ಗೋಮಾಳ-ಕೆರೆ, ಸ್ಮಶಾನ ಒತ್ತುವರಿ ತೆರವಿಗೆ ಆಗಮಿಸಿದ ಸರ್ವೇ ಅಧಿಕಾರಿಗಳೊಂದಿಗೆ ಭೂಮಿಯ ಅಳತೆ ಸರಿಯಾಗಿ ನೆಡೆಸಿಲ್ಲವೆಂದು ಗ್ರಾಮಸ್ಥರು ವಾಗ್ವಾದ ನೆಡೆಸಿ ವಾಪಸು ಕಳುಹಿಸಿದ ಘಟನೆ ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಕಬ್ಬೂರು ಗ್ರಾಮದ ಸರ್ವೇ ನಂಬರ್ 31-32ರಲ್ಲಿ ಇದ್ದ ಸರ್ಕಾರಿ ಗೋಮಾಳ, ಸ್ಮಶಾನದಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡಿ, , ಪೂರ್ವಜರ ಸಮಾಧಿ, ಅಸ್ಥಿಪಂಜರಗಳನ್ನು ನಾಶ ಮಾಡಲಾಗಿದೆ. ಕೆರೆ ಮತ್ತು ಗೋಮಾಳ ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸಿ, ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಕಬ್ಬೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳು, ಕಬ್ಬೂರು ಗ್ರಾಮದ ಗೋಮಾಳ ರಿ.ಸ.ನಂ.31 ಮತ್ತು 32, ಕೆರೆ ಸ.ನಂ.137ರಲ್ಲಿ ಜಮೀನನ್ನು ಅಳತೆ ಮಾಡಿ ಹದ್ದುಬಸ್ತು ಮಾಡಲು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಭೂಮಾಪಕರು ಸ್ಮಶಾನ, ಗೋಮಾಳ ಮತ್ತು ಕೆರೆಯ ಒತ್ತುವರಿ ಅಳತೆ ಆಗಮಿಸಿದ್ದರು.

ಅಳತೆ ಮಾಡುವ ಸಂದರ್ಭದಲ್ಲಿ ವ್ಯತ್ಯಯ ಕಂಡು ಬಂದಿದೆ. ನೀವು 1994ರಲ್ಲಿ ಇದ್ದ ಅಳತೆಯಂತೆ ಸರಿಯಾಗಿ ಅಳತೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಇದೇ ಭೂಮಾಪಕರು ಮೂರು ಬಾರಿ ಸರ್ವೆ ಮಾಡಿದ್ದರೂ ಸರಿಯಾಗಿ ಅಳತೆ ಮಾಡುತ್ತಿಲ್ಲ. ಹೀಗಾಗಿ ಡಿಜಿಪಿಎಸ್ ಸರ್ವೇ ಮಾಡಬೇಕೆಂದು ಪಟ್ಟು ಹಿಡಿದರು.
ಅಧಿಕಾರಿಗಳು ಅಳತೆ ಸರಿ ಇದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ನೀವು ದಾಖಲೆ
ಪತ್ರಗಳಲ್ಲಿರುವಂತೆ ಸರಿಯಾಗಿ ಅಳತೆ ಮಾಡುತ್ತಿಲ್ಲ. ನಿಮ್ಮ ಮನಸಿಗೆ ತಿಳಿದಂತೆ ಅಳತೆ ಮಾಡುತ್ತಿದ್ದೀರಿ ಎಂದು ಅಳತೆ ಮಾಡುವುದನ್ನು ಸ್ಥಗಿತಗೊಳಿಸಿ ಭೂಮಾಪಕರನ್ನು ವಾಪಸ್ ಕಳುಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕ್ರೀಡಾ ಇಲಾಖೆ ಮಳಿಗೆಗಳ ಹರಾಜಿಗೆ ಸಿಎಂ ರಾಜಕೀಯ ಕಾರ್ಯದರ್ಶಿಗೆ ಜಯಕರ್ನಾಟಕ ಮನವಿ.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ಗ್ರಾಮಸ್ಥರಾದ ಗಂಗಣ್ಣ, ಕುಮಾರಣ್ಣ, ರೇವಣ್ಣ, ಚಂದ್ರಪ್ಪ, ಪ್ರಸನ್ನ, ಗ್ರಾಪಂ ಸದಸ್ಯರಾದ ಕೋಟ್ಯೆಪ್ಪ, ಮಂಜುನಾಥ್, ಮಂಜುನಾಥ್ ವೈ. ಕಬ್ಬೂರು, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಸದಸ್ಯರು ಹಾಗೂ ಬಸವರಾಜ್ ಗೋಶಾಲೆ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.