ಮಳೆಗಾಲ ಸಮೀಪಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಭಾಗದಲ್ಲಿ ಭೂಕುಸಿತ ಉಂಟಾಗುವ ಸಂಭವವಿರುವುದರಿಂದ ತಡೆಗೋಡೆ ನಿರ್ಮಾಣದ ಜತೆಗೆ ಅಗತ್ಯವಿರುವ ಕಡೆ ಭೂಸ್ವಾಧೀನಕ್ಕೆ ಕ್ರಮವಹಿಬೇಕಾಗಿದೆ ಎಂದು ಹಾಸನ ಸಂಸದ ಶ್ರೇಯಸ್ ಎಂ ಪಟೇಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಹಲವು ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, “ಭೂಕುಸಿತವಾಗುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧಿನಾಧಿಕಾರಿ, ಎನ್ಹೆಚ್ 75 ಯೋಜನಾ ನಿರ್ದೇಶಕರು ವಿವಿಧ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ” ಎಂದು ತಿಳಿಸಿದರು.
“ಅಧಿಕಾರಿಗಳು ಸ್ಥಳ ಪರಿಶೀಲನೆಯ ನಂತರ ಒಂದು ತಿಂಗಳವರೆಗೆ ರಸ್ತೆಗೆ ಪರ್ಯಾಯ ಮಾರ್ಗ ಮಾಡಿದ್ದೇವೆಂದು ಹೇಳಿದ್ದಾರೆ, ಮುನ್ನೆಚ್ಚರಿಕೆ ಕುರಿತು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತದೆ” ಎಂದರು.
“ಮುಂದಿನ ಎರಡ್ಮೂರು ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ಹಿಂದೆ ಎಲ್ಲೆಲ್ಲಿ ಭೂಕುಸಿತ ಉಂಟಾಗಿತ್ತು, ಅಂತಹ ಕಡೆಗಳಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಒಂದು ತಂಡವಾಗಿ ಪರಿಶೀಲನೆ ಮಾಡಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಇದೆ, ಪರಿಹಾರ ಏನು ಎಂಬುದರ ಬಗ್ಗೆ ಅವಲೋಕನ ಮಾಡಿದ್ದೇವೆ” ಎಂದು ಹೇಳಿದರು.
“ಬರುವ ಜೂನ್ 30ರೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೇ.100 ರಷ್ಟು ಭರವಸೆ ನೀಡಿದ್ದಾರೆ. ಹೆಚ್ಚೆಂದರೆ ಮತ್ತೊಂದು ತಿಂಗಳು ಮುಂದಕ್ಕೆ ಹೋಗಬಹುದು. ಒಟ್ಟಿನಲ್ಲಿ ಮುಂದಿನ ಮರ್ನಾಲ್ಕು ತಿಂಗಳಲ್ಲಿ ಹೆದ್ದಾರಿ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಲಿದೆ” ಎಂದು ತಿಳಿಸಿದರು.

“ಮುಖ್ಯವಾಗಿ ಮಳೆಗಾಲದಲ್ಲಿ ದೊಡ್ಡತಪ್ಪಲು ಸೇರಿದಂತೆ ಕೆಲವು ಕಡೆ, ಭೂಕುಸಿತ ತಡೆಯಲು ಒತ್ತು ನೀಡಿದ್ದೇವೆ. ಹಿಂದೆ ಭೂಸ್ವಾಧೀನ ಮಾಡಿದವರ ಅವೈಜ್ಞಾನಿಕ ಕ್ರಮ ಹಾಗೂ ತಪ್ಪಿನಿಂದಾಗಿ ನೇರವಾಗಿ ಗುಡ್ಡ ಕಡಿದಿರುವುದರಿಂದ ಕೆಲವೆಡೆ ಕುಸಿತಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ಇಳಿಜಾರಾಗಿ ಗುಡ್ಡ ಕತ್ತರಿಸಲು ಮತ್ತಷ್ಟು ಭೂಸ್ವಾಧೀನ ಮಾಡಬೇಕಿದೆ.
ಅದಕ್ಕೂ ಮುನ್ನ ಕಾಫಿಗಿಡ, ಮರಗಳಿಗೆ ಪರಿಹಾರ ಕೊಡಬೇಕಿದೆ. ಇನ್ನೂ ಎಷ್ಟು ಮೀಟರ್ ಭೂಮಿ ಬೇಕು ಎಂಬುದರ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ವರದಿ ಸಿದ್ದಪಡಿಸಲು ಸೂಚಿಸಿದ್ದೇನೆ” ಎಂದರು.
