ಬೇರೆ ಬೇರೆ ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಸಿನೆಮಾ ಪತ್ರಕರ್ತರೊಂದಿಗೆ ಸಮಾಲೋಚಿಸಿದರು. ನಿರಂತರ ಒಂದು ವರ್ಷದ ಅಧ್ಯಯನದ ಬಳಿಕ ವರದಿ ಸಿದ್ದವಾಯ್ತು. ಇದರಲ್ಲಿ “ಕರ್ನಾಟಕ ಚಲನಚಿತ್ರ ಅಕಾಡೆಮಿ” ರಚಿಸಬೇಕು ಎಂಬ ಸಲಹೆಯೂ ಸೇರಿತ್ತು
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಅವರು ಸಾಹಿತಿ, ಸಿನೆಮಾಗಳ ಬಗ್ಗೆಯೂ ಆಸಕ್ತಿ ಹೊಂದಿದವರು. ರಾಜಕೀಯ ಹಾಗೂ ಚಲನಚಿತ್ರ ಪತ್ರಕರ್ತ ವಿ.ಎನ್. ಸುಬ್ಬರಾವ್ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದರು. ಈ ವೇಳೆಗಾಗಲೇ ಚಿತ್ರರಂಗದ ಧುರೀಣರು ಸಹ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬೇರೆ ಬೇರೆ ಮುಖ್ಯಮಂತ್ರಿಗಳ ಅವಧಿಯಲ್ಲಿ ಮನವಿ ಸಲ್ಲಿಸಿದ್ದರು.
ಚಲನಚಿತ್ರ ಅಧ್ಯಯನ ಸಮಿತಿ ರಚನೆಯೂ ಆಯಿತು. ವಿ.ಎನ್. ಸುಬ್ಬರಾವ್ ಅವರನ್ನೇ ಮೊಯ್ಲಿ ಅವರು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದಕ್ಕೂ ಕಾರಣ ಇತ್ತು. ಕಮರ್ಶಿಯಲ್ ಮತ್ತು ಕಲಾತ್ಮಕ ಸಿನೆಮಾಗಳ ಬಗ್ಗೆ ಗೊತ್ತಿರಬೇಕು. ಎಂಬ ಇರಾದೆಯೂ ಇತ್ತು. 70ರ ದಶಕದಲ್ಲಿ ಕರ್ನಾಟಕದಲ್ಲಿ ಫಿಲಂ ಸೊಸೈಟಿ ಹುಟ್ಟು ಹಾಕಿದವರಲ್ಲಿ ಸುಬ್ಬರಾಯರೂ ಒಬ್ಬರಾಗಿದ್ದರು. “ವೀಕ್ಷಕ ಫಿಲಂ ಸೊಸೈಟಿ” ಆ ನಂತರ “ಸುಚಿತ್ರ ಫಿಲಂ ಸೊಸೈಟಿ” ಅಧ್ಯಕ್ಷರಾಗಿದ್ದವರು. ಪರ್ಯಾಯ ಸಿನೆಮಾಗಳು, ಕಮರ್ಶಿಯಲ್ ಮತ್ತು ಕಲಾತ್ಮಕ ಅಂಶಗಳನ್ನು ಹೊಂದಿರುವ ಬ್ರಿಡ್ಜ್ ಸಿನೆಮಾಗಳ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಶುರುವಾಗಿತ್ತು !
“ಕನ್ನಡ ಚಿತ್ರರಂಗ ಅಭಿವೃದ್ಧಿಗೆ ಸಮಗ್ರ ನೀತಿ” ಹೆಸರಿನ ಸಮಿತಿಯಲ್ಲಿ ನಿರ್ಮಾಪಕರಾದ ಪಾರ್ವತಮ್ಮ ರಾಜ್ ಕುಮಾರ್ ಅವರು ಸೇರಿದಂತೆ ಇತರ ನಿರ್ಮಾಪಕರು, ನಿರ್ದೇಶಕರು ತಂತ್ರಜ್ಞರು ಸೇರಿ ಒಟ್ಟು 12 ಮಂದಿ ಇದ್ದರು. ಇವರು ಹಲವು ಬಾರಿ ಸಭೆಗಳನ್ನು ಸೇರಿ ಚರ್ಚಿಸಿದರು. ಈ ಸಮಿತಿ ಚರ್ಚೆಗಳಿಗೆ ಮಾತ್ರ ಸೀಮಿತವಾಗದೇ ಪ್ರಾಯೋಗಿಕ ಅಧ್ಯಯನಕ್ಕೂ ಮುಂದಾಯಿತು.
