ಸಮಯ ಸಿಕ್ಕಾಗಲೆಲ್ಲ ಹಿಂದುತ್ವ, ಸಂಘ ಪರಿವಾರ ಹಾಗೂ ಬಿಜೆಪಿಯ ಬಗ್ಗೆ ಅಭಿಮಾನ ಒಳಗೊಂಡ ಆವೇಶದಿಂದ ಮಾತನಾಡುವುದರ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲೂ ಆಕ್ರೋಶ ಹೊರಹಾಕುವ ನಟ ಹಾಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಇತ್ತೀಚಿಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮಗೆ ಏನೇನೆಲ್ಲಾ ಆಯಿತು ಎಂಬ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಫೇಸ್ಬುಕ್, ಇನ್ಸ್ಟಾ ಹಾಗೂ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್, “ನನ್ನ ಇತ್ತೀಚಿನ ಕುಂಭಮೇಳಕ್ಕೆ ಹೋದ ಉದಾಹರಣೆ.. ಕೆಲವರು, ‘ನೀವು ಸಂಸದ.. ನಿಮಗೇನು ದುಡ್ಡಿದೆ, ಹೋದಿರಿ’ ಎಂದರು. ನಾನು ಹೋದ ಸತ್ಯ ತಿಳಿಸುವೆ..” ಎಂದು ಮುಂದುವರಿಸಿದ್ದಾರೆ.
“ದೆಹಲಿಯ ಎಲ್ಲ ವರಿಷ್ಠರು, ನಮ್ಮ ರಾಜ್ಯದ ಉಸ್ತುವಾರಿ, ನಮ್ಮ ರಾಜ್ಯದ ಕೇಂದ್ರ ಮಂತ್ರಿಗಳು ಹಾಗೂ ಅವರ ಆಪ್ತಸಹಾಯಕರ ಕೇಳಿದೆ. ಯಾರು ತುಟಿ ಬಿಚ್ಚಲಿಲ್ಲ, ಸಹಾಯ ಮಾಡಲಿಲ್ಲ. 144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಕ್ಕೆ ನನಗೆ ಯೋಗವಿಲ್ಲವೇ ಎಂದು ದುಃಖಿಸಿದೆ. ಮನೆಯಲ್ಲಿ ಯಜ್ಞ ಮಾಡಿಸಿ, ‘ರಾಯರಲ್ಲಿ’ ಬೇಡಿಕೆ ಇಟ್ಟು, ‘ನನ್ನ ಜೊತೆ ನೀವಿದ್ದೀರಿ ಚಿಂತೆ ಏಕೆ’ ಎಂದು ವಿಮಾನ ಟಿಕಿಟ್ಗೆ ಯತ್ನಿಸಿದೆ. ಎಲ್ಲ ಸೋಲ್ಡ್ ಔಟ್ ಆಗಿತ್ತು. ಮತ್ತೆ ವಿಘ್ನವೇ ಎಂದು ಕೊರಗಿದೆ” ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಫಿಲ್ಮ್ ಅಕಾಡೆಮಿ ಅವಾಂತರ -ಭಾಗ 4 | ಲೈಬ್ರರಿಗಾಗಿ ಬಿಡಿಎ ಕೊಟ್ಟ ಕೋಟ್ಯಂತರ ರೂಪಾಯಿ ಏನಾಯಿತು?
“ಸ್ವಲ್ಪ ಸಮಯದ ನಂತರ ಕರೆ ಬಂತು. ‘ಸಾರ್ ಒಂದೇ ಟಿಕೆಟ್ ಇದೆ ಪರಿಮಳ ಅವರಿಗೆ ಆಗದು, ಏನು ಮಾಡಲಿ’ ಎಂದ. ಆಗ ನನ್ನ ಉತ್ತರ, ‘ಬರುವಾಗ ಒಬ್ಬನೇ, ಹೋಗುವಾಗ ಒಬ್ಬನೇ ಬುಕ್ ಮಾಡು’ ಎಂದೆ ಹೋದೆ! ಅಲ್ಲಿ ನೋಡಿದರೆ ಸಹಾಯ ಮಾಡಲು ಯಾರು ಇಲ್ಲ. ಇಸ್ಕಾನ ಆಲಯದ ಕಾರು ಮಾತ್ರ ಇತ್ತು. ಕೋಟಿ ಜನಸಂಖ್ಯೆಯ ನಡುವೆ ನಾನು ಯಾರು ಇಲ್ಲದ ಅನಾಥನಾದೆ” ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್.
“ರಾಯರೇ, ನೀವಿದ್ದೀರಿ ಎಂದೆ ಮನದಲ್ಲಿ. ನೋಡಿ ಬಂದ ಒಬ್ಬ ಪರಿಚಯವಿಲ್ಲದ ಮಾಜಿ ಕ್ರಿಕೆಟಿಗ ಪುಂಜ. ಆತನಿಗೆ ಸಿಕ್ಕ ಪ್ರೋಟೋಕಾಲ್ ಬಳಸಿ, ಕೋಟಿ ಜನಜಂಗುಳಿ ನಡುವೆ ಪೊಲೀಸರ ಹಾರನ್ ಹಾಕಿ, ಪಕ್ಕ ತ್ರಿವೇಣಿ ಸಂಗಮಕ್ಕೆ ಹೋಗಿ ಸ್ನಾನ ಮಾಡಿಸಿಬಿಟ್ಟ. ಅವರ ಮತ್ತೊಬ್ಬ ಸಂಗಡಿಗರು ನಮ್ಮ ಮಲ್ಲೇಶ್ವರ ಹೆಮ್ಮೆಯ ಶಾಸಕರು ಅಶ್ವಥ್ ನಾರಾಯಣ್ ಅವರು. ವಾಪಸ್ ಬರುವಾಗ ನಮ್ಮ ವಿಮಾನ 5 ಗಂಟೆ ವಿಳಂಬ ಎಂದರು. ಏನು ಮಾಡೋದು ಪಾದಚಾರಿ ಮಾರ್ಗದಲ್ಲಿ ಕಾಫಿ ಕುಡಿಯುತ್ತ ಕುಳಿತೆ. ನಂತರ ಮತ್ತೊಂದು ಪವಾಡ. ವಿಮಾನದ ಉಸ್ತುವಾರಿ ಬಂದು, ʼಸಾರ್, ನಿಮ್ಮ ವಿಮಾನ ತಡವಾಗುತ್ತೆ. ಈಗ ಹಾರಲು ತಯಾರಿರುವ ವಿಮಾನ ಇದೆ, ಹೋಗಿʼ ಎಂದು ಟಿಕೆಟ್ ಬದಲಿಸಿ ಬೆಂಗಳೂರಿಗೆ ಕಳಿಸಿಬಿಟ್ಟ. ನಾನೊಬ್ಬ ಸಂಸದನಾಗಿ, ದೇಶದ ದೊಡ್ಡ ರಾಜಕಾರಣಿಗಳ ಜೊತೆ ಕೆಲಸ ಮಾಡಿದ್ದರೂ ನಾನು ಯಾವುದೇ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ಈಗ ಹೇಳಿ ನಮ್ಮ ಬದುಕಿಗೆ ಯಾರು ಬೇಕು? ಕೆಲಸಕ್ಕೆ ಬಾರದ ಸಮಯೋಚಿತ ಸಹಾಯಕ್ಕೆ ಬರುವ ಮನುಷ್ಯರೋ ಅಥವಾ ನಮ್ಮೊಳಗೆ ಇರುವ ದೇವರ?ʼʼ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.

