ವಿಧಾನ ಸೌಧ ಸಮ್ಮೇಳನ ಸಭಾಂಗದಲ್ಲಿ ನಡೆದ ದಲಿತ ಸಂಘಟನೆಗಳ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ 1 ಸಾವಿರ ಕೋಟಿ ನೀಡುವಂತೆ ಸಿ. ಎಂ ಸಿದ್ದರಾಮಯ್ಯ ಅವರಿಗೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮನವಿ ಸಲ್ಲಿಕೆ ಮಾಡಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೊಳಗೇರಿಗಳ ಸಮಗ್ರ ಅಭಿವೃದ್ಧಿಗೆ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ 1 ಸಾವಿರ ಕೋಟಿ ನೀಡಿ ಮೂಲಭೂತ ಸೌಕರ್ಯಕ್ಕೆ ಅಂದರೆ 2,816 ಕೊಳಗೇರಿಳಲ್ಲಿ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ/ಒಳಚರಂಡಿ, ಶೌಚಾಲಯಗಳಿಗೆ 600 ಕೋಟಿ ಹಾಗೂ ಸ್ಲಂಗಳಲ್ಲಿ ಭವನ, ಶಾಲಾ ಕಟ್ಟಡಗಳ ಅಭಿವೃದ್ಧಿ, ಒಳಗೊಂಡ ಬೇಂಚ್ ಮಾರ್ಕ್ ಸೌಲಭ್ಯಗಳನ್ನು ಒದಗಿಸಲು ಒನ್ ಟೈಮ್ ಗ್ರ್ಯಾಂಟ್ನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಎಸ್.ಸಿ, ಎಸ್.ಟಿ ಸ್ಲಂಗಳ ಸ್ವಾಧೀನಕ್ಕೆ 200 ಕೋಟಿ, 50 ಮಾದರಿ ಸ್ಲಂಗಳ ಅಭಿವೃದ್ಧಿಗೆ 200 ಕೋಟಿ ಸ್ಲಂ ಬೋರ್ಡ್ ಸುವರ್ಣ ಮಹೋತ್ಸವದ ನೆನಪಿಗಾಗಿ ಹಳೇ ವಸತಿ ಸಮುಚ್ಚಯಗಳ ನವೀಕರಣಕ್ಕೆ 200 ಕೋಟಿ. ಚಿತ್ರದುರ್ಗ ಘೋಷಣೆಯಂತೆ ನಿವೇಶನ ರಹಿತ ಎಸ್.ಸಿ, ಎಸ್.ಟಿಗಳ ಕುಟುಂಬಕ್ಕೆ ಉಚಿತ ಮನೆ ನೀಡಲು ಲ್ಯಾಂಟ್ ಬ್ಯಾಂಕ್, ನಗರ ಸ್ಲಂಗಳಲ್ಲಿರುವ ಎಸ್.ಸಿ, ಎಸ್.ಟಿಗಳಿಗೆ ಉದ್ಯೋಗ ಖಾತ್ರಿ ಘೋಷಣೆ ಮಾಡಬೇಕು. ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು ಹಾಗೆಯೇ ಪ್ರಧಾನಮಂತ್ರಿ ಅವಾಸ್ ಯೋಜನೆಯ ಬದಲಾಗಿ “ಮುಖ್ಯಮಂತ್ರಿಗಳ ಶ್ರಮ್ ನಿವಾಸ್” ಯೋಜನೆ ಎಂದು ಈ 2025-2026ನೇ ಸಾಲಿನ ಬಜೆಟ್ನಲ್ಲಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಲಂ ಜನಾಂದೋಲನ ಸಂಘಟನೆಯ ಮನವಿಗೆ ಸಿಎಂ ಸಿದ್ದರಾಮಯ್ಯ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಹಕಾರ ಸಚಿವ ಕೆ ಎನ್. ರಾಜಣ್ಣ ಸ್ಲಂಗಳಿಗೆ ವಿಶೇಷ ಅನುದಾನ ನೀಡುವ ಅಗತ್ಯವಿದೆ ಎಂದು ಸಿಎಂ ಮತ್ತು ಆರ್ಥಿಕ ಸಲಹೆಗಾರರಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಎ. ನರಸಿಂಹಮೂರ್ತಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರಾದ ಎಚ್.ಸಿ ಮಹಾದೇವಪ್ಪ, ಕೆ.ಎನ್.ರಾಜಣ್ಣ, ಕೆ.ಎಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ್, ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಮೇಜರ್ ಮಣ್ಣಿವಣನ್, ಸಿ.ಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಎಸಿಎಸ್ ಉಮಾಮಹಾದೇವನ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಕೆ.ರಾಖೇಶ್ ಕುಮಾರ್ ಉಪಸ್ಥಿತರಿದ್ದರು ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಚಂದ್ರಮ್ಮ ಮತ್ತು ಬೆಂಗಳೂರು ನಗರ ಸಮಿತಿಯ ಹಣಮಂತ ಕಟ್ಟಿಮನಿ ಭಾಗವಹಿಸಿದ್ದರು.