ಏ.15ರವರೆಗೆ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಬೇಕು. ಬೆಳೆದು ನಿಂತ ಪೈರು ಸಂರಕ್ಷಣೆ ಮಾಡಬೇಕು. ಮೆಣಸಿನಕಾಯಿ ಬೆಲೆ ಕುಸಿತವಾಗಿದ್ದು, ತಕ್ಷಣ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶಹಾಪುರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಸಿ.ಬಿ.ಕಮಾನ್ನಿಂದ ನಗರದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೂಲಕ ಆಗಮಿಸಿ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಜಿ.ಪಂ. ಸಿಇಒ ಲವೀಶ್ ಒರ್ಡಿಯಾ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ʼಬೇಸಿಗೆ ಕಾಲದಲ್ಲಿ ಕುಡಿಯುವ ನೀರನ್ನು ಮಾನವೀಯತೆ ಮೇಲೆ ಬಿಡುಗಡೆ ಮಾಡಿದ್ದರೆ ರೈತರದ್ದು ಯಾವುದೇ ತಕರಾರು ಇರುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ಕತ್ತು ಹಿಸುಕಿ ರಾತ್ರೋರಾತ್ರಿ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿರುವುದು ಯಾವ ಪುರುಷಾರ್ಥಕ್ಕಾಗಿʼ ಎಂದು ರೈತ ಮುಖಂಡರು ಪ್ರಶ್ನಿಸಿದರು.
ʼಕಾಲುವೆಗೆ ನೀರು ಹರಿಸುವಂತೆ ಮನವಿ ಮಾಡಿದರೆ ಹಲವಾರು ಕಾನೂನು ಹೇಳುತ್ತಿರಿ. ಆದರೆ ಯಾವುದೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯದೆ ಹಾಗೂ ಯಾರ ಗಮನಕ್ಕೂ ತರದೆ ನೀರು ಹರಿಸಿದ್ದು, ನಮ್ಮ ರೈತರ ಶಾಪ ನಿಮಗೆ ತಟ್ಟಲಿದೆʼ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಆಕ್ರೋಶ ಹೊರಹಾಕಿದರು.
ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ʼಈಗಾಗಲೇ ಬೇಸಿಗೆ ಹಂಗಾಮಿನ ಬೆಳೆಗಳಾದ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಹತ್ತಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈಗ ಬೇಸಿಗೆ ಕಾಲವಾಗಿದ್ದರಿಂದ ಅಧಿಕ ನೀರು ಬೆಳೆಗೆ ಬೇಕಾಗುತ್ತದೆ. ಕಾಲುವೆಗೆ ನಿರಂತರ ನೀರು ಹರಿಸಿದರೆ ಸಮಸ್ಯೆ ಉಂಟಾಗುವುದಿಲ್ಲ. ಇಲ್ಲದೆ ಹೋದರೆ ರೈತರ ನಡುವೆ ಕಂದಕ ಉಂಟಾಗುತ್ತದೆ. ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ನಿಗಮದ ಅಧಿಕಾರಿಗಳು ಕಾಗಕ್ಕ ಗುಬ್ಬಕ್ಕನ ಕತೆ ಹೇಳಿ ರೈತರನ್ನು ಯಾಮಾರಿಸಬೇಡಿʼ ಎಂದು ತಿಳಿಸಿದರು.
ʼಬೇಸಿಗೆ ಕಾಲವಾಗಿದ್ದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ರೈತರ ಅನುಕೂಲಕ್ಕಾಗಿ 7ಗಂಟೆ ನಿರಂತರವಾಗಿ ವಿದ್ಯುತ್ ಹರಿಸಬೇಕು. ಇದರಿಂದ ಕೃಷಿ ಪಂಪಸೆಟ್ಗಳಿಗೆ ನೆರವಾಗಲಿದೆ. ತೊಗರಿ ಹಾಗೂ ಹತ್ತಿ ಖರೀದಿಯನ್ನು ಇನ್ನೂ ಒಂದು ತಿಂಗಳ ವಿಸ್ತರಿಸಬೇಕು. ತೀವ್ರವಾಗಿ ಕುಸಿತ ಕಂಡಿರುವ ಮೆಣಸಿನಕಾಯಿ ಬೆಳೆಗೆ ಕನಿಷ್ಠ ಬೆಂಬಲ ಮೇಲೆ ₹30ಸಾವಿರ ನೀಡಬೇಕುʼ ಎಂದು ರೈತರ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಾಜಿ ಎಂಎಲ್ಸಿ ಕಾಜಿ ಅರಶದ್ ಅಲಿ ನಿಧನ
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನಮ್ಮ ವಿ. ಪಾಟೀಲ, ಯಾದಗಿರಿ ಜಿಲ್ಲಾಧ್ಯಕ್ಷ ಶರಣು.ವಿ.ಮಂದರವಾಡ, ಜಿಲ್ಲಾಧ್ಯಕ್ಷೆ ಮಹಿಳಾ ಘಟಕ ಚಂದ್ರಕಲಾ ಬಾಗೂರು, ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಮುದ್ದಣ್ಣ ಅಮ್ಮಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಹಾಪೂರ ಮಲ್ಕಣ್ಣ.ಎಸ್.ಚಿಂತಿ, ಶಹಾಪೂರ ತಾಲೂಕಾಧ್ಯಕ್ಷ ಪ್ರಭಾಕರ ರೆಡ್ಡಿ ಕೊಂಗಂಡಿ, ಶೋರಾಪೂರ ತಾಲೂಕಾಧ್ಯಕ್ಷ ಭೀಮಣ್ಣ ನಾಯಕ, ವಡಗೇರಾ ತಾಲೂಕಾಧ್ಯಕ್ಷ ಮಲ್ಲಣ್ಣ ನೀಲಹಳ್ಳಿ, ಹುಣಸಗಿ ತಾಲೂಕಾಧ್ಯಕ್ಷ ಶಂಕರ ಜಾಧವ, ಗುರುಮಿಠಕಲ್ ತಾಲೂಕಾಧ್ಯಕ್ಷ ಭೀಮರಾಯ ಎಲ್ಲೇರಿ, ಯಾದಗಿರಿ ತಾಲೂಕಾಧ್ಯಕ್ಷ ಬಾಲಾಜಿ ಟಿ.ವಡಗೇರಾ ಇತರರು ಉಪಸ್ಥಿತರಿದ್ದರು.