ಪುಣೆ ನಗರದ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ ವ್ಯಕ್ತಿಯೊಬ್ಬ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಕ್ರಿಮಿನಲ್ ದಾಖಲೆ ಹೊಂದಿರುವ ಆರೋಪಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದು, ಸದ್ಯ ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ ಎಂದು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುಣೆ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಈ ಅಪರಾಧಗಳನ್ನು ನಿಭಾಯಿಸಲು ವಿಫಲವಾಗಿರುವುದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಗೃಹ ಇಲಾಖೆಯನ್ನು ದೂಷಿಸಿದ್ದಾರೆ.
ಇದನ್ನು ಓದಿದ್ದೀರಾ? ಆಘಾತಕಾರಿ ಘಟನೆ | ಅತ್ಯಾಚಾರ ವಿರೋಧಿಸಿದಕ್ಕೆ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ; ಕಾಮುಕ ಬಾಲಕ ಬಂಧನ
ಶಂಕಿತ ಆರೋಪಿ ದತ್ತಾತ್ರಯ ರಾಮದಾಸ್ ಗಡೆ (36) ವಿರುದ್ಧ ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್ಆರ್ಟಿಸಿ) ಅತಿದೊಡ್ಡ ಬಸ್ ಜಂಕ್ಷನ್ಗಳಲ್ಲಿ ಸ್ವರ್ಗೇಟ್ ಒಂದಾಗಿದೆ. ಮಂಗಳವಾರ ಬೆಳಿಗ್ಗೆ 5.45ರ ಸುಮಾರಿಗೆ ಸತಾರಾ ಜಿಲ್ಲೆಯ ಫಾಲ್ಟನ್ಗೆ ಹೋಗುವ ಒಂದು ಪ್ಲಾಟ್ಫಾರ್ಮ್ನಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ “ದೀದಿ (ಸಹೋದರಿ) ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ” ಎಂದು ಹೇಳಿದನು ಎಂದು ವರದಿಯಾಗಿದೆ.
ಬಳಿಕ ಯುವತಿಯನ್ನು ಬೇರೆಡೆ ನಿಲ್ಲಿಸಿದ್ದ ಖಾಲಿಯಾಗಿದ್ದ ‘ಶಿವ ಶಾಹಿ’ ಎಸಿ ಬಸ್ ಬಳಿ ಕರೆದೊಯ್ದನು. ಬಸ್ನಲ್ಲಿ ಯಾವುದೇ ದೀಪ ಇಲ್ಲದ ಕಾರಣ ಬಸ್ನ ಒಳಗೆ ಹೋಗಲು ಯುವತಿ ಹಿಂಜರಿದಳು. ಆದರೆ ಆರೋಪಿ ಮನವೊಲಿಸಿ ಬಸ್ನೊಳಗೆ ಕರೆದೊಯ್ದನು. ಬಳಿಕ ಅತ್ಯಾಚಾರ ಎಸಗಿದನು ಎಂದು ಯುವತಿ ಪೊಲೀಸರಿಗೆ ತಿಳಿಸಿದಳು.
ಇದನ್ನು ಓದಿದ್ದೀರಾ? ಆಘಾತಕಾರಿ ಪ್ರಕರಣ | 300 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವೈದ್ಯ
ಪೊಲೀಸರು ಸಿಸಿಟಿವಿಯಲ್ಲಿ ಆರೋಪಿಯನ್ನು ಗುರುತಿಸಿದ್ದು, ಆತನನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಪ ಪೊಲೀಸ್ ಆಯುಕ್ತೆ ಸ್ಮಾರ್ತನಾ ಪಾಟೀಲ್, “ಘಟನೆ ನಡೆದಾಗ ನಿಲ್ದಾಣದ ಆವರಣದಲ್ಲಿ ಅನೇಕ ಜನರು ಮತ್ತು ಹಲವಾರು ಬಸ್ಗಳು ಇದ್ದವು” ಎಂದು ಹೇಳಿದರು.
ಘಟನೆಯ ನಂತರ ಮಹಿಳೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿಲ್ಲ. ಬದಲಿಗೆ ಬಸ್ನಲ್ಲಿ ಪ್ರಯಾಣ ಮಾಡುವಾಗ ತನ್ನ ಸ್ನೇಹಿತನಿಗೆ ಕರೆ ಮಾಡಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ತಿಳಿಸಿದ್ದಾಳೆ. ಸ್ನೇಹಿತ ದೂರು ನೀಡುವಂತೆ ತಿಳಿಸಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ.
