- 2014ರಲ್ಲಿ ರಚಿಸಲಾಗಿದ್ದ ‘ತಜ್ಞರ ಸಮಿತಿ’ಯನ್ನೇ ಪುನರ್ ರಚಿಸಿದ ಸರ್ಕಾರ
- ಬೆಂಗಳೂರು ಸಮಗ್ರ ಆಡಳಿತವನ್ನು ಒಂದೇ ವೇದಿಕೆಗೆ ತರುವ ಉದ್ದೇಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನರ್ ರಚಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದ್ದು, ತಜ್ಞರ ಸಮಿತಿ ರಚನೆ ಮಾಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಆಡಳಿತ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ದೃಷ್ಟಿಯಿಂದ ನಿಗದಿತ ಸಮಯದಲ್ಲಿ ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಪಾಲಿಕೆಯನ್ನು ಪುನರ್ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
2014ರಲ್ಲಿ ಬಿಬಿಎಂಪಿ ವಿಭಜಿಸಲು ವರದಿ ನೀಡಲು ರಚಿಸಲಾಗಿದ್ದ ‘ತಜ್ಞರ ಸಮಿತಿ’ಯನ್ನೇ ಸರ್ಕಾರ ಪುನರ್ ರಚಿಸಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸರ್ಕಾರ ‘ತಜ್ಞರ ಸಮಿತಿ’ ರಚಿಸಿದ್ದು, ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರಾಗಿದ್ದ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಕಾರ್ಯಪಡೆಯ ಸದಸ್ಯ ರವಿಚಂದರ್ ಅವರು ಸದಸ್ಯರಾಗಿದ್ದಾರೆ.
ಸರ್ಕಾರ ರಚಿಸಲಾದ ಸಮಿತಿಯೂ ಬಿಬಿಎಂಪಿ ಪುನರ್ ರಚನೆ ಸಂಬಂಧ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನು ನೀಡಬೇಕು. ಈ ಸಮಿತಿಗೆ ಬೇಕಾದ ಅಗತ್ಯ ಸೌಲಭ್ಯ ಹಾಗೂ ಮಾಹಿತಿಯನ್ನು ಪಾಲಿಕೆಯ ವಿಶೇಷ ಆಯುಕ್ತರು (ಆಡಳಿತ) ಒದಗಿಸಬೇಕು. ಹಾಗೂ ಕರೆದಿರುವ ಸಭೆಗಳಿಗೆ ಸೂಕ್ತವಾಗಿ ಸಮನ್ವಯ ಕಾರ್ಯ ನಿರ್ವಹಿಸಬೇಕು.
ಈ ಸುದ್ದಿ ಓದಿದ್ದೀರಾ? ತಾಯಿ ಕೊಂದು ಮೃತದೇಹವನ್ನು ಸೂಟ್ಕೇಸ್ನಲ್ಲಿಟ್ಟು ಪೊಲೀಸ್ ಠಾಣೆಗೆ ತಂದ ಮಗಳು
ಸಮಿತಿಗೆ ಉತ್ತಮ ಕಚೇರಿ, ಕೊಠಡಿ, ಅಗತ್ಯ ಸಿಬ್ಬಂದಿ, ಪೀಠೋಪಕರಣಗಳು, ವಾಹನ ಸೌಲಭ್ಯ ಸೇರಿದಂತೆ ಇನ್ನಿತರ ಅವಶ್ಯಕ ಸೌಲಭ್ಯ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ ಎಸ್ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ವನ್ನು ರಚಿಸಿ ಅದರ ಅಡಿ ಬೆಂಗಳೂರು ನಗರದ ಸಮಗ್ರ ಆಡಳಿತವನ್ನು ಒಂದೇ ವೇದಿಕೆಯಲ್ಲಿ ತರುವುದು ಈ ಆದೇಶದ ಉದ್ದೇಶವಾಗಿದೆ.