“ಮುಂಬೈ, ಆಗಿನ ಅವಿಭಜಿತ ಆಂಧ್ರ ಪ್ರದೇಶದ ಹೈದ್ರಾಬಾದ್, ಕೇರಳದ ತ್ರಿವೆಂಡ್ರಮ್ (ತಿರುವಂತನಪುರ), ತಮಿಳುನಾಡಿನ ಮದ್ರಾಸ್ (ಚೆನ್ನೈ) ಇತ್ಯಾದಿ ಸಿನೆಮಾದ ಪ್ರಮುಖ ಚಟುವಟಿಕೆ ತಾಣಗಳಿಗೆ ಸಮಿತಿ ಸದಸ್ಯರು ಹೋದೆವು. ಅಲ್ಲಿನ ಸರ್ಕಾರಗಳು ಚಿತ್ರರಂಗದ ಅಭಿವೃದ್ಧಿಗೆ ಏನೇನು ಕೊಡುಗೆ ನೀಡುತ್ತಿವೆ, ಈ ನಿಟ್ಟಿನಲ್ಲಿ ಯಾವಯಾವ ನೀತಿಗಳನ್ನು ರಚಿಸಿವೆ ಎಂದು ಅಧ್ಯಯನ ಮಾಡಲಾಯಿತು. ಈ ಅಧ್ಯಯನಕ್ಕೆ ಕನ್ನಡ ಚಿತ್ರರಂಗದ ಅಪೂರ್ವ ಬೆಂಬಲ ವ್ಯಕ್ತವಾಯಿತು” ಎಂದು ವಿ.ಎನ್. ಸುಬ್ಬರಾಯರು ಹೇಳಿದ್ದಾರೆ (ದಾಖಲೆಗಳಿವೆ).

ಬೇರೆ ಬೇರೆ ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಸಿನೆಮಾ ಪತ್ರಕರ್ತರೊಂದಿಗೆ ಸಮಾಲೋಚಿಸಿದರು. ನಿರಂತರ ಒಂದು ವರ್ಷದ ಅಧ್ಯಯನದ ಬಳಿಕ ವರದಿ ಸಿದ್ದವಾಯ್ತು. ಇದರಲ್ಲಿ “ಕರ್ನಾಟಕ ಚಲನಚಿತ್ರ ಅಕಾಡೆಮಿ” ರಚಿಸಬೇಕು ಎಂಬ ಸಲಹೆಯೂ ಸೇರಿತ್ತು.
ಅಕಾಡೆಮಿಯೂ ಪ್ರಮುಖವಾಗಿ ಸಿನೆಮಾ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕು, ಪರ್ಯಾಯ ಸಿನೆಮಾಗಳನ್ನು ನೋಡುವ ಕ್ರಮಗಳ ಬಗ್ಗೆ ಶಿಕ್ಷಣ ನೀಡಬೇಕು. ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಬರೆಹಗಾರರಿಗೆ ಕಾರ್ಯಾಗಾರಗಳನ್ನು ಮಾಡಬೇಕು. ಜೊತೆಗೆ ಸಿನೆಮಾಗಳ ಬಗ್ಗೆ ಸಮರ್ಥವಾಗಿ ವಿಮರ್ಶಿಸಬಲ್ಲ ದೊಡ್ಡ ಪ್ರೇಕ್ಷಕವರ್ಗ ಬೆಳೆಸಬೇಕು. ಸ್ಥಳೀಯ ಚಿತ್ರಗಳ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಿನೆಮಾಗಳನ್ನು ತೋರಿಸಬೇಕು ಇತ್ಯಾದಿ ಪ್ರಮುಖ ಸಲಹೆಗಳಿದ್ದವು.
