ಕನ್ನಡಿಗರ ಭಾವನೆಗೆ ಧಕ್ಕೆ ತರುವ ಮರಾಠಿ ಪುಂಡರ ವಿರುದ್ಧ ರಾಜ್ಯ ಸರಕಾರವು ದೃಢತೆಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕನ್ನಡಿಗರ ವಿಚಾರದಲ್ಲಿ ಈ ಭಂಡ ಸರಕಾರ ರಾಜಕಾರಣ ಮಾಡುತ್ತದೆ ಎಂದು ಅನಿಸುತ್ತಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುವುದು ಮತ್ತು ಪುಂಡಾಟಿಕೆ ಮಾಡುವವರಿಂದ ಎರಡೂ ರಾಜ್ಯಗಳಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕನ್ನಡಿಗರನ್ನು ಬೆದರಿಸುವವರು, ಪುಂಡಾಟಿಕೆ ಮಾಡುವವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದು ರಾಜ್ಯಕ್ಕೇ ಹರಡುವ ಸಾಧ್ಯತೆ ಇದೆ” ಎಂದರು.
“ಉಚಿತ ವಿದ್ಯುತ್ ಹಣವನ್ನು ಸರಕಾರ ಭರಿಸಬೇಕಿದೆ. ಇಲ್ಲದಿದ್ದರೆ, ಸಾರ್ವಜನಿಕರಿಂದ ಹಣ ವಸೂಲಿಗೆ ಅವಕಾಶ ಕೊಡುವಂತೆ ಎಸ್ಕಾಂಗಳು ಕೆಇಆರ್ಸಿಗೆ ಮನವಿ ಸಲ್ಲಿಸಿವೆ. ನಾನು ಇವತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ವೇಳೆ ಕೊಟ್ಟ ಗ್ಯಾರಂಟಿ ಯೋಜನೆಗಳ ಕುರಿತ ವಾಗ್ದಾನ ಈಡೇರುತ್ತಿಲ್ಲ; ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಪಿಡಬ್ಲ್ಯುಡಿ, ನೀರಾವರಿ ಇಲಾಖೆಗಳು ವಿದ್ಯುತ್ ಕಂಪೆನಿಗಳಿಗೆ 6 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದಾಗಿ ಸಚಿವರೇ ಹೇಳಿದ್ದಾರೆ. ಇನ್ನೊಂದು ಕಡೆ ಶಕ್ತಿ ಯೋಜನೆ ಪ್ರಯುಕ್ತ ರಾಜ್ಯ ಸರಕಾರವು ಕೆಎಸ್ಆರ್ಟಿಗೆ 7 ಸಾವಿರ ಕೋಟಿ ಬಾಕಿ ಕೊಡಬೇಕಾಗಿದೆ. ಮತ್ತೊಂದು ಕಡೆ ವಿದ್ಯುತ್ ಕಂಪೆನಿಗಳು ಹಣಕ್ಕಾಗಿ ತಾಕೀತು ಮಾಡಿವೆ. ರಾಜ್ಯ ಸರಕಾರ ಹಣ ಕೊಡಬೇಕು; ಇಲ್ಲವೇ ಗ್ರಾಹಕರ ಮೇಲೆ ಈ ಭಾರ ಹೊರಿಸಬೇಕಾಗುತ್ತದೆ” ಎಂದರು.
“ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಕುರಿತಂತೆ ಜನರ ಕಿವಿಗೆ ಹೂವು ಮುಡಿಸುವುದನ್ನು ಬಿಟ್ಟು ವಾಸ್ತವಿಕ ಸತ್ಯವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕದ ಆರ್ಥಿಕ ಸ್ಥಿತಿಗತಿ, ಸಂಕಷ್ಟದ ಕುರಿತು ಮುಖ್ಯಮಂತ್ರಿಗಳು ಉತ್ತರಿಸಬೇಕು” ಎಂದು ಆಗ್ರಹಿಸಿದರು.
ಅಲ್ಲಿ ನಿಮ್ಮದೇ ಪಕ್ಷದ ಸರ್ಕಾರ ಇದೆ,, ಅಧ್ಯಕ್ಷರು ಅವರನ್ನು ಸಂಪರ್ಕಿಸಿ ಬುದ್ಧಿವಾದ ಹೇಳಬಹುದಿತ್ತು,,