ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ ಅವರಿಲ್ಲದಿರುವುದು ಟೀಂ ಇಂಡಿಯಾಗೆ ಎಲ್ಲ ಪಂದ್ಯಗಳು ಸವಾಲಾಗಿ ಪರಿಣಮಿಸಿದೆ. ರೋಹಿತ್, ಕೊಹ್ಲಿ, ರಿಷಬ್, ಶ್ರೇಯಸ್ ಅಯ್ಯರ್ ಅವರಂಥ ಅಮೋಘ ಬ್ಯಾಟಿಂಗ್ ಶಕ್ತಿ ಇದ್ದರೂ ಎದುರಾಳಿ ತಂಡಗಳ ರನ್ಗಳನ್ನು ಕಟ್ಟಿಹಾಕಬೇಕಾದರೆ ಬುಮ್ರಾ ಶಕ್ತಿಯಷ್ಟು ಮೀರಿಸಬಲ್ಲವರು ಬೇರೊಬ್ಬರಿಲ್ಲ
ಟಿ20 ವಿಶ್ವಕಪ್ ನಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಮಹತ್ವದ ಚಾಂಪಿಯನ್ಸ್ ಟ್ರೊಫಿ ಫೆ.19ರಿಂದ ಪಾಕಿಸ್ತಾನ ಹಾಗೂ ದುಬೈನ ಕ್ರೀಡಾಂಗಣಗಳಲ್ಲಿ ಆರಂಭಗೊಳ್ಳಲಿದೆ. ಟೀಂ ಇಂಡಿಯಾ 2023ರಲ್ಲಿ ಏಕದಿನ ವಿಶ್ವಕಪ್ ಪರಾಭವಗೊಂಡ ನಂತರ ಚಾಂಪಿಯನ್ಸ್ ಟ್ರೋಫಿ ಮಹತ್ವದ ಸರಣಿಯಾಗಿದೆ. ಭಾರತ ತಂಡದ ಜೊತೆ ಬಿಸಿಸಿಐ ಕೂಡ ಈ ಟೂರ್ನಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಆದರೆ ಪ್ರಶಸ್ತಿಯನ್ನು ಎತ್ತಿಹಿಡಿಯಬೇಕೆಂದು ಪಣ ತೊಟ್ಟಿರುವ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವ 15 ಪೂರ್ಣಾವಧಿ ಸದಸ್ಯರು ಹಾಗೂ ಮೂವರು ಬದಲಿ ಪ್ರವಾಸೇತರ ಆಟಗಾರರಲ್ಲಿ ವಿಶ್ವ ಮಾನ್ಯ ಸ್ಟಾರ್ ಬೌಲರ್ ಹಾಗೂ ಭಾರತಕ್ಕೆ ರಕ್ಷಕರಾಗಿರುವ ವೇಗಿ ಜಸ್ಪ್ರೀತ್ ಬೂಮ್ರಾ ಹೆಸರಿಲ್ಲ. ಗಾಯದಿಂದ ಬಳಲುತ್ತಿರುವ ಬೂಮ್ರಾ ಬದಲಿಗೆ ಉದಯೋನ್ಮುಖ ಪ್ರತಿಭೆ ದೆಹಲಿಯ ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿದೆ.
ಅಚ್ಚರಿಯೆಂದರೆ ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಫೋಟಕ ಯುವ ಆಟಗಾರನಾದ ಯಶಸ್ವಿ ಜೈಸ್ವಾಲ್ ಅವರನ್ನು ಮುಖ್ಯ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ. ಬದಲಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವಕಾಶ ನೀಡಲಾಗಿದೆ. ಭಾರತದ ಸ್ಪಿನ್ನರ್ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಕಾರಣ ಜೈಸ್ವಾಲ್ ಬದಲಿಗೆ ಹೆಚ್ಚುವರಿ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿಯನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಆಯ್ಕೆಯಾಗಿರುವುದರಿಂದ ಜೈಸ್ವಾಲ್ ಅಗತ್ಯವಿಲ್ಲ ಎಂದು ಭಾವಿಸಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಆದರೂ ಇವರಿಬ್ಬರ ಅನುಪಸ್ಥಿತಿ ಟೀಂ ಇಂಡಿಯಾಗೆ ಒಂದಿಷ್ಟು ಹಿನ್ನಡೆಯಾಗುವುದು ಖಚಿತ.
