ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ (ಹಂದಿ ಜೋಗಿ ಕಾಲೋನಿ) ಗ್ರಾಮದ ಕಿನ್ನರಿ ಕಲಾವಿದ ಸಿದ್ದಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿರಾ ಸೀಮೆ ಜಾನಪದ ಸೊಗಡಿನ ತವರೂರು ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಜೋಗೀರಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಶೆಟ್ಟಿಯಪ್ಪ ರವರ ಮಗನಾದ ಸುಮಾರು 65 ವರ್ಷದ ಸಿದ್ದಪ್ಪ ಅವರು ಸುಮಾರು 40 ವರ್ಷಗಳಿಂದ ಜಾನಪದ ಕಲೆಯಾದ ಜೋಗಿಪದಗಳಾದ ಅರ್ಜುನ್ ಜೋಗಿ ಹಾಡು, ಪಾಂಡವರ 12 ವರ್ಷಗಳ ವನವಾಸದ ಹಾಡು, ಮತ್ತು ಅರಗಿನ ಪರ್ವ ಜನಪದಗಳನ್ನು ಹಾಡಿಕೊಂಡು ಬಂದಿದ್ದಾರೆ. ಹಂದಿಜೋಗಿ ವಂಶಸ್ಥರಾದ ಸಿದ್ದಪ್ಪ ಅವರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಲ್ಲಿ ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿಯೂ ಸಹ ಜನಪದ ಕಲೆಯನ್ನು ವಿಸ್ತರಿಸುತ್ತಿದ್ದು ಇವರು ಹೋದ ಕಡೆಗಳಲ್ಲಿ ನೆಲೆಯಿಲ್ಲದೆ ಗುಡುಸಲು ಮತ್ತು ಮರದಡಿಗಳಲ್ಲಿ ವಾಸವಿದ್ದುಕೊಂಡು ಈ ಗೀತೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಡಿಕೊಂಡು ಜನಪದ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ.

ಹುಳಿಯಾರು, ಗುಬ್ಬಿ, ನಿಟ್ಟೂರು, ಬಾಣಸಂದ್ರ ಚಿಕ್ಕನಾಯಕನಹಳ್ಳಿ ಬೆಳ್ಳಾರ, ಕೆ.ಬಿ.ಕ್ರಾಸ್ ಬುಕ್ಕಾಪಟ್ಟಣ ,ಹಾಗಲವಾಡಿ ,ಕುರುಬರಹಳ್ಳಿ ಇನ್ನು ಬೇರೆ ಊರುಗಳಲ್ಲಿ ತಿರುಗಾಟ ನಡೆಸಿ ಇವರು ಜಾನಪದ ಗೀತೆಗಳನ್ನು ಹಾಡಿದ್ದಾರೆ.
ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯ ಜಾನಪದ ಕಲೆಯ ಜೋಗಿ ಪದಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮನೆಯ ಮುಂದೆ ಹಾಡುವ ಮೂಲಕ ಈ ಕಲಿಯನ್ನು ಉಳಿಸಿ ಬೆಳೆಸುತ್ತಿರುವ ತಾವರೆಕೆರೆ ಗ್ರಾಮದ ಸ್ವಲ್ಪ ದೂರದಲ್ಲಿರುವ ಹಂದಿ ಜೋಗಿಗಳ ಕುಟೀರಗಳಲ್ಲಿ ವಾಸ ಮಾಡುತ್ತಿರುವ ಜಾನಪದ ಕಲಾವಿದ ಸಿದ್ದಪ್ಪನವರಿಗೆ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ತಮ್ಮ ಹಾಡುಗಳ ಮೂಲಕ ಹಾಡುವ ಕಲೆಯನ್ನು ಈ ಕುಟುಂಬಗಳು ಕಳೆದ ಐದು ದಶಕಗಳಿಂದ ಮಾಡುತ್ತಾ ಬಂದಿವೆ. ಇಂತಹ ಜಾನಪದ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಲು 2023- 24ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿದ್ದಪ್ಪನವರಿಗೆ ಪ್ರಶಸ್ತಿ ನೀಡಿ ಗೌರವಿದೆ. ಪ್ರಶಸ್ತಿ ಜೊತೆಗೆ 25. ಸಾವಿರ ರೂಪಾಯಿ ಗೌರವಧನ ಸಿಗಲಿದೆ.