“ಯುವಜನತೆ, ಸಮಾಜ ನಕಾರಾತ್ಮಕ ಚಿಂತನೆ ಬಿಟ್ಟು ದೇಶದ ಅಭಿವೃದ್ಧಿಗೆ ಪೂರಕವಾಗುವ ಕಾರ್ಯ ಕೆಲಸಗಳನ್ನು ಮಾಡಬೇಕಾಗಿದೆ. ಅದೇ ನಿಜವಾದ ದೇಶಪ್ರೇಮ” ಎಂದು ದಾವಣಗೆರೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ “ಜಗಳೂರಿನ ಸೌಹಾರ್ದತೆ ಇಮಾಮ್ ಸಾಬ್” ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಿಂದ ಸಮಾಜದಲ್ಲಿ ಆಗುವ ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಯೊಬ್ಬರೂ ಈ ದೇಶದ ಸತ್ಪ್ರಜೆಗಳು. ನಾವು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಭಾರತೀಯರಾಗಿ ಹುಟ್ಟಿದ ಮೇಲೆ ನಾವು ಎಲ್ಲರೂ ಸಮಾನರು ಎಂಬುದನ್ನು ಅರಿತುಕೊಳ್ಳಬೇಕು, ಪರಸ್ಪರ ಒಬ್ಬರಿಗೊಬ್ಬರು ವಿಶ್ವಾಸ ಪ್ರೀತಿ ಹಂಚುವಂತಹ ವಾತಾವರಣವನ್ನು ನಿರ್ಮಿಸ ಬೇಕು. ಸಮಾಜವನ್ನು ಅರ್ಥ ಮಾಡಿಕೊಂಡು ಹೋಗುವುದು, ನಾವು ಮಾಡುವ ಕೆಲಸ ದೇಶವನ್ನು ಒಗ್ಗಟ್ಟಾಗಿ ಇರುವಂತೆ ಮಾಡುವುದಾಗಿದೆ. ಈ ರೀತಿ ಕೆಲಸ ಮಾಡುವವರೇ ನಿಜವಾದ ದೇಶ ಪ್ರೇಮಿಗಳು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳನ್ನು ಬಿಟ್ಟು, ಅವರವರ ತಪ್ಪುಗಳು ಮತ್ತು ಕೆಲಸಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಕಾರಾತ್ಮಕ ಮಾತು, ಕೆಲಸಗಳನ್ನು ಬಿಟ್ಟು, ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು. ಯುವ ಜನಾಂಗವು ಉತ್ತಮ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗುವ ಮಾತು ಮತ್ತು ಕೆಲಸಗಳನ್ನು ಮಾಡಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯುತ್ ಗುಣಮಟ್ಟ ಕಾಯ್ದುಕೊಳ್ಳಲು, ಉದ್ಯೋಗ ಸೃಷ್ಟಿಗೆ ಶೀಘ್ರ 3000 ಪವರ್ ಮ್ಯಾನ್ ನೇಮಕ.
ಇದೇ ವೇಳೆ ಜೊತೆಯಲ್ಲಿದ್ದ ಮಾತನಾಡಿದ ಜಗಳೂರು ಶಾಸಕ ದೇವೇಂದ್ರಪ್ಪ “ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಖಾಲಿ ಇಲ್ಲ. ಈ ಬಗ್ಗೆ ಚರ್ಚೆ ಅಪ್ರಸ್ತುತ. ಖಾಲಿಯಾದ ನಂತರ ಪಕ್ಷದ ಹೈಕಮಾಂಡ್ ಆ ಬಗ್ಗೆ ಸ್ಪಷ್ಟನೆ ನೀಡಲಿದೆ. ನನಗೂ ಕೂಡ ಆಸೆ ಇದೆ. ನಾನೇನು ಸನ್ಯಾಸಿಯಲ್ಲ. ಆದರೆ ಹಿರಿತನದ ಪರಿಗಣನೆ ಮೇಲೆ ಹೈಕಮಾಂಡ್ ನಿರ್ಧರಿಸುತ್ತದೆ. ಜಗಳೂರು ತಾಲೂಕಿನ ಪಲ್ಲಾಗಟ್ಟಿ ಬಳಿಯ ಸರ್ಕಾರಿ ಬಿಸಿಎಂ ಮೆಟ್ರಿಕ್ ಬಾಲಕಿಯರ ವಸತಿ ವಿದ್ಯಾರ್ಥಿನಿಲಯದ ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಸಮಯಕ್ಕೆ ಸರಿಯಾಗಿ ಮುಗಿದಿಲ್ಲ. ಕಟ್ಟಡದಲ್ಲಿ ಉತ್ತಮ ನೆಲಹಾಸು ಇಲ್ಲ, ಸರಿಯಾಗಿ ರಸ್ತೆ ಸಂಪರ್ಕ ಕಲ್ಪಿಸಿಲ್ಲ, ಸುತ್ತ ಕಾಂಪೌಂಡ್ ಇಲ್ಲ. ಕಟ್ಟಡ ಗುಣಮಟ್ಟ ಕಡಿಮೆ ಇದ್ದು, ಬಾಕಿ ಇರುವ ಗುಣಮಟ್ಟದ ಕಾಮಗಾರಿ ಮುಗಿಯುವವರೆಗೂ ಬಿಲ್ ಪ್ರಕ್ರಿಯೆ ನೆಡೆಸದಂತೆ ಬಿಸಿಎಂ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೇನೆ” ಎಂದು ತಿಳಿಸಿದರು.
ಈ ವೇಳೆ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, ನಿವೃತ್ತ ಪ್ರಾಂಶುಪಾಲ ದಾದಾ ಪೀರ್ ನವಲೇಹಾಳ್, ಮಾಜಿ ಮೇಯರ್ ಚಮನ್ ಸಾಬ್, ಹಾಗೂ ಇತರರು ಜೊತೆಯಲ್ಲಿದ್ದರು.
