- ಜೂನ್ 6 ರಂದು ಕೇರಳದ ಕರಾವಳಿಯಲ್ಲಿ ರೂಪುಗೊಂಡ ಬಿಪರ್ಜಾಯ್ ಚಂಡಮಾರುತ
- ಜೂನ್ 15 ರಂದು ಗುಜರಾತ್ನ ಕಛ್ ಜಿಲ್ಲೆ, ಪಾಕಿಸ್ತಾನದ ಕರಾಚಿಗೆ ಅಪ್ಪಳಿಸಲಿರುವ ಸಾಧ್ಯತೆ
ಬಿಪರ್ಜಾಯ್ ಚಂಡಮಾರುತ ಭಾನುವಾರ (ಜೂನ್ 11) ಬೆಳಿಗ್ಗೆ ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಜೂನ್ 15 ರಂದು ಗುಜರಾತ್ನ ಕಛ್ ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿ ನಡುವಿನ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ತಿಳಿಸಿದೆ.
ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಸೃಷ್ಟಿಯಾಗಿರುವ ಅತ್ಯಂತ ತೀವ್ರವಾದ ಬಿಪರ್ಜಾಯ್ ಚಂಡಮಾರುತ ಗಂಟೆಗೆ 5 ಕಿ.ಮೀ ವೇಗದಲ್ಲಿ ದೇಶದ ಉತ್ತರದ ಕಡೆಗೆ ಚಲಿಸುತ್ತಿದೆ.
ಮುಂದಿನ 6 ಗಂಟೆಗಳ ಅವಧಿಯಲ್ಲಿ ಚಂಡಮಾರುತದ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸೌರಾಷ್ಟ್ರ ಮತ್ತು ಕಛ್ ಕರಾವಳಿ ಪ್ರದೇಶದ ನಾಗರಿಕರಿಗೆ ಹವಾಮಾನ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
“ಬಿಪರ್ಜಾಯ್ ಚಂಡಮಾರುತ ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲಿ ಪ್ರಬಲಗೊಂಡಿದೆ. ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಮಾರ್ಪಟ್ಟಿದೆ. ಕಳೆದ ಆರು ಗಂಟೆಗಳಲ್ಲಿ ಒಂಬತ್ತು ಕಿಲೊ ಮೀಟರ್ ವೇಗದಲ್ಲಿ ಉತ್ತರ-ಈಶಾನ್ಯದತ್ತ ಚಲಿಸಿದೆ” ಎಂದು ಐಎಂಡಿ ಟ್ವೀಟ್ ಮೂಲಕ ತಿಳಿಸಿದೆ.
“ಚಂಡಮಾರುತ ಜೂನ್ 14ರವರೆಗೆ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ನಂತರ ಈಶಾನ್ಯ ಭಾಗಗಳತ್ತ ಚಲಿಸುತ್ತದೆ. ಜೂನ್ 15 ರ ಮಧ್ಯಾಹ್ನದ ಸುಮಾರಿಗೆ ತೀವ್ರ ಸ್ವರೂಪ ಪಡೆಯುವ ಚಂಡಮಾರುತ ಗುಜರಾತ್ನ ಮಾಂಡ್ತಿ ಮತ್ತು ಪಾಕಿಸ್ತಾನದ ಕರಾಚಿ ಮೂಲಕ ಸೌರಾಷ್ಟ್ರ, ಕಛ್ ಮತ್ತು ಪಾಕಿಸ್ತಾನದ ಕರಾವಳಿಯನ್ನು ದಾಟಲಿದೆ. ಚಂಡಮಾರುತದಿಂದಾಗಿ ಗಂಟೆಗೆ 125-135 ವೇಗದಲ್ಲಿ ಗಾಳಿ ಬೀಸಲಿದೆ” ಎಂದು ಹವಾಮಾನ ಇಲಾಖೆ ಟ್ವೀಟ್ನಲ್ಲಿ ಮಾಹಿತಿ ನೀಡಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಚಂಡಮಾರುತದ ಪ್ರಭಾವ ತಗ್ಗಿದರೂ ಕೂಡ ಮೋಡ ಕವಿದ ವಾತಾವರಣವಿರಲಿದೆ ಎಂದು ಐಎಂಡಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
“ಪ್ರಸ್ತುತ ಚಂಡಮಾರುತ ಮುಂಬೈನ ಪಶ್ಚಿಮ-ನೈಋತ್ಯಕ್ಕೆ 620 ಕಿ.ಮೀ., ಪೋರಬಂದರ್ನಿಂದ 580 ಕಿ.ಮೀ., ದಕ್ಷಿಣ-ನೈಋತ್ಯ ಮತ್ತು ಕರಾಚಿಯಿಂದ 890 ಕಿ.ಮೀ. ದಕ್ಷಿಣದಲ್ಲಿ ಕೇಂದ್ರೀಕೃತವಾಗಿದೆ. ಸಮುದ್ರದ ಪರಿಸ್ಥಿತಿ ಇಂದು ಪ್ರಕ್ಷುಬ್ಧವಾಗಿರಬಹುದು. ಜೂನ್ 11 ರಿಂದ 15 ರವರೆಗೆ ತೀವ್ರಗೊಳ್ಳುವ ಸಾಧ್ಯತೆಯಿದೆ” ಎಂದು ಐಎಂಡಿ ಹೇಳಿದೆ
ಬಿಪರ್ಜಾಯ್ ಚಂಡಮಾರುತ ನಿರ್ದಿಷ್ಟವಾಗಿ ಯಾವ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಚಂಡಮಾರುತ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಗುಜರಾತ್ನ ವಡೋದರದ ಜರೋಡ್ ಗ್ರಾಮದ ಬಳಿಯ ಬೀಚ್ನಲ್ಲಿ ಬೀಡು ಬಿಟ್ಟಿದೆ.
ಜೂನ್ 14 ರವರೆಗೆ ಬೀಚ್ಗೆ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿದೆ. ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಗಾಳಿ ಉಂಟು ಮಾಡಬಹುದು ಎಂದು ಐಎಂಡಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್ಜಾಯ್ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಈ ಮಧ್ಯೆ, ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬಿಪರ್ಜಾಯ್ ಚಂಡಮಾರುತ ಜೂನ್ 6 ರಂದು ಕೇರಳದಲ್ಲಿ ರೂಪುಗೊಂಡಿತು. ಅಂದಿನಿಂದ ಇಂದಿನವರೆಗೆ ಅದರ ಪಥ ಮತ್ತು ತೀವ್ರತೆ ಅನಿಶ್ಚಿತತೆಯಿಂದಲೇ ಕೂಡಿದೆ.