ಹಾಗೆ ನೋಡಿದರೆ 15ರ ಬಳಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಹಾಗೂ ಅನುಭವಿ ರವೀಂದ್ರ ಜಡೇಜಾ ಸೇರಿ ಐವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಲಾಗಿದೆ. ಶಮಿ, ಅರ್ಷದೀಪ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ ಒಳಗೊಂಡು ನಾಲ್ವರು ವೇಗಿಗಳನ್ನು ಸೇರಿಸಿಕೊಳ್ಳಲಾಗಿದೆ. ಹಲವು ಅವಕಾಶಗಳನ್ನು ನೀಡಿದರೂ ಬ್ಯಾಟಿಂಗ್ನಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಕೆ ಎಲ್ ರಾಹುಲ್ ಅವರಿಗೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ. ಸರಣಿಯಲ್ಲಿ ಐವರು ಸ್ಪಿನ್ನರ್ಗಳು ಇರುವುದನ್ನು ಗಮನಿಸಿದರೆ ಭಾರತ ತಂಡವನ್ನು ಸ್ಪಿನ್ನರ್ಗಳ ತಂಡ ಎಂದು ಬೇಕಾದರೂ ಹೇಳಬಹುದು.
ಆದರೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ ಅವರಿಲ್ಲದಿರುವುದು ಟೀಂ ಇಂಡಿಯಾಗೆ ಎಲ್ಲ ಪಂದ್ಯಗಳು ಸವಾಲಾಗಿ ಪರಿಣಮಿಸಿದೆ. ರೋಹಿತ್, ಕೊಹ್ಲಿ, ರಿಷಬ್, ಶ್ರೇಯಸ್ ಅಯ್ಯರ್ ಅವರಂಥ ಅಮೋಘ ಬ್ಯಾಟಿಂಗ್ ಶಕ್ತಿ ಇದ್ದರೂ ಎದುರಾಳಿ ತಂಡಗಳ ರನ್ಗಳನ್ನು ಕಟ್ಟಿಹಾಕಬೇಕಾದರೆ ಬುಮ್ರಾ ಶಕ್ತಿಯಷ್ಟು ಮೀರಿಸಬಲ್ಲವರು ಬೇರೊಬ್ಬರಿಲ್ಲ. ಮೊಹಮ್ಮದ್ ಶಮಿ ದೈತ್ಯ ಬೌಲರ್ ಆಗಿ ವಿಕೆಟ್ಗಳನ್ನು ಉರುಳಿಸಿದರೂ ರನ್ಗಳನ್ನು ಕಟ್ಟಿಹಾಕಲು ಕೆಲವೊಮ್ಮೆ ಪರದಾಡುತ್ತಾರೆ. ಕಳೆದ ಏಕದಿನ ವಿಶ್ವಕಪ್ನಲ್ಲಿ ಶಮಿ ಹಾಗೂ ಬೂಮ್ರಾ ಅವರ ಕರಾರುವಾಕ್ ಬೌಲಿಂಗ್ ಸಾಮರ್ಥ್ಯದಿಂದಲೇ ಟೀಂ ಇಂಡಿಯಾ ಫೈನಲ್ ತಲುಪಿತ್ತು.
ವೇಗದ ಬೌಲಿಂಗ್ ವಿಷಯ ಬಂದಾಗಲೆಲ್ಲ ಹಿಂದೆ ಜೆಫ್ ಥಾಮ್ಸನ್, ಡೆನಿಸ್ ಲಿಲ್ಲಿ, ಗ್ಲೆನ್ ಮೆಕ್ಗ್ರಾ, ಆ್ಯಂಡಿ ರಾಬರ್ಟ್ಸ್, ಮೈಕೆಲ್ ಹೋಲ್ಡಿಂಗ್, ಮಾಲ್ಕಂ ಮಾರ್ಷಲ್, ಕಪಿಲ್ ದೇವ್, ಬ್ರೆಟ್ ಲೀ, ಶೋಯೆಬ್ ಅಖ್ತರ್, ವಾಕರ್ ಯೂನಿಸ್, ವಸೀಂ ಅಕ್ರಂ, ಇಮ್ರಾನ್ ಖಾನ್ ಬಗ್ಗೆ ಕ್ರಿಕೆಟ್ ಪ್ರಿಯರು ಮಾತನಾಡುತ್ತಾರೆ. ಆ ಕಾಲದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವೇಗಿಗಳಿಗೆ ಜನಪ್ರಿಯ ತಂಡಗಳಾಗಿದ್ದವು. ಆದರೆ ಕೆಲವು ವರ್ಷಗಳಿಂದ ವೇಗದ ಬೌಲಿಂಗ್ ವಿಷಯ ಬಂದರೆ ಭಾರತದ ಜಸ್ಪ್ರೀತ್ ಬೂಮ್ರಾ ಹೆಸರು ಹರಿದಾಡುತ್ತಿದೆ.
