ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚು ರಾಜ್ಯ ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಹೀಗಾಗಿ, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳು ಬಂದ್ ಆಗುವ ಸಾಧ್ಯತೆ ಇದೆ. ಬೀದರ್ ವಿಶ್ವವಿದ್ಯಾಲಯ ಮಾತ್ರ ಮುಂದುವರೆಯಲಿದೆ.
ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಉಪಸಮಿತಿ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅಧಿಕೃತ ನಿರ್ಣಯ ಕೈಗೊಳ್ಳಲು ಉಪಸಮಿತಿ ತೀರ್ಮಾನಿಸಿದೆ.
ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಲು ಸರ್ಕಾರವು ಹೆಚ್ಚು ಹಣವನ್ನು ಭರಿಸಬೇಕು. ಪ್ರತಿಯೊಂದು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸರಿಸುಮಾರು350 ಕೋಟಿ ರೂ. ಬೇಕಾಗುತ್ತದೆ. ಜೊತೆಗೆ, 100 ರಿಂದ 200 ಎಕರೆ ಭೂಮಿಯ ಅಗತ್ಯವಿದೆ. ಅಷ್ಟು ಪ್ರಮಾಣದ ಹಣ-ಜಮೀನು ಹೊಂದಿಸುವುದು ಸರ್ಕಾರಕ್ಕೆ ಹೊರೆಯಾಗಲಿದೆ. ಜೊತೆಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕ, ವೇತನ, ಸಲಕರಣೆ, ವಾಹನ, ಪೀಠೋಪಕರಣ ಸೇರಿದಂತೆ ಮೌಲಸೌಕರ್ಯ ಖರೀದಿಯು ಹೊರೆಯಾಗಲಿದೆ ಎಂದು ಉಪಸಮಿತಿ ವರದಿ ಹೇಳಿದೆ.
10 ಹೊಸ ವಿಶ್ವವಿದ್ಯಾಲಯಗಳ ಪೈಕಿ ಬೀದರ್ ವಿಶ್ವವಿದ್ಯಾಲಯ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬೀದರ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 150 ಕಾಲೇಜುಗಳಿದ್ದು, ಎಲ್ಲ ಸೌಕರ್ಯಗಳೊಂದಿಗೆ ವಿಶ್ವವಿದ್ಯಾಲಯ ಮುನ್ನಡೆಯುತ್ತಿದೆ. ಹೀಗಾಗಿ, ಈ ಒಂದು ವಿಶ್ವವಿದ್ಯಾಲಯವನ್ನು ಮಾತ್ರ ಮುಂದುವರೆಸಲು ಉಪಸಮಿತಿ ಚಿಂತಿಸಿದೆ.