2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೆಕ್ಯಾತರ ಮನೆಗೆ ನಿನ್ನೆ (ಫೆ.22) ಮೇಘಾಲಯ ರಾಜ್ಯದ ರಾಜ್ಯಪಾಲ ಚಂದ್ರಶೇಖರ ಹೆಚ್. ವಿಜಯಶಂಕರ ಅವರು ಭೇಟಿ ನೀಡಿ ಪದ್ಮಶ್ರೀ ಪುರಸ್ಕೃತರನ್ನು ಸನ್ಮಾನಿಸಿದರು.
ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಹೇಳುವ ತೊಗಲು ಗೊಂಬೆಯಾಟದ ಕೆಲವು ಹಾಡುಗಳನ್ನು ಭೀಮವ್ವ ಕುಟುಂಬದವರು ರಾಜ್ಯಪಾಲರ ಎದುರು ಹಾಡಿ ಗಮನ ಸೆಳೆದರು. ಬಳಿಕ ಭೀಮವ್ವ ಕುಟುಂಬಸ್ಥರು ಮಾತನಾಡಿ, “ಈ ಕಲೆಯನ್ನು ನಾವು ಸುಮಾರು ನಾಲ್ಕು ತಲೆಮಾರುಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ. ನಮ್ಮ ಕಲೆಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಅತೀವ ಸಂತಸ ತಂದಿದೆ. ಈ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಧನ್ಯವಾದಗಳು” ಎಂದರು.

ತೊಗಲು ಗೊಂಬೆಯಾಟ ವೀಕ್ಷಿಸಿ ಆಕರ್ಷಿತರಾದ ರಾಜ್ಯಪಾಲು, ಈ ಕಲೆಯ ಪ್ರದರ್ಶನವನ್ನು ಮೇಘಾಲಯದ ರಾಜಭವನದಲ್ಲಿ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಈ ಕಲಾವಿದರನ್ನು ಆಹ್ವಾನಿಸಿ, ಕಾರ್ಯಕ್ರಮ ಆಯೋಜನೆ ಮಾಡುವಂತೆ ಅವರ ವಿಶೇಷ ಕರ್ತವ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಕಾರ್ಖಾನೆ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ: ಬಸವರಾಜ ರಾಯರಡ್ಡಿ
ಈ ವೇಳೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮೋರನಾಳ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