ಸೀಮಿತ ಓವರ್ಗಳ ಕ್ರಿಕೆಟ್ ಮಾದರಿಗಳಲ್ಲಿಯೂ ಜಸ್ಪ್ರೀತ್ ಬೂಮ್ರಾ ‘ಡೆತ್ ಓವರ್’ ಪರಿಣತರೆಂದೇ ಪ್ರಸಿದ್ಧರಾಗಿದ್ದಾರೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಿದಷ್ಟೆ ಪರಿಣಾಮಕಾರಿಯಾಗಿ ಅವರು ಕೊನೆಯ ಹಂತದ ಓವರ್ಗಳಲ್ಲಿ ರಿವರ್ಸ್ ಸ್ವಿಂಗ್ ಹಾಗೂ ಯಾರ್ಕರ್ಗಳನ್ನು ಪ್ರಯೋಗಿಸುತ್ತಾರೆ. ಬ್ಯಾಟರ್ಗಳು ಮೇಲುಗೈ ಸಾಧಿಸಿದರೂ ನಂತರದಲ್ಲಿ ವಿಕೆಟ್ ಉರುಳಿಸುವ ಕೌಶಲ ಅವರಿಗೆ ಇದೆ. ಪ್ರತಿದಿನವೂ ಹೊಸದೊಂದು ಅಸ್ತ್ರವನ್ನು ತಮ್ಮ ಬತ್ತಳಿಕೆಗೆ ಸೇರಿಸುತ್ತಾರೆ. ವೇಗದಷ್ಟೆ ಲೈನ್, ಲೆಂಗ್ತ್, ಸ್ವಿಂಗ್ ಮತ್ತು ಸೀಮ್ ಬ್ಯಾಲೆನ್ಸೂಗೂ ಆದ್ಯತೆ ಕೊಡುತ್ತಾರೆ. ಪಿಚ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಯಾ ಪಿಚ್ಗೆ ತಕ್ಕಂತೆ ಬೌಲಿಂಗ್ ಮಾಡುತ್ತಾರೆ.
ಇತ್ತೀಚಿನ ವರ್ಷಗಳ ಟೀಂ ಇಂಡಿಯಾ ಸಾಧನೆಯಲ್ಲಿ 31 ವರ್ಷದ ಜಸ್ಪ್ರೀತ್ ಬೂಮ್ರಾ ಮಹತ್ತರ ಪಾತ್ರ ವಹಿಸಿದ್ದಾರೆ. ಕಳೆದ 12 ತಿಂಗಳ ಅವಧಿಯಲ್ಲಿ ಬೂಮ್ರಾ ಟಸ್ಟ್ ರಂಗದಲ್ಲಿ ಪ್ರಾಬಲ್ಯ ಮೆರೆದಿದ್ದರು. ಕೇವಲ 13 ಪಂದ್ಯಗಳಿಂದ 14.92ರ ಸರಾಸರಿಯಲ್ಲಿ 71 ವಿಕೆಟ್ಗಳನ್ನು ಬಾಚಿಕೊಂಡಿದ್ದರು. ಇದಕ್ಕಾಗಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚಿನ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ 32 ವಿಕೆಟ್ ಪಡೆದಿದ್ದರು. ಏಕದಿನದಲ್ಲೂ ಅವರ ಸಾಧನೆ ಕಡಿಮೆಯೇನಲ್ಲ. 89 ಪಂದ್ಯಗಳಿಂದ 149 ವಿಕೆಟ್ಗಳನ್ನು ಉರುಳಿಸಿದ್ದಾರೆ. ಬೌಲಿಂಗ್ ಎಕಾನಮಿ ಸರಾಸರಿ 4.6 ರಷ್ಟು ಮಾತ್ರವೆ ಇದೆ. ಬೇರೆ ಬೌಲರ್ಗಳಂತೆ ಧಾರಾಳವಾಗಿ ರನ್ಗಳನ್ನು ಬೂಮ್ರಾ ನೀಡುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಮಹಿಳಾ ಅಂಡರ್-19 ವಿಶ್ವಕಪ್: ಕನ್ನಡತಿ ನೇತೃತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್
ಬೂಮ್ರಾ ಅವರು ಪ್ರಯೋಗಿಸುವ ಎಸೆತಗಳು ಮತ್ತು ಗಳಿಸುವ ವಿಕೆಟ್ಗಳಂತೆ ಅವರ ಬೌಲಿಂಗ್ ಶೈಲಿ ಕೂಡ ಸೊಗಸಾಗಿದೆ. ಸದಾ ಹಸನ್ಮುಖಿಯಾಗಿರುತ್ತಾರೆ. ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. 150 ಕಿ.ಮೀ ಆಸುಪಾಸಿನಲ್ಲಿ ಪ್ರಯೋಗಿಸುವ ಯಾರ್ಕರ್ಗಳು ಅತ್ಯಂತ ಪರಿಣಾಮಕಾರಿಯಾಗಿವೆ. ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ನಾಯಕಕ್ಕೆ ಸೂಕ್ತ ಹಾಗೂ ಅರ್ಹ ಹೆಸರೆಂದರೆ ಅದು ಜಸ್ಪ್ರೀತ್ ಬೂಮ್ರಾ ಎಂದು ದಿಗ್ಗಜ ಕ್ರಿಕೆಟಿಗರೆ ಅಭಿಪ್ರಾಯಪಡುತ್ತಾರೆ.
ಇತ್ತೀಚಿಗೆ ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇದೀಗ ಅನಿವಾರ್ಯವಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಮೊದಲು ಪ್ರಕಟಿಸಿದ್ದ ತಂಡದಲ್ಲಿ ಬುಮ್ರಾ ಅವರ ಹೆಸರಿತ್ತು. ಮುಂದಿನ ಹಲವು ಮಹತ್ವದ ಪಂದ್ಯಗಳಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಈ ಹಿಂದೆ 2022 ರಲ್ಲಿಯೂ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅವರು ಫಿಟ್ ಆಗಲು ಸುಮಾರು 10 ತಿಂಗಳುಗಳನ್ನು ತೆಗೆದುಕೊಂಡು 2023 ರಲ್ಲಿ ಮರಳಿದರು. ಆದರೆ, ಈಗ ಮತ್ತೆ ಸಮಸ್ಯೆ ಶುರುವಾಗಿದೆ. ಸದ್ಯ ಅವರನ್ನು ಬೆಂಗಳೂರಿನ ಎನ್ಸಿಎನಲ್ಲಿ ಐದರಿಂದ ಆರು ವಾರಗಳ ವಿಶ್ರಾಂತಿಗೆ ಕಳುಹಿಸಲಾಗಿದೆ. ಗಾಯದ ಕಾರಣದಿಂದಾಗಿ ಬುಮ್ರಾ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದರೆ, ಅದು ರೊನಾಲ್ಡೊ ಇಲ್ಲದ ಫಿಫಾ ವಿಶ್ವಕಪ್ನಂತೆ ಇರುತ್ತದೆ ಎಂದು ಇಂಗ್ಲೆಂಡ್ ವೇಗಿ ಸ್ಟೀವ್ ಹಾರ್ಮಿಸನ್ ಇತ್ತೀಚಿಗಷ್ಟೆ ಹೇಳಿದ್ದರು.
ಚಾಂಪಿಯನ್ಸ್ ಟ್ರೋಫಿ
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. 8 ತಂಡಗಳ ನಡುವೆ ಒಟ್ಟು 15 ಪಂದ್ಯಗಳು ನಡೆಯಲಿವೆ. ಈ 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿವೆ. ಇತರ ಎರಡು ತಂಡಗಳು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ. ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ. ಎಲ್ಲ 8 ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ತಲಾ 3 ಪಂದ್ಯಗಳನ್ನು ಆಡಲಿವೆ. ಇದರ ನಂತರ, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತವೆ. ಚಾಂಪಿಯನ್ಸ್ ಟ್ರೋಫಿಯ ಎಲ್ಲ 15 ಪಂದ್ಯಗಳು 4 ಸ್ಥಳಗಳಲ್ಲಿ ನಡೆಯಲಿವೆ. ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ.
