ಕನ್ನಡ ಭಾಷೆಯ ಕುರಿತು ಇಡೀ ಜಗತ್ತು ತಿಳಿದುಕೊಳ್ಳುವಂತಹ ಹಾಗೂ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಕುರಿತು ಪ್ರಜ್ಞೆಯನ್ನು ಹೊಂದುವಂತಹ ಕೆಲಸಕ್ಕೆ ಕನ್ನಡಿಗರು ಮುಂದಾಗಬೇಕಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಅವರಿಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 6ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
“ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ತಾಲೂಕಿನ ಇತಿಹಾಸ, ಆಚಾರ ವಿಚಾರ, ಸಂಸ್ಕೃತಿಯ ಚಿಂತನೆ ಮಾಡಲು ಅವಕಾಶ ಸಿಕ್ಕಿದ್ದು ಸಂತಸದ ವಿಚಾರವಾಗಿದ್ದು, ಭಾಷೆ, ಪ್ರಗತಿ, ನೆಲ, ಜಲದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಒಳ್ಳೆಯ ಅವಕಾಶವನ್ನು ಸಮ್ಮೇಳನದ ವೇದಿಕೆ ಕಲ್ಪಿಸಿಕೊಟ್ಟಿದೆ” ಎಂದರು.
“ಕನ್ನಡ ಭಾಷೆಯ ಕುರಿತು ಪ್ರಜ್ಞೆ ಎಂಬುವುದು ದಿಟ್ಟವಾಗಿರುವುದು. ವರ್ಷಕ್ಕೊಮ್ಮೆ ಕಂಡು ಮಾಯವಾಗುವ ಪ್ರಕ್ರಿಯೆ ಆಗಬಾರದು. ಕನ್ನಡಿಗರೆಂದರೇ ಜಿಲ್ಲೆಗೆ ಮಾತ್ರ ಸೀಮಿತವಾಗದೇ, ಇತರ ಜಿಲ್ಲೆಗಳಲ್ಲಿ ಕನ್ನಡ ಭಾಷೆಗೆ ಆಗುತ್ತಿರುವ ಸಮಸ್ಯೆಗಳು, ಸವಾಲುಗಳ ಬಗ್