ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ವತಿಯಿಂದ ಚಳುವಳಿಗಾರರು ಹಾಗೂ ವಿವಿಧ ಸಂಘಟನೆಯ ಮುಖಂಡರುಗಳ ಸಭೆ ಜಲದರ್ಶಿನಿಯಲ್ಲಿ ಇತಿಹಾಸ ತಜ್ಞರಾದ ಪ್ರೊ.ನಂಜರಾಜ ಅರಸ್ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮುಂದೂಡದೆ ಶೀಘ್ರವೇ ನಡೆಸುವಂತೆ ಆಗ್ರಹ ಮಾಡಿದರು.
” ಕಳೆದ 2023 ರಲ್ಲಿ ಮಹಾನಗರ ಪಾಲಿಕೆ ಸದಸ್ಯರ ಅಧಿಕಾರವಾಧಿ ಮುಗಿದಿದ್ದು, ಈಗಾಗಲೇ 16 ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದು, ಚುನಾವಣೆ ನಡೆಸಬೇಕು, ಮುಂದೂಡಬಾರದು ಮೈಸೂರಿನ ಅಭಿವೃದ್ಧಿ ವಿಚಾರ ಗಮನದಲ್ಲಿಡಬೇಕು. ಈಗಿರುವ ಮೈಸೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡಲು ಆಗಿಲ್ಲ, ಈಗಾಗಲೇ ಸರಿ ಸುಮಾರು 450 ಕೋಟಿ ನಷ್ಟ ಹೊಂದಿ ದಿವಾಳಿಯಾಗಿರುವ ಸಮಯದಲ್ಲಿ ಬೃಹತ್ ಮೈಸೂರು ಪಾಲಿಕೆ ಮಾಡ ಹೊರಟಿರುವುದು ಎಷ್ಟು ಸರಿ!.
ಶಾಸಕರುಗಳು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಸ್ಥಳಿಯ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲಾ , ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲಾ , ಸ್ಥಳೀಯ ಜನಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಕಸ, ಕುಡಿಯು ನೀರು, ವಿದ್ಯುತ್ , ದಾಖಲಾತಿಗಳನ್ನು ಪಡೆಯಲು ಹಲವಾರು ಬಾರಿ ಸುತ್ತಾಡಿಸುತ್ತಾರೆ ಹೀಗಾಗಿ ಕೊಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಇದೇ ತಿಂಗಳ ಮಾರ್ಚ್ 5 ರಂದು ಮಹಾನಗರ ಪಾಲಿಕೆ ಮುಂದೆ ಬೃಹತ್
ಪ್ರತಿಭಟನೆ ನಡೆಸಲಾಗುವುದು ” ಎಂದು ಎಚ್ಚರಿಕೆ ನೀಡಿದರು.

ಲ ಜಗನ್ನಾಥ್ ಮಾತನಾಡಿ ” ಪ್ರಜಾಪ್ರಭುತ್ವ ಎಂದರೆ ಚುನಾವಣೆ, ಅಂತಹ ಚುನಾವಣೆಯೇ ನಡೆಯದಿದ್ದರೆ ಅದು ಪ್ರಜಾಪ್ರಭುತ್ವ ವಿರೋಧಿ ಎನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳ್ಳಬೇಕು ಸಮರ್ಪಕವಾಗಿ ಜಾರಿಗೊಳ್ಳಬೇಕು, ಜನರಿಗೆ ಆಡಳಿತ ಸೇವೆ ಲಭ್ಯ ಆಗಬೇಕು ಎನ್ನುವುದಾದರೆ ಚುನಾವಣೆ ನಡೆಸಿ ” ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ ” ಗ್ರೇಟರ್ ( ಬೃಹತ್ ) ಮೈಸೂರು ಮಾಡಲು 99 ವಾರ್ಡ್ ಗಳಿಗೆ ಹೆಚ್ಚಿಸಲು ತೀರ್ಮಾನ ಮಾಡಿದ್ದಾರೆ, ಆದರೆ, ಇದಿಷ್ಟು ವಾರ್ಡ್ ಗಳನ್ನು ಏಕಾಏಕಿ ಹೆಚ್ಚಿಸಿದರೆ ಆ ಎಲ್ಲಾ ಹೊಸ ಬಡಾವಣೆಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆಯಾ ಎಂಬುದನ್ನು ಚಿಂತನೆ ಮಾಡಬೇಕು. ಗ್ರೇಟರ್ ಮೈಸೂರು ಮಾಡಲು 15 ವರ್ಷಗಳಿಂದ ಪ್ರಯತ್ನ ನಡಿತಾ ಇದೆ, ಆದರೂ ಸಫಲವಾಗಿಲ್ಲಾ, ಮುಖ್ಯವಾಗಿ ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಕಸಬಾ, ಗ್ರಾಮಾಂತರ ತಾಲ್ಲೂಕು ಒಳಗೊಂಡಂತೆ ಬೃಹತ್ ಮಹಾನಗರ ಪಾಲಿಕೆ ಮಾಡ ಹೊರಟಿರುವುದು ಎಷ್ಟು ಸರಿ.ಈಗಿರುವ ಮಹಾನಗರ ಪಾಲಿಕೆ ದಿವಾಳಿಯಾಗಿರುವಾಗ ಇನ್ನ ಮೇಲ್ದರ್ಜೆಗೆ ಏರಿಸುವುದು ಸರಿಯೇ ” ಎಂದರು.
