- ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಾಗ ಕೇರಳಕ್ಕೆ ತೆರಳಿದ್ದ ರಂಜನ್ ಸಿಂಗ್
- ಒಂದು ತಿಂಗಳಿಂದ ಮೇತೀ, ಕುಕಿ ಸಮುದಾಯಗಳ ನಡುವೆ ಹಿಂಸಾಚಾರ
ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಗಲಭೆ ಪೀಡಿತ ರಾಜ್ಯದ ಕೊಂಗಾ ಪ್ರದೇಶದಲ್ಲಿರುವ ಕೇಂದ್ರ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ನಿವಾಸಕ್ಕೆ ಅಪರಿಚಿತ ಉದ್ರಿಕ್ತರು ಗುರುವಾರ (ಜೂನ್ 15) ರಾತ್ರಿ ಬೆಂಕಿ ಹಚ್ಚಿದ್ದಾರೆ.
ಇಂಫಾಲದಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಅದರ ನಡುವೆಯೇ ರಾತ್ರಿ 11ರ ಸುಮಾರಿಗೆ ಸಾವಿರಕ್ಕೂ ಹೆಚ್ಚು ಜನರ ಗುಂಪು ಕೊಂಗಾ ಪ್ರದೇಶದಲ್ಲಿರುವ ರಂಜನ್ ಅವರ ನಿವಾಸದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದೆ.
ರಂಜನ್ ಸಿಂಗ್ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದಾರೆ. ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ಭಾರೀ ಹಾನಿಯಾಗಿದೆ. ಘಟನೆ ಸಂದರ್ಭದಲ್ಲಿ ರಂಜನ್ ಹಾಗೂ ಅವರ ಕುಟುಂಬ ಮಣಿಪುರದಲ್ಲಿ ಇರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆ ನಡೆದಾಗ ರಂಜನ್ ಅವರ ನಿವಾಸದಲ್ಲಿ ಒಂಬತ್ತು ಭದ್ರತಾ ಬೆಂಗಾವಲು ಪಡೆಯ ಸಿಬ್ಬಂದಿ, ಐದು ಭದ್ರತಾ ಸಿಬ್ಬಂದಿ ಮತ್ತು ಎಂಟು ಹೆಚ್ಚುವರಿ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಂಜನ್ ಸಿಂಗ್ ಅವರ ನಿವಾಸಕ್ಕೆ ದಾಳಿ ನಡೆಸಿದ ಉದ್ರಿಕ್ತರು ಎಲ್ಲ ದಿಕ್ಕುಗಳಿಂದ ಪೆಟ್ರೋಲ್ ಬಾಂಬ್ಗಳನ್ನು ಎಸೆದರು ಎಂದು ಸಚಿವರ ನಿವಾಸದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದರು.
“ಸರ್ಕಾರಿ ಕೆಲಸದ ವಿಚಾರವಾಗಿ ನಾನು ಈಗ ಕೇರಳದಲ್ಲಿದ್ದೇನೆ. ಅದೃಷ್ಟವಶಾತ್ ನನ್ನ ಮನೆಯಲ್ಲಿ ಕಳೆದ ರಾತ್ರಿ ಯಾರೊಬ್ಬರೂ ಗಾಯಗೊಂಡಿಲ್ಲ. ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ಗಳೊಂದಿಗೆ ಬಂದಿದ್ದರು. ನನ್ನ ಮನೆಯ ನೆಲಮಹಡಿ ಮತ್ತು ಮೊದಲ ಮಹಡಿಗೆ ಹಾನಿಯಾಗಿದೆ. ಈಗಲೂ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುವುದು ಸಂಪೂರ್ಣ ಅಮಾನವೀಯವಾಗಿದೆ” ಎಂದು ಘಟನೆಯ ಕುರಿತು ರಂಜನ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸೇನೆ ಮತ್ತು ಅರೆ ಪಡೆಗಳನ್ನು ನಿಯೋಜಿಸಲಾಗಿದೆ. ಅದಾಗ್ಯೂ, ಪೂರ್ವ ಇಂಫಾಲದ ಖಾಮೆಲಾಕ್ ಗ್ರಾಮದ ಮೇಲೆ ಶಂಕಿತ ಭಯೋತ್ಪಾದಕರು ಮಂಗಳವಾರ (ಜೂನ್ 13) ರಾತ್ರಿ ದಾಳಿ ನಡೆಸಿದ್ದರು.
ಘಟನೆಯಲ್ಲಿ 9 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕುಕಿ ಸಮುದಾಯದ ನಾಯಕಿ ನೆಮ್ಯಾ ಕಿಪ್ಗೆನ್ ಅವರ ಅಧಿಕೃತ ನಿವಾಸಕ್ಕೆ ಬುಧವಾರ (ಜೂನ್ 14) ರಾತ್ರಿ ಅಪರಿಚಿತರು ಬೆಂಕಿ ಹಚ್ಚಿದ್ದರು. ಗುರುವಾರವೂ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.
ರಂಜನ್ ಸಿಂಗ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿರುವ ಘಟನೆಯಿಂದ ಸ್ಥಳದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶ | ಲಾರಿ ಡಿಕ್ಕಿ ಹೊಡೆದು ಆನೆ ಮರಿಗಳು ಸಾವು
ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೇಟಿ ಮತ್ತು ಕುಕಿ ಸಮುದಾಯದ ನಡುವೆ ಒಂದು ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮೇತೀ ಸಮುದಾಯದ ಎಸ್ಟಿ ಮೀಸಲಾತಿ ಬೇಡಿಕೆ ವಿರೋಧಿಸಿ ಮೇ 3 ರಂದು ಮಣಿಪುರದಲ್ಲಿ ‘ಬುಡಕಟ್ಟು ಏಕತಾ ಮೆರವಣಿಗೆ’ ಆಯೋಜಿಸಲಾಗಿತ್ತು. ಇದು ಘರ್ಷಣೆಗೆ ಕಾರಣವಾಯಿತು.