ಸಮಿತಿ ಒಂದು ವರ್ಷ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತು. ಆದರೆ 1994ರಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬದಲು ಜನತಾದಳ ಸರ್ಕಾರ ರಚಿಸಿತು. ವರದಿಯತ್ತ ಹೊಸ ಸರ್ಕಾರದ ಗಮನ ಹರಿಯಲಿಲ್ಲ. ಸಿನೆಮಾ ರಂಗದವರು, ಪ್ರಮುಖವಾಗಿ ಪತ್ರಕರ್ತರು ಅವಕಾಶ ದೊರೆತಾಗಲೆಲ್ಲ ವರದಿಯ ಬಗ್ಗೆ ಸರ್ಕಾರದ ಪ್ರಮುಖರ ಗಮನ ಸೆಳೆದರೂ ಪ್ರಯೋಜನವಾಗಿರಲಿಲ್ಲ.
1999ರಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿತು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಲೆ – ಸಾಹಿತ್ಯ ಮತ್ತು ಸಿನೆಮಾ ಅಭಿಮಾನಿ. ಆದರೆ ಅವರ ಸರ್ಕಾರ ಸತತ ನಾಲ್ಕು ವರ್ಷಗಳ ಕಾಲ ಬರ, ವರನಟ ರಾಜ್ ಕುಮಾರ್ ಅಪಹರಣ ಇಂಥ ಪ್ರಮುಖ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತು. ಆ ಅವಧಿಯಲ್ಲಿಯೂ ಫಿಲ್ಮ್ ಅಕಾಡೆಮಿ ರಚನೆಯಾಗಲಿಲ್ಲ. ಈ ನಂತರ ಬಂದ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರಲಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ದೋಸ್ತಿ ಮಾಡಿ ಮುಖ್ಯಮಂತ್ರಿಯಾದರು. ಇಷ್ಟರ ವೇಳೆಗೆ ಇವರು ಕನ್ನಡ ಸಿನೆಮಾಗಳನ್ನು ನಿರ್ಮಿಸಿದ್ದರು. ಚಿತ್ರರಂಗದವರು ಎಂತಲೂ ಗುರುತಿಸಿಕೊಂಡಿದ್ದರು. ಇವರ ಅವಧಿಯಲ್ಲಿಯೂ ಅಕಾಡೆಮಿ ಆಗಲಿಲ್ಲ.

2008ರಲ್ಲಿ ಬಿಜೆಪಿ ಸರ್ಕಾರ ರಚಿಸಿತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಚಿತ್ರರಂಗದ ಪ್ರಮುಖರು ಕನ್ನಡ ಸಿನೆಮಾ ರಂಗದ ಅಭಿವೃದ್ಧಿಗೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದರು. ಇದನ್ನು ಸಿನೆಮಾ ಪತ್ರಕರ್ತರು ಪದೇ ಪದೇ ನೆನಪಿಸುತ್ತಲೇ ಇದ್ದರು. ಇದೆಲ್ಲದರ ಪರಿಣಾಮವಾಗಿ 2009ರಲ್ಲಿ ರಾಜ್ಯ ಸರ್ಕಾರ “ಕರ್ನಾಟಕ ಚಲನಚಿತ್ರ ಅಕಾಡೆಮಿ” ರಚಿಸಿ ಆದೇಶ ಹೊರಡಿಸಿತು. ಮೇ 27, 2009ರಲ್ಲಿ ಮೊದಲ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ನಾಗಾಭರಣ ನೇಮಕವಾದರು. ಇವರ ಅವಧಿಯಲ್ಲಿ ಅಕಾಡೆಮಿ ಬೆಳವಣಿಗೆ ಆಯಿತೇ?
(ಮುಂದಿನ ಸಂಚಿಕೆಯಲ್ಲಿ: ನಾಗಾಭರಣ ಅವಧಿಯಲ್ಲಿ ಅಕಾಡೆಮಿಗೆ ಗಟ್ಟಿ ಅಡಿಪಾಯ ದೊರೆಯಿತೇ)
ಇದನ್ನೂ ಓದಿ ಕರ್ನಾಟಕ ಫಿಲ್ಮ್ ಅಕಾಡೆಮಿ | ಮೂಲ ಉದ್ದೇಶ ಮರೆತಿದೆಯೇ ಅಥವಾ ಉದ್ದೇಶಗಳೇ ಇಲ್ಲವೇ ? -ಭಾಗ 1

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