ಸೋಸಲೆ ಸಿದ್ದರಾಜು ಮಾತನಾಡಿ ‘ ಸರ್ಕಾರ ಭಾಗ್ಯಗಳನ್ನು ಕೊಡುವುದರಲ್ಲಿ ನಿರತವಾಗಿದೆ, ಚುನಾವಣೆ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಇದನ್ನು ಎಲ್ಲರೂ ಪ್ರಶ್ನಿಸಬೇಕಿದೆ ‘ ಎಂದರು.
ಅರವಿಂದ್ ಶರ್ಮ ಮಗನಾಡಿ ” ಬೃಹತ್ ಮೈಸೂರು ಮಾಡುವ ಮೂಲಕ ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾಗೆ ಮಣೆ ಹಾಕುವುದು ನಿಲ್ಲಿಸಲಿ. ಈಗಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಸಂಪೂರ್ಣವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ , ಹಾಗಾಗಿ ನಗರದ ಹೊರವಲಯದ ಬಡಾವಣೆಗಳನ್ನು ಸೇರಿಸಿಕೊಳ್ಳುವಾಗ ಆ ಜನರಿಗೆ ತಕ್ಷಣಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯನಾ ಎಂಬುದರ ಬಗ್ಗೆ ಚರ್ಚೆಯಾಗಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕನ್ನಡ ಸಾಹಿತ್ಯಾಭಿವೃದ್ಧಿಗೆ ಶರಣರ ಕೊಡುಗೆ ಅಪಾರ: ಕಸಾಪ ಮಾಜಿ ಅಧ್ಯಕ್ಷ ಟಿ ಪಿ ರಮೇಶ್
ಎಸ್ಡಿಪಿಐ ಪಕ್ಷದ ಉಪಾದ್ಯಕ್ಷ ಪುಟ್ಟನಂಜಯ್ಯ ದೇವನೂರು,ಆಮ್ ಆದ್ಮಿ ಪಕ್ಷದ ರಂಗಯ್ಯ , ಕೆಆರ್ಎಸ್ ಪಕ್ಷದ ರಾಜ್ಯ ಉಪಧ್ಯಕ್ಷ ಸೋಮಸುಂದರ್, ಮುಖಂಡರುಗಳಾದ ನಾಗೇಂದ್ರ ,ಮಾ ಸ ಪ್ರವೀಣ್, ರವಿಕುಮಾರ್, ರಾಜೇಂದ್ರ , ಆನಂದ್, ರವಿ , ಕನ್ನಡ ಹೋರಾಟಗಾರ ಸುರೇಶ್ ಬಾಬು , ತಾಯಿನಾಡು ಪಕ್ಷದ ರಾಜ್ಯಾಧ್ಯಕ್ಷೆ ಯಮುನಾ,ನೂರ್ ಮರ್ಚೆಂಟ್ , ರೆಸ್ಪಾನ್ಸಿಬಲ್ ಸಿಟಿಜ಼ನ್ ವಾಯ್ಸ್ ನ ಎಂ ಎಫ್ ಕಲೀಂ , ಕದೀರ್ ಅಹಮ್ಮದ್ , ನಾಸೀಜ್ , ಪಾಷಾ , ಜಾವಿದ್ ಅಹಮದ್ , ಸಿದ್ದರಾಜು , ಶ್ರೀವಾರಿ ನಾಗರಾಜ್, ಸೇರಿದಂತೆ ಹಲವರು ಇದ್ದರು.
