ರಾಜಕೀಯವನ್ನು ಪರಿವರ್ತನೆಯನ್ನು ಅಸ್ತ್ರವಾಗಿಸಲು, ಹೇಗಾದರೂ ಸರಿ ಚುನಾವಣೆಯನ್ನು ಗೆಲ್ಲಬೇಕೆನ್ನುವ ಹಳೆಯ ರಾಜಕಾರಣಕ್ಕೆ ಕೊನೆ ಹಾಡಿ, ಮುಕ್ತ ರಾಜಕಾರಣ ಕಟ್ಟಲು ಜಾಗೃತ ಕರ್ನಾಟಕ ಸಂಘಟನೆಯನ್ನು ಬೆಂಬಲಿಸಿ ಎಂದು ಜಾಗೃತ ಕರ್ನಾಟಕ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಕರೆ ನೀಡಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ “ರಾಜಕೀಯ ಸಂಘಟನೆಯಾಗಿ ಜಾಗೃತ ಕರ್ನಾಟಕ ಘೋಷಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗೃತ ಕರ್ನಾಟಕ ರಾಜಕೀಯ ಪಕ್ಷವಲ್ಲ ಆದರೂ ಚುನಾವಣೆಯ ರಾಜಕೀಯವನ್ನು ಬದಲಾಯಿಸುವ ಗುರಿ ಹೊಂದಿದೆ. ರಾಜಕೀಯ ಒಳ್ಳೆಯವರಿಗಲ್ಲ ಎಂಬುದನ್ನು ಸುಳ್ಳಾಗಿಸುವ ಆಕಾಂಕ್ಷೆಯಿಂದ ಮುನ್ನಡೆಯುತ್ತಿದೆ. ಧರ್ಮ ದ್ವೇಷ, ಜಾತಿ ಪ್ರೇಮ ಮತ್ತು ಹಣಬಲ ಮುಕ್ತ ರಾಜಕಾರಣ ಕಟ್ಟಲು ಹಾಗೂ ಹೊಸಪಕ್ಷವಲ್ಲದೆ, ಹಳೆಯ ಪಕ್ಷಗಳಲ್ಲೂ ಬದಲಾವಣೆ ತರುತ್ತಾ, ರಾಜಕಾರಣವನ್ನು ಬದಲಾಯಿಸಲು ಜಾಗೃತ ಕರ್ನಾಟಕವೀಗ ರಾಜಕೀಯ ಸಂಘಟನೆಯಾಗಿ ಘೋಷಿಸಿಕೊಂಡಿದೆ ಎಂದು ತಿಳಿಸಿದರು.
ರಾಜಕಾರಣ ಬದಲಾಗದೆ ದೇಶದಲ್ಲಿ ಏನು ಬದಲಾಗದು ಎಂಬುದು ಜಾಗೃತ ಕರ್ನಾಟಕದ ನಿಲುವಾಗಿದೆ. ಭಾರತ ರಾಜಕೀಯ ಇಂದಿನ ಸ್ಥಿತಿಯ ಬಗ್ಗೆ ಅತೀವ ಆತಂಕದಲ್ಲಿದ್ದೇವೆ ಮತ್ತು ರಾಜಕೀಯವು ಇದೇ ಆದಿಯಲ್ಲಿ ಮುಂದುವರೆದರೆ ಹಸಿವು, ಅಸಮಾನತೆ ಶೋಷಣೆಯಿಂದ ಬಿಡುಗಡೆ ಪಡೆಯಲು ಸಾಧ್ಯವೇ ಇಲ್ಲ. ಸುಳ್ಳು, ಅಸಹನೆ ಹಾಗೂ ದ್ವೇಷದ ಕಥನಗಳಿಂದ ಕಟ್ಟಲಾಗುವ ಮತೀಯ ರಾಜಕೀಯದಿಂದ ಕೊನೆಗೆ ಭಾರತ ಎಂಬ ದೇಶವೇ ಉಳಿಯುವುದಿಲ್ಲ ಎಂಬ ಸತ್ಯವನ್ನು ಮನಗಂಡು , ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂವಿಧಾನ ಪ್ರತಿಪಾದಿಸುವ ಸತ್ಯ,ನ್ಯಾಯ,ಸಮಾನತೆ ಮತ್ತು ಉದಾರತೆ,ಪ್ರಾಮಾಣಿಕತೆ,ವ್ಯಕ್ತಿಗೌರವ ಮತ್ತು ಬಂಧುತ್ವದ ಮೌಲ್ಯಗಳನ್ನು ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಮರುಸ್ಥಾಪಿಸಲು. ಧರ್ಮದ್ವೇಷ, ಹಣಬಲ ಮತ್ತು ಜಾತಿಯತೆಯ ಪ್ರಭಾವಗಳನ್ನು ರಾಜಕೀಯದಿಂದ ತೊಡೆದುಹಾಕಲು ಸರ್ವರ ಹಿತಕಾಯುವ ಪರಿವರ್ತನೆಯ ಅಸ್ತ್ರವಾಗಿ ರಾಜಕೀಯವನ್ನು ಮರು ರೂಪಿಸಲು ಜಾಗೃತ ಕರ್ನಾಟಕ ಸಂಘಟನೆ ಶ್ರಮಿಸಲಿದೆ ಎಂದು ಹೇಳಿದರು.
ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಬೆಲೆಯೇರಿಕೆಯಂತಹ ಜನಸಾಮಾನ್ಯರಿಗೆ ತೊಂದರೆಯಾಗುವ ಸಣ್ಣ ವಿಚಾರಗಳಿಗೂ ಬೀದಿಗಳಿದು ಹೋರಾಟ ನಡೆಸುವ ಕಾಲವೊಂದಿತ್ತು. ಆದರೆ ಪ್ರಸ್ತುತ ಹೋರಾಟದ ಮನೋಭಾವವೇ ಇಲ್ಲವಾಗಿ ಪ್ರಶ್ನೀಸುವ ಗುಣವನ್ನೆ ಕಳೆದುಕೊಳ್ಳುತ್ತಿರುವುದು ಆತಂಕ ಸೃಷ್ಠಿಸಿದೆ. ಹಾಗಾಗಿ ಜಾಗೃತ ಕರ್ನಾಟಕ ಸಂಘಟನೆ ಜನರ ನಡುವೆ ಚಿಂತನಶೀಲ ಮನೋಭಾವ ಮೂಡಿಸಿ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಬೆಳಸಲಿದೆ ಎಂಬ ವಿಶ್ವಾಸವಿದೆ ಎಂದರು.
ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಜನರ ಬದುಕಿನ ಬಗ್ಗೆ ಮಾತನಾಡುವ ರಾಜಕಾರಣ ದೂರವಾಗಿರುವ ಸಂದರ್ಭದಲ್ಲಿ ಜಾಗೃತ ಕರ್ನಾಟಕ ರಾಜಕೀಯ ಸಂಘಟನೆಯಾಗಿರುವುದು ಆಶಾಭಾವನೆಯನ್ನು ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸೂರ್ಯ ತೇಜಸ್ವಿ, ಸಿದ್ದು ಸೂರನಹಳ್ಳಿ, ಶಶಿ ಕುಮಾರ್, ಆದಮ್ ಖಾನ್ ,ಬಾಬು ಮನಸೆ, ಚೇತನ್ , ಪತ್ರಕರ್ತ ಹರೀಶ್ ಕಮ್ಮನಕೋಟೆ, ಹಿರಿಯ ಪತ್ರಕರ್ತ ನಾಗೇಂದ್ರಪ್ಪ, ಹರೀಶ್ ಬಿ.ಟಿ ಇನ್ನಿತರರು ಹಾಜರಿದ್ದರು.
