ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಕುಡಾ ಅನುಮೋದನೆ, ಡಿಸಿ ಕನ್ವರ್ಷನ್ ಇತ್ಯಾದಿ ಸೂಕ್ತ ದಾಖಲೆಗಳನ್ನು ಹೊಂದಿರದ ಸುಮಾರು 10-14 ಸಾವಿರ ಮನೆಗಳಿದ್ದು, ಅಂತಹವರಿಗೆ ಬಿ-ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಫೆ.20, 21, 22ರಂದು ನಗರದ ಪ್ರತೀ ವಾರ್ಡ್ಗಳಿಗೂ ನಿಗಧಿತ ಸ್ಥಳಗಳಿಗೆ ನಗರಸಭೆ ಅಧಿಕಾರಿಗಳು ಬರಲಿದ್ದು, ತಮ್ಮ ಆಸ್ತಿಗಳ ಖಾತೆ ಹೊಂದಿರದ ಮಾಲೀಕರು ತಮ್ಮ ದಾಖಲೆಗಳನ್ನು ಅಧಿಕಾರಿಗಳಿಗೆ ಕೊಡಬಹುದು ಎಂದು ನಗರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಎಸಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಜನಸಾಮಾನ್ಯರ ಕಚೇರಿ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳೇ ಎಲ್ಲಾ ವಾರ್ಡ್ಗಳಿಗೂ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಬರಲಿದ್ದು, ಖಾತೆ ಹೊಂದಿರದ ಸಾರ್ವಜನಿಕರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ನಗರ ವ್ಯಾಪ್ತಿಯಲ್ಲಿ ಸರಿಯಾದ ದಾಖಲೆಗಳನ್ನು ಹೊಂದಿರದ ಸುಮಾರು 10-14 ಸಾವಿರಕ್ಕೂ ಅಧಿಕ ನಿವಾಸಿಗಳಿದ್ದು, ಇದು ದೊಡ್ಡ ತಲೆನೋವಾಗಿತ್ತು. ಇದನ್ನು ಸರಕಾರದ ಗಮನಕ್ಕೆ ತರಲಾಗಿತ್ತು. ಅದಕ್ಕಾಗಿ ಸಿಎಂ, ಡಿಸಿಎಂ, ಕಂದಾಯ ಸಚಿವರ ಉಪ ಸಮಿತಿ ರಚಿಸಲಾಗಿದ್ದು, ಗುರುವಾರ ರಾತ್ರಿ ಗೆಜೆಟ್ ನೋಟಿಫಿಕೇಷನ್ ಬಂದಿದ್ದು, ಖಾತೆ ಹೊಂದಿಲ್ಲದ ನಗರ ವಾಸಿಗಳು ಮನೆಯ ಯಾವುದೇ ದಾಖಲೆಗಳನ್ನು ನೀಡಿ ಬಿ-ಖಾತೆ ಪಡೆಯಬಹುದಾಗಿದೆ. ಈ ಹಿಂದೆ ಯಾವುದೇ ವ್ಯಕ್ತಿ ಖಾತೆ ಹೊಂದಲು ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕಿತ್ತು. ಇದೀಗ ದಾಖಲೆ ಇಲ್ಲದವರು ಬಿ-ಖಾತೆ ಪಡೆಯಬಹುದಾಗಿದ್ದು, ಇದರಿಂದ ನಗರ ನಿವಾಸಿಗಳ ಆತಂಕ ದೂರವಾಗಲಿದೆ ಎಂದು ಹೇಳಿದರು.
ಬಿ-ಖಾತೆ ಪಡೆಯಲು 90 ದಿನಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಎಲ್ಲಾ ವಾರ್ಡ್ ನಿವಾಸಿಗಳ ದಾಖಲೆ ಪಡೆದು ಬಿ-ಖಾತೆ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ದಲ್ಲಾಳಿಗಳಿಗೆ ಹಣ ನೀಡುವುದು ತಪ್ಪಲಿದ್ದು, ಪಾರದರ್ಶಕತೆ ಇರಲಿದೆ. ಈ ಕುರಿತು ಎರಡು ದಿನಗಳಲ್ಲಿ ಪ್ರತಿ ಮನೆಗೂ ಕರಪತ್ರ ಮತ್ತು ಚೆಕ್ಲಿಸ್ಟ್ ತಲುಪಿಸಲಾಗುವುದು ಎಂದು ಹೇಳಿದರು.
ಬಿ-ಖಾತೆ ನಮ್ಮ ಜನರ ಬಹುದಿನದ ಕನಸು. ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ. ಯಾರೂ ಸಹ ಯಾರಿಗೂ ಹಣ ಕೊಡುವ ಅಗತ್ಯ ಇಲ್ಲ. ಬಡವರಿಂದ ಹಣ ಪಡೆದು ಕೆಲಸ ಮಾಡಿಕೊಡುವ ದಲ್ಲಾಳಿಗಳು ಯಾರಾದರೂ ಇದ್ದರೆ ನಮಗೆ ಹೆಸರು ಸಮೇತ ಮಾಹಿತಿ ಕೊಡಿ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ, ಅಂತಹವರ ಪಟ್ಟಿಯನ್ನು ಮಾಧ್ಯಮದವರ ಗಮನಕ್ಕೆ ತರಲಾಗುವುದು. ಬಡವರು ಎಲ್ಲಿಯೂ ಸಹ ಕಷ್ಟ ಅನುಭವಿಸಬಾರದು. ನಾನು ಎಳ್ಳಷ್ಟೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಬಿ-ಖಾತೆ ಪಡೆದರೆ ಲೋನ್, ಮಾರಾಟಕ್ಕೆ ಅವಕಾಶ :
ಬಿ-ಖಾತೆ ಪಡೆದರೆ ಜನ ಸಾಲ ಸೌಲಭ್ಯಗಳನ್ನು ಪಡೆಯಬಹುದು. ಅಲ್ಲದೇ ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ ಎಂದು ಶಾಸಕರು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಫೆ.15ರಂದು ಉಚಿತ ಹೃದಯ ತಪಾಸಣಾ ಶಿಬಿರ
ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, ಆ ವಿಚಾರದಲ್ಲಿ ನನಿಗೆ ಅನುಭವ ಇಲ್ಲದ ಕಾರಣ ಹಿರಿಯರಾದ ಕೆ.ಪಿ.ಬಚ್ಚೇಗೌಡರಿಗೆ ಉಸ್ತುವಾರಿ ವಹಿಸಲಾಗಿತ್ತು. ಅವರಿಗೆ ಅಗತ್ಯ ಸಹಕಾರ ನೀಡಲಾಗಿತ್ತು. ಅವರ ನೇತೃತ್ವದಲ್ಲೇ ಚುನಾವಣೆ ನಡೆದಿದೆ. ಗೆದ್ದಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಆಯುಕ್ತ ಮನ್ಸೂರ್ ಅಲಿ ಹಾಜರಿದ್ದರು.