟು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಇನ್ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರವಹಿಸಬೇಕೆಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರೊಬ್ಬರು ಆಗ್ರಹಿಸಿದ್ದಾರೆ.

ʼಕನ್ನಡ ಅನುವಾದ ಮಾಡುವಾಗ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಮುದ್ರಣಗೊಂಡಿರುವ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಇದನ್ನು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರ ಗಮನಕ್ಕೆ ತರಲಾಗುವುದು. ಈ ರೀತಿ ತಪ್ಪು ಕಂಡು ಬಂದರೆ ಅದನ್ನು ನಾವು ಒಪ್ಪುವುದಿಲ್ಲ, ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ಪರೀಕ್ಷೆ ಮುಗಿದ ಬಳಿಕ ಸಭೆ ನಡೆಸಿ ಇನ್ಮುಂದೆ ತಪ್ಪಾಗದಂತೆ ತಿದ್ದಿಕೊಳ್ಳಲು ವಿಷಯವಾರು ಮುಖ್ಯಸ್ಥರಿಗೆ ತಿಳಿಸಲಾಗುವುದುʼ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಾಲ್ಯದಲ್ಲೇ ಅಸಮಾನತೆ ವಿರುದ್ಧ ಬಂಡಾಯವೆದ್ದ ದಾರ್ಶನಿಕ ಬಸವಣ್ಣ: ಸಭಾಪತಿ ಯು.ಟಿ.ಖಾದರ್
ʼಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ದೋಷವಾಗಿರುವ ಬಗ್ಗೆ ಚರ್ಚಿಸಲು ಸಮಿತಿ ರಚಿಸಲಾಗುವುದು.ಇದನ್ನು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರು ಗಮನಿಸಲಿಲ್ಲವೇ ಅಥವಾ ಟೈಪಿಂಗ್ ದೋಷ ಇರಬಹುದೇ ಎಂಬ ಕುರಿತು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್.ಬಿರಾದರ್ ಹೇಳಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Boss ಅವ್ರಿಗೆ ಪ್ರಶ್ನೆ ಪತ್ರಿಕೆ ತಗಿಯೋಕೆ baralla
Results ಸರಿಯಾಗಿ ಕೊಡೋಕೆ ಬರಲ್ಲ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸೋಕೆ ಬರಲ್ಲ ಪ್ರವೇಶ ಪತ್ರಕ್ಕೂ ಪರೀಕ್ಷಾ ಸಮಯಕ್ಕೂ ಸಂಭಂಧನೆ ಇರಲ್ಲ ಸರಿಯಾಗಿ ಕನ್ನಡ ಬರಲ್ಲ ಬರೀ ಫೀ ತಗೊಳ್ಳೋಕೆ ಫೈನ್ ತಾಗೊಳ್ಳೋಕೆ ಅಷ್ಟೆ ಸರಿಯಾಗಿ ಬರುತ್ತೆ ಇದು ಸತ್ಯ ಒಂದ್ ವೇಳೆ ಅವರ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಿದ್ರೆ ಸೆಡೆಗಳ ಮಹಾವಿದ್ಯಾಲಯದ ಭ್ರಷ್ಟಾಚಾರ ಅನ್ನೊ ಒನ್ ಮೂವೀ ತಗಿಬಹುದು