ಈ ಮಾರ್ಗದಲ್ಲಿ ಆಗಬೇಕಿರುವ ಫ್ಲೈಓವರ್ ಕಾಮಗಾರಿಗೆ ಹಾಸನದ ಚನ್ನಪಟ್ಟಣ ಸರ್ಕಲ್, ರಾಜೀವ್ ಕಾಲೇಜು ಹಾಗೂ ಬಿಟ್ಟಗೌಡನಹಳ್ಳಿ ಬಳಿ ತಾಂತ್ರಿಕ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಅಂಚಿಹಳ್ಳಿ ಫ್ಲೈಓವರ್ 1 ತಿಂಗಳಲ್ಲಿ, ಬೂವನಹಳ್ಳಿ ಬಳಿಯ ಫ್ಲೈಓವರ್ 3 ತಿಂಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ. ಸಕಲೇಶಪುರ ಬಳಿಯ ದೋಣಿಗಾಲ್ ಕ್ರಾಸ್ನಲ್ಲಿ ಕಾಕ್ರಿಂಟ್ ರಸ್ತೆ ಮಾಡಲು ರಸ್ತೆ ಬಂದ್ ಮಾಡಲು ಕೇಳಿದ್ದಾರೆ. ಬಂದ್ ಮಾಡುವ ಮುಂಚೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗುವುದು. ರಸ್ತೆ ಕಾಮಗಾರಿಗೆ ಸಂಬಂದಿಸಿದಂತೆ ಪ್ರಸ್ತಾವನೆ ಸಿದ್ದಪಡಿಸಿದ್ದು, ಸಂಬಂಧಪಟ್ಟ ಮಂತ್ರಿಯವರಿಗೆ ಸಲ್ಲಿಸಿ ₹13 ಕೋಟಿ ಹಣ ಬಿಡುಗಡೆಗೆ ಮನವಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಕಾಡಾನೆ ಸಮಸ್ಯೆ
“ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದೆ. 10 ದಿನದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಸಾವಿಗೆ ನಾವು ಕೊಡುವ ಪರಿಹಾರ ಶಾಶ್ವತ ಅಲ್ಲ, ಅದು ಕ್ಷಣಿಕ, ಬದಲಾಗಿ ಶಾಶ್ವತ ಪರಿಹಾರ ಆಗಬೇಕು. ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಮಾಡಬೇಕು” ಎಂದು ಹೇಳಿದರು.
“ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿ ಇದೆ. ಸರ್ಕಾರ, ಜನಪ್ರತಿನಿಧಿಗಳು, ಸಚಿವರು ಒಟ್ಟುಗೂಡಿ ಕೆಲಸ ಮಾಡಬೇಕಿದೆ. ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ನಾನು ಮನವಿ ಮಾಡಿದ್ದೇನೆ. ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ. ಆನೆಧಾಮ ನಿರ್ಮಾಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ ಎಷ್ಟು ಅನುದಾನ ನಿಗದಿ ಮಾಡುತ್ತಾರೋ ಎಂಬುದನ್ನು ನೋಡಿಕೊಂಡು ಕೇಂದ್ರಕ್ಕೂ ಒತ್ತಡ ಹಾಕಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಸಭೆ: ಹೊಡೆದಾಡಿಕೊಂಡ ಕೇಸರಿ ನಾಯಕರು
“ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ರಾಜಕೀಯ ಬೇಡ, ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಬೇಕು. ಬಂದ್ ಅಥವಾ ಪ್ರತಿಭಟನೆ ಮಾಡುವುದು ಪರಿಹಾರವಲ್ಲ. ಪಕ್ಷಾತೀತವಾಗಿ ಎಲ್ಲರೂ ಕೇಂದ್ರದ ಬಳಿಗೆ ಹೋಗೋಣ, ಎಲ್ಲರ ಕಡೆಯಿಂದಲೂ ಶೇ.100ರಷ್ಟು ಪ್ರಯತ್ನವಿರಬೇಕು. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಹಾಗೆಯೇ ಮೃತರ ಕುಟುಂಬಕ್ಕೆ ಹಾಲಿ ನೀಡುತ್ತಿರುವ ₹15 ಲಕ್ಷ ಪರಿಹಾರವನ್ನು ₹25 ಲಕ್ಷಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದೇನೆ” ಎಂದರು.
“ಗುಜ್ಜನಹಳ್ಳಿಗೆ ಭೇಟಿ ನೀಡಿದಾಗ ಸ್ಥಳೀಯರು ಅನೇಕ ಸಮಸ್ಯೆ ಹೇಳಿಕೊಂಡಿದ್ದು, ನೂರು ಇನ್ನೂರು ಎಕರೆ ಜಮೀನಿನಲ್ಲಿ ಬೆಳೆ ಮಾಡಿರುವ ಬೆಳೆಗಾರರು ಅರಣ್ಯ ಟಾಸ್ಕ್ ಫೋರ್ಸ್ ಗುಂಪಿನಲ್ಲಿದ್ದಾರೆ. ಅವರು ದಯಮಾಡಿ ಆನೆಗಳು ಬರುತ್ತಿರುವುದು ತಿಳಿದ ತಕ್ಷಣ ತಮ್ಮ ಕಾರ್ಮಿಕರಿಗೆ ಹೇಳಬೇಕು, ಕಾರ್ಮಿಕರನ್ನು ಕರೆದುಕೊಂಡು ಹೋಗಿ ಬರಬೇಕು, ಕೆಲಸದ ಸಮಯ ಬದಲಾಯಿಸಬೇಕು. ಪ್ಲಾಂಟರ್ಸ್ ಕೂಡಾ ಇದಕ್ಕೆ ಕೈ ಜೋಡಿಸಬೇಕು” ಎಂದರು.
ಉಪವಿಭಾಗಾಧಿಕಾರಿ ಡಾ. ಶೃತಿ, ಎನ್ಹೆಚ್ಎಐ ಯೋಜನಾ ನಿರ್ದೇಶಕ ಪ್ರವೀಣ ಕುಮಾರ್ ಸೇರಿದಂತೆ ಇತರರು ಇದ್ದರು.