ರಾಜ್ಯದ ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಬಗೆಹರಿಸಲು ಕಾನೂನು ತಿದ್ದುಪಡಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವಿಜಯಪುರ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಸವನ ಬಾಗೇವಾಡಿ ತಾಲೂಕಿನ ಬಸವೇಶ್ವರ ಉದ್ಯಾನವನದಲ್ಲಿ ಇಂದು ಸಭೆ ನಡೆಸಿದ ಬಳಿಕ ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೇದಾರ ಎ ಎಚ್ ಬಳೂರಗಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ರೈತರಿಗೆ ತಮ್ಮ ಜಮೀನುಗಳಿಗೆ ದಾರಿ ಇಲ್ಲದೆ ತೊಂದರೆಯಾಗುತ್ತಿದೆ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯ ಹಾಗೂ ನಾರಾಯಣಪುರ ಬಸವ ಸಾಗರ ಜಲಾಶಯಗಳ ನೀರು ಮರು ಹಂಚಿಕೆ ಮಾಡಿ ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಗ್ರಾಮೀಣ ಜನತೆಗೆ ನರೇಗಾ ಒಂದು ವರದಾನ: ತಾಲೂಕು ಪಂಚಾಯತಿ ಇಒ ರಾಮು ಅಗ್ನಿ
ಈ ವೇಳೆ ತಾಲೂಕು ಗೌರವಾಧ್ಯಕ್ಷ ವಿಠಲ ಬಿರಾದರ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಶಿವಪ್ಪ ಇಂಗಳೇಶ್ವರ, ಈರಣ್ಣ ದೇವರಗುಡಿ, ಚಂದ್ರಾಮ ತೆಗ್ಗಿ ರಾಜೇಸಾಬ ವಾಲಿಕಾರ, ದಾವಲಸಾಬ ನದಾಫ, ಚನ್ನಬಸಪ್ಪ ಸಿಂದೂರ್, ಚೆನ್ನಪ್ಪ ಗೂಡೂರ, ಪರಸು ಹೊಸೂರ, ಪರಶುರಾಮ ಮುತ್ತಗಿ ಇತರರಿದ್ದರು.
