ಮೈಸೂರು ಜಿಲ್ಲೆಯ ಹುಣಸೂರು ನಗರದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ, ಕಚೇರಿಗೆ ಬರುವವರಿಗೆ ಬಳಕೆಯಾಗುವ ರೀತಿಯಲ್ಲಿ ನಿತ್ಯ ಶುಚಿತ್ವ ಕಾಪಡಬೇಕು ಎಂದು ಆಗ್ರಹಿಸಿ ಸಿಪಿಐಎಂ ಪಕ್ಷ ಹುಣಸೂರು ತಾಲೂಕು ಸಮಿತಿಯಿಂದ ಉಪ ವಿಭಾಗಧಿಕಾರಿ ವಿಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳಾದ “ಸ್ವಚ್ಚ ಬಾರತ, ನಿರ್ಮಲ ಕರ್ನಾಟಕ” ನೀತಿಗಳಿಗೆ ವಿರುದ್ಧವಾಗಿ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳುತಿದ್ದು, ಸರ್ಕಾರದ ನಿಯಮಗಳನ್ನು ಕಚೇರಿಗಳಲ್ಲಿ ಪಾಲಿಸದಿರುವುದನ್ನು ಸಿಪಿಐಎಂ ಖಂಡಿಸಿದೆ.
“ಹುಣಸೂರು ಮಿನಿ ವಿಧಾನಸೌದದ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ, ಉಪ ನೋಂದಣಾದಿಕಾರಿ ಕಚೇರಿ, ಭೂಮಾಪನ ಕಚೇರಿ ಹಾಗೂ ಇತರೆ ಕಚೇರಿಗಳಿಗೆ ನಿತ್ಯವೂ ನೂರಾರು ಸಂಖ್ಯೆಯ ಜನ ಬರುತ್ತಾರೆ. ಆದರೆ ಇಲ್ಲಿನ ಶೌಚಲಯ ಜನರ ಬಳಕೆಗೆ ಯೋಗ್ಯವಾಗಿಲ್ಲ. ಶುಚಿತ್ವ ಇಲ್ಲವೇ ಇಲ್ಲ, ಸರಿಯಾದ ನಿರ್ವಹಣೆ ಇರದೆ ಗಬ್ಬು ನಾರುತ್ತಿವೆ. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯ” ಎಂದು ಹುಣಸೂರು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬೆಳ್ತೂರು ವೆಂಕಟೇಶ್ ಆರೋಪಿಸಿದರು.
“ಅಧಿಕಾರಿಗಳಿಗೆ ಪ್ರತ್ಯೇಕ ಶೌಚಾಲಯಗಳಿರುವುದರಿಂದ, ಜನರಿಗೆ ಆಗುತ್ತಿರುವ ತೊಂದರೆ ಅರ್ಥವಾಗುತ್ತಿಲ್ಲ. ಗಂಡಸರು ಕಚೇರಿಯ ಅವರಣದಲ್ಲಿ ಮೂತ್ರ ವಿಷರ್ಜನೆ ಮಾಡುತ್ತಾರೆ. ಇದನ್ನು ಕಂಡೂ ಕಾಣದಂತೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ. ಮಹಿಳೆಯರಿಗೆ ಆಗುತ್ತಿರುವ ತೊಂದರೆ ಅಧಿಕಾರಿಗಳಿಗೆ ಗೊತ್ತೇ ಆಗುತಿಲ್ಲ. ಸಾವಿರಾರು ಜನ ಬರುವ ತಾಲೂಕು ಕಚೇರಿಯಲ್ಲಿ ಶೌಚಾಲಯ, ಅಗತ್ಯ ವ್ಯವಸ್ಥೆಗಳು ಇಲ್ಲದಿರುವುದು ತಾಲೂಕು ಆಡಳಿತದ ವೈಫಲ್ಯತೆ ಎದ್ದು ಕಾಣುತ್ತಿದೆ” ಎಂದು ಸಿಪಿಐಎಂ ಪಕ್ಷದ ಕಲ್ಕುಣಿಕ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
“ಮಹಿಳೆಯರು ಶೌಚಾಲಯಕ್ಕೆ ಹೋಗಲು ಆಗುವುದಿಲ್ಲ. ಯಾರೇ ಆಗಲಿ ಶೌಚಾಲಯಕ್ಕೆ ಹೋಗದೆ ಇರಲು ಸಾಧ್ಯವೇ ಇಲ್ಲ. ವಯಸ್ಸಾದವರು, ಅರೋಗ್ಯ ಸರಿ ಇಲ್ಲದಿರುವವರೂ ಕೂಡಾ ಕಚೇರಿಗೆ ಬರುತ್ತಾರೆ. ತಾಲೂಕು ಕಚೇರಿಯಲ್ಲಿ ದಿನಗಟ್ಟಲೆ ಕಾಯಬೇಕು. ಏನಾದರೂ ಕೆಲಸ ಆಗಬೇಕು ಅಂದರೆ ಆಗ ಏನು ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರು ಪಟ್ಟಣದ ಇತರೆ ಸರ್ಕಾರಿ ಕಚೇರಿಗಳ ಪರಿಸ್ಥಿತಿಯೂ ಕೂಡ ಇದೇ ರೀತಿ ಇದ್ದು ಅಧಿಕಾರಿಗಳು ಗಮನಹರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಗೆ ಮೈಸೂರಿನಲ್ಲಿ ಚಾಲನೆ
ಮಹದೇವ್ ತಮ್ಮಡಹಳ್ಳಿ, ಶಿವರಾಮು ಹೆಚ್ ಎಸ್ ಬನ್ನಿಕುಪ್ಪೆ, ಮಹದೇವ್ ಇದ್ದರು.
