ಜಿಲ್ಲಾಯಾದ್ಯಂತ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಸೋಮವಾರ ಕಲಬುರಗಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಂಬರುವ ಬೇಸಿಗೆಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಾರ್ಗಸೂಚಿಗಳನ್ನು ನೀಡಿದರು.
ʼಮಾರ್ಚ್ 1 ರಿಂದ ಮುಂದಿನ ಮೂರು ತಿಂಗಳ ಕಾಲ ಪ್ರತಿ 15 ದಿನಕ್ಕೊಮ್ಮೆ ತಹಶೀಲ್ದಾರರು ಮತ್ತು ತಾಲೂಕಾ ಪಂಚಾಯತ್ ಇಒಗಳು ತಾಲೂಕು ಮಟ್ಟದಲ್ಲಿ ಕುಡಿಯುವ ನೀರು ಕುರಿತು ಸಭೆ ನಡೆಸಿ ಪರಾಮರ್ಶಿಸಬೇಕು. ಟಾಸ್ಟ್ ಫೋರ್ಸ್ ಸಭೆ ಕರೆದು ಸಭೆ ನಡಾವಳಿ ಸಿದ್ದಪಡಿಸಿ ಅದರಂತೆ ಅನುದಾನ ಖರ್ಚು ಮಾಡಬೇಕು. ಕಳೆದ ವರ್ಷ ನೀರು ಪೂರೈಕೆ ಮಾಡಿದ ಖಾಸಗಿ ಬೋರವೆಲ್, ಟ್ಯಾಂಕರ್ಗಳಿಗೆ ಬಾಕಿ ಉಳಿದಿದೆ ಎಂಬ ಮಾಹಿತಿ ಇದ್ದು, ಕೂಡಲೇ ಸದರಿ ಬಿಲ್ ಕ್ಲಿಯರ್ ಮಾಡಬೇಕುʼ ಎಂದು ಜಿಲ್ಲಾಧಿಕಾರಿ ಮತ್ತು ಸಿಇಒಗಳಿಗೆ ನಿರ್ದೇಶನ ನೀಡಿದರು.
ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ನಗರ,ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಂಡು ಬರುವ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೂಡಲೇ ತಾಲೂಕುವಾರು ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಿಂದಿನ 5 ವರ್ಷಗಳ ಸಮಸ್ಯಾತ್ಮಕ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಕಂದಾಯ, ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನಾ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವುದರ ಜೊತೆಗೆ ಇದಕ್ಕೆ ಬೇಕಾದ ಹಣ ಸಹ ಹೊಂದಿಸಲಾಗುವುದುʼ ಎಂದರು.
ʼಪ್ರತಿ ಬೇಸಿಗೆಯಲ್ಲಿ ಹೊಸದಾಗಿ ಬೋರವೆಲ್ ಕೊರೆಯುವುದು ಬೇಡ. ಬದಲಾಗಿ ಇರುವ ಬೋರವೆಲ್ಗಳಿಗೆ ಫ್ಲಶ್ಸಿಂಗ್ ಮಾಡಬೇಕು, ಮೋಟಾರ್ ಕೆಟ್ಟಿದರೆ ಅದನ್ನು ಬದಲಾಯಿಸಬೇಕು. ಯುದ್ದ ಆರಂಭವಾದಾಗ ಶಸ್ತ್ರಾಭ್ಯಾಸ ಬೇಡ. ಈಗಿನಿಂದಲೇ ಸಮಸ್ಯಾತ್ಮಕ ಹಳ್ಳಿ, ನಗರ ಪಟ್ಟಣಗಳಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕುʼ ಎಂದು ಸೂಚಿಸಿದರು.
ʼಹವಾಮಾನ ಇಲಾಖೆ ಪ್ರಕಾರ ಈ ಬಾರಿ ಹೆಚ್ಚಿನ ಬಿಸಿಲಿನ ಜೊತೆಗೆ ಬಿಸಿ ಗಾಳಿ ಇದೆ ಎಂದು ವರದಿ ಬಂದಿದೆ. ಹೀಗಾಗಿ ಎಲ್ಲಾ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಬಳಿ ಪಿ.ಡಿ. ಖಾತೆಯಲ್ಲಿ ಹಣ ಇದ್ದು, ಅದನ್ನು ಸಮರ್ಪಕವಾಗಿ ಬಳಸಿʼ ಎಂದರು.
ʼ15ನೇ ಹಣಕಾಸು ಯೋಜನೆಯಡಿ ಬೋರವೆಲ್ ಕೊರೆಯಲು ದಕ್ಷಿಣ ಕ್ಷೇತ್ರಕ್ಕೆ ₹96 ಲಕ್ಷ ಉತ್ತರ ಕ್ಷೇತ್ರಕ್ಕೆ ₹79 ಲಕ್ಷ, ನಗರಕ್ಕೆ ₹1 ಕೋಟಿ ಸೇರಿ ಒಟ್ಟಾರೆ ₹2.75 ಕೋಟಿ ಮೀಸಲಿರಿಸಲಾಗಿದೆ. ಪ್ರತಿ ವಾರ್ಡ್ಗೆ ಒಂದು ಟ್ಯಾಂಕರ್ ಮೀಸಲಿರುವಂತೆ ಎಲ್ ಆ್ಯಂಡ್ ಟಿ ಕಂಪನಿಗೆ ಸೂಚಿಸಲಾಗಿದೆ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಕೂಡಲೇ ಸಭೆ ಕರೆದು ಸಮನ್ವಯ ಸಾಧಿಸಬೇಕುʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಿಎಂ ಕಚೇರಿಯಿಂದ ಅಂಬೇಡ್ಕರ್-ಭಗತ್ ಸಿಂಗ್ ಭಾವಚಿತ್ರಗಳ ತೆರವು: ದೆಹಲಿ ಮಾಜಿ ಸಿಎಂ ಆತಿಶಿ ಆರೋಪ
ಸಭೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.