ಸಮುದಾಯದ ಆರೋಗ್ಯ ಪ್ರಗತಿಯಾಗದ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ. ಸಮುದಾಯದ ಆರೋಗ್ಯವೇ ಭಾರತದ ಪ್ರಗತಿಯ ಸಂಕೇತ ಎಂದು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಅಭಿಮತ ವ್ಯಕ್ತಪಡಿಸಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ, ಸ್ವಾಮಿ ವಿವೇಕಾನಂದ ಅಧ್ವನಯ ಕೇಂದ್ರ ಹಾಗೂ ಯುವ ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂದಕ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸ್ವಾಮಿ ವಿವೇಕಾನಂದರು ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೂಲಕ ಸಮಗ್ರ ಸಮಾಜದ ಅಭಿವೃದ್ಧಿಯನ್ನು ಒತ್ತಿಹೇಳಿದ್ದರು. ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಲಭ್ಯವಾಗಬೇಕು ಮತ್ತು ಸಮುದಾಯದ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ನೀಡುವ ಸಂಸ್ಥೆಗಳು ಸಮಾಜದ ಸುಸ್ಥಿರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುತ್ತವೆ” ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಡಾ. ಹಣಮಂತಯ್ಯ ಪೂಜಾರಿ ಮಾತನಾಡಿ, “ಸ್ವಾಮಿ ವಿವೇಕಾನಂದ ಅವರು ಯುವಜನತೆಗೆ ಆರೋಗ್ಯ ಮತ್ತು ಸಮಾಜ ಸೇವೆಯ ಮಹತ್ವವನ್ನು ಉಪದೇಶಿಸಿದ್ದರು. ಅವರ ತತ್ವಾನುಸಾರ, ಯುವಜನರು ಕೇವಲ ತಮ್ಮ ಸ್ವಾಸ್ಥ್ಯವಷ್ಟೇ ಅಲ್ಲ, ಸಮುದಾಯದ ಆರೋಗ್ಯಕ್ಕೂ ಜಾಗೃತಿಯುಂಟು ಮಾಡಬೇಕು. ಪೌಷ್ಟಿಕ ಆಹಾರ, ಶಾರೀರಿಕ ವ್ಯಾಯಾಮ ಮತ್ತು ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಕೋಶದ ಸಂಯೋಜಕ ಡಾ. ಅಶೋಕ ಕುಮಾರ್ ಸುರಸುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವದಿನದ ಅಂಗವಾಗಿ ಏರ್ಪಡಿಸಿದ್ದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ಬಿಎಡ್ ವಿದ್ಯಾರ್ಥಿನಿ ತೇಜಸ್ವಿನಿ ಪ್ರಥಮ ಸ್ಥಾನ, ಸಮಾಜ ಕಾರ್ಯ ವಿಭಾಗದ ಭೂಮಿಕ ಕೊಣ್ಣೂರ್ ದ್ವಿತೀಯ ಸ್ಥಾನ ಹಾಗೂ ಸವಿತಾ ಚಿಗರಿ ತೃತೀಯ ಸ್ಥಾನ ಪಡೆದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ; ಗೃಹಿಣಿ ವಿಜಯಲಕ್ಷ್ಮಿ ಕಾರ್ಯಕ್ಕೆ ಮೆಚ್ಚುಗೆ
ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಡಾ. ಕಲಾವತಿ ಕಾಂಬಳೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಮೇಲ್ವಿಚಾರಕ ಬಾಬುರಾವ ತಳವಾರ, ಆಲ್ ಅಮೀನ ವೈದ್ಯಕೀಯ ಕಾಲೇಜಿನ ಆಪ್ತ ಸಮಾಲೋಚಕಿ ಅನ್ನಪೂರ್ಣ, ಮಹಾದೇವಿ, ಶಿಲ್ಪಾ, ವಿಜಯಕುಮಾರ ಮತ್ತು ಶಿಕ್ಷಣ ಅಧ್ಯಯನ ವಿಭಾಗ ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಇದ್ದರು.