ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣ ಸಂಬಂಧ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ರಾಯಚೂರು ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಇಂದ್ರ ಎಂ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸುರು ಗ್ರಾಮ ಪಂಚಾಯತಿ ಸೇರಿ ತಾಲೂಕಿನ ಇನ್ನಿತರ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಖಚಿತ ದೂರು ಆಧರಿಸಿ ಸಮಗ್ರ ತನಿಖೆ ನಡೆಸಿ ಆರೋಪ ಸಾಬೀತಾದ ಹಿನ್ನೆ ಅಮಾನತುಗೊಳಿಸಲಾಗಿದೆ.
ಲಿಂಗಸಗೂರು ಸಹಾಯಕ ಕೃಷಿ ನಿರ್ದೆಶಕಿ ನಾಗರತ್ನ ಎಚ್ ಹುಲಕೋಟಿ ಮತ್ತು ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಅಮಾನತುಗೊಂಡ ಇಬ್ಬರು ಅಧಿಕಾರಿಗಳು. 1 ಕೋಟಿಗೂ ಅಧಿಕ ಮೊತ್ತದ ಮಾನವ ದಿನಗಳನ್ನು ಪಾವತಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಹಣ ದುರುಪಯೋಗದ ಆರೋಪ ಸ್ಪಷ್ಟವಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 1957ರನ್ವಯ ಶಿಸ್ತು ಕ್ರಮ ಜರುಗಿಸಲು ಹಾಗೂ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.
2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಂಡ 2 ಕೋಟಿಗೂ ಅಧಿಕ ಅನುದಾನದಲ್ಲಿ ಅವ್ಯವಹಾರದ ದೂರು ಆಧರಿಸಿ ಪ್ರಾಥಮಿಕ ತನಿಖೆ ಕಡತ ಪರಿಶೀಲನೆಗೆ ತನಿಖಾ ತಂಡ ರಚಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಜೋಳದ ರಾಶಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಲಕ್ಷಾಂತರ ಮೌಲ್ಯದ ಧಾನ್ಯ ಬೂದಿ
ವರದಿಯನ್ವಯ 173 ಕಾಮಗಾರಿಗಳು ಚಾಲ್ತಿಯಲ್ಲಿದ್ದು, 150 ಕಾಮಗಾರಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಜಿ.ಪಂನಿಂದ ಅನುಮೋದನೆ ಪಡೆಯದೇ 170 ಕಾಮಗಾರಿಗಳ ನೋಂದಣಿ ಮಾಡಿ 67.11 ಲಕ್ಷದ ಪಾವತಿಗೆ ಕ್ರಮವಹಿಸಿದ್ದು ಕಾಮಗಾರಿಗಳ ಭೌತಿಕ ಸ್ಥಳ ಪರಿಶೀಲನೆಯಲ್ಲಿ ಅನುಷ್ಠಾನವಾಗದಿರುವುದು ಕಂಡುಬಂದಿದೆ. ದಾಖಲೆ ಕ್ರಮಬದ್ದವಾಗಿರುವುದಿಲ್ಲ. ಪರಿಶೀಲನೆಗೆ ಹಾಜರುಪಡಿಸದಿರುವ ಕುರಿತು ತನಿಖಾ ತಂಡ ವರದಿ ನೀಡಿತ್ತು.
