ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋಟಖಿಂಡ್ಕಿ ಗ್ರಾಮವು ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಸುಮಾರು 600 ಮನೆಗಳು, 1800 ಮತದಾರರನ್ನು ಹೊಂದಿರುವ ಗ್ರಾಮವು ಕೃಷಿಯನ್ನೇ ನಂಬಿ ಬದುಕುತ್ತಿದೆ. ಬೆಳಗ್ಗೆ ಕೃಷಿ ಜೀವನಕ್ಕೆ ಹೋಗುವ ರೈತಾಪಿ ಕುಟುಂಬಗಳಿಗೆ ಬಹುಕಾಲದಿಂದ ಇದ್ದ ಕುಡಿಯುವ ನೀರಿನ ಸಮಸ್ಯೆ ಈಗಿಲ್ಲ. ಬಂಟನೂರ ರಸ್ತೆಯಲ್ಲಿ ಮಿಲಿಟರಿ ರಾಮನಗೌಡರು ಗ್ರಾಮದ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲೆಂದೆ ತಮ್ಮ ಜಮೀನಿನಲ್ಲಿಯೇ ಕೊಳವೆಬಾವಿ ತೊಡಲು ಅವಕಾಶ ನೀಡಿದ್ದಲ್ಲದೆ ಆ ಬಾವಿ ಇರುವ ಜಾಗವನ್ನು ಗ್ರಾಮಕ್ಕೆ ಬಿಟ್ಟು ಕೊಟ್ಟಿದ್ದಾರೆ. ಹೇರಳವಾಗಿ ನೀರು ಲಭ್ಯವಾಗಿದೆ. ಆದರೆ ʼದೇವರು ವರ ಕೊಟ್ಟರು ಪೂಜಾರಿ ವರ ಕೊಡʼ ಎನ್ನುವಂತೆ ಜನತೆಗೆ ನೀರು ಪೂರೈಕೆ ಸಮರ್ಪಕವಾಗಿಲ್ಲ ಎನ್ನುವುದು ಜನತೆಯ ಅಳಲು.

“ಬಹುಹಳ್ಳಿ ಯೋಜನೆ ನೀರಿಲ್ಲ ರೀ, ಹಳ್ಳದ ಬಳಿ ಬಾವಿ ತೋಡಿದ್ದಾರೆ. ಮಿಲಿಟರಿ ರಾಮನಗೌಡ್ರು ಜಾಗ ಬಿಟ್ಟು ಪುಣ್ಯ ಕಟ್ಟಿಕೊಂಡರು. ಆದರೆ, ವಾರಕ್ಕೊಮ್ಮೆ ನೀರು ಬಿಡ್ತಾರಾ… ಯಾಕಂತ ಕಾರಣ ಕೇಳಿದ್ರಾ ಪೈಪು ಒಡೆದಾವು, ಸಿಬ್ಬಂದಿಗೆ ಪಗಾರ ಕೊಟ್ಟಿಲ್ಲ ಅಂತಾರ. ಬ್ಯಾಸಿಗಿ ಬಂತು.. ದನಕರಾ, ಜನಕ್ಕ ವ್ಯಾಳಕ ಸಾಕಷ್ಟ ನೀರು ಸಿಗುವ ಹಾಗೆ ಆಗಬೇಕ್ರಿ, ಯಾರಿಗೆ ಹೇಳಿ ಪ್ರಯೋಜನ ಏನು, ನೀರು ಈಗ ಸಾಕಷ್ಟು ಇದೆ ಆದರೆ ನಮಗೆ ಬೇಕಾದಾಗ ಬರವಲ್ದು ಎಂದು ಗ್ರಾಮಸ್ಥರು ಅವಲತ್ತುಕೊಂಡರು.
ಮಹಿಳೆಯರೇ ಹಣ ಸೇರಿಸಿ ಗ್ರಾಮದ ಮಹಾದೇವಿಗೆ ರಥ ಮಾಡಿಸಿಕೊಟ್ಟು, ರಥವನ್ನು ತಾವೇ ಎಳೆದು ಗೌರವ ಪಡೆದ ಗ್ರಾಮವಿದು. ಆ ಮಹಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಯೂ ಹಾಳಾಗಿದ್ದು ಗುಂಡಿಗಳಿಂದ ತುಂಬಿ ಮನೆ ಬಳಕೆ ನೀರು ತುಂಬಿ ರಸ್ತೆಯಲ್ಲಿ ಓಡಾಡುವವರಿಗೆ ಸವಾಲೊಡ್ಡುತ್ತಿವೆ.
ಗ್ರಾಮದಲ್ಲಿ ಮುಖ್ಯ ರಸ್ತೆಯಾದಿಯಾಗಿ ಹಲವೆಡೆ ರಸ್ತೆಗಳು ಹಾಳಾಗಿವೆ. ಬಂಟನೂರ ರಸ್ತೆಯಲ್ಲಿನ ಎಸ್.ಸಿ ಕಾಲೋನಿಯಲ್ಲಿನ ರಸ್ತೆ ಬೀರಲಿಂಗೇಶ್ವರ ದೇವಸ್ಥಾನದ ರಸ್ತೆ ಸಿಸಿ ರಸ್ತೆಯಾಗಬೇಕು. ಸರಿಯಾಗಿ ನೀರು ಹೋಗಲು ಚರಂಡಿ ವ್ಯವಸ್ಥೆ ಬೇಕು. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ನೀರು ರಸ್ತೆ ತುಂಬಾ ಹರಿದು ರಸ್ತೆ ಸಂಚಾರ ವ್ಯತ್ಯಯವಾಗುತ್ತಿದೆ. ಮಹಿಳೆಯರು, ವಯಸ್ಸಾದವರು, ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಊರಾಗ ದೊಡ್ಡ ಜಾತ್ರೆಯಾಗುತ್ತಾ.. ಅಮ್ಮನ ದರ್ಶನಕ್ಕೆ ನೂರಾರು ಜನ ಬರ್ತಾರ, ಅವರೆಲ್ಲ ಏನಂದುಕೊಳ್ತಾರೋ ನಮ್ಮೂರಿನ ಬಗ್ಗೆ ಎಂಬ ಕೊರಗು ಜನರದ್ದು.

ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ್ ಕೊಳ್ಳಾಲ, “ಊರಾಗ ಸರ್ಕಾರಿ ಶಾಲೆ ಚೆನ್ನಾಗಿ ನಡೆದಿದೆ. ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಾಲ್ಕು ಕೋಣೆಗಳು ಶಿಥಿಲಾವಸ್ಥೆ ತಲುಪಿವೆ. ಅದರಲ್ಲಿ ಎರಡು ಕೋಣೆಗಳಲ್ಲಿ ಮಕ್ಕಳನ್ನು ಕುಡಿಸುವುದೇ ಇಲ್ಲ. ಅಪಾಯಕಾರಿಯಾಗಿದೆ ಅವುಗಳ ದುರಸ್ತಿ ಮಾಡಬೇಕಾಗಿದೆ. ಶಾಸಕರು ಶಾಲೆಗೆ ಭೇಟಿ ನೀಡಿ ನೆರವಿನ ಭರವಸೆ ಕೊಟ್ಟಿದ್ದಾರೆ ಆದರು ಬೇಗ ಕೆಲಸವಾದರೆ ಒಳ್ಳೆಯದಾಗುತ್ತದೆ” ಎಂದು ಮನವಿ ಮಾಡಿದರು.
“ಎಸ್ಸಿ ಕಾಲೋನಿ, ಕನಕದಾಸ ಕಾಲೋನಿಯಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಾಗಿದೆ. ಊರಿನ ಪ್ರಮುಖ ರಸ್ತೆಗಳಂತೂ ಚರಂಡಿ ನೀರಿನಿಂದ ಗಬ್ಬೆದ್ದು ನಾರುತ್ತಿವೆ. ಮೂಗು ಮುಚ್ಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ” ಎಂದು ದಲಿತ ವಿದ್ಯಾರ್ಥಿ ಪರಿಷತ್ನ ಯುವ ಮುಖಂಡ ಗುರುಪ್ರಸಾದ್ ಬಿಜಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ವಿಜಯಪುರ | ಕೃಷ್ಣೆಯ ತಟದಲ್ಲಿ ಅಕ್ರಮ ಮರಳು ಸಾಗಾಟ; ಕ್ರಮಕ್ಕೆ ಒತ್ತಾಯ
ಗೋಟಖಿಂಡ್ಕಿ ಗ್ರಾಮಕ್ಕೆ ಈಗ ಕುಡಿಯುವ ನೀರಿನ ಸಮಸ್ಯೆ ಇಲ್ಲ. ವಿತರಣೆಯ ಲೋಪ ಸರಿಪಡಿಸಲಾಗುವುದು. ಕ್ರಿಯಾಯೋಜನೆಯಲ್ಲಿಟ್ಟು ರಸ್ತೆ, ಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪಿಡಿಒ ಶಂಕರ ದಳವಾಯಿ ಈ ದಿನ ಡಾಟ್ ಕಾಮ್ ಪ್ರತಿನಿಧಿಗೆ ಪ್ರತಿಕ್ರಿಯಿಸಿದರು.


ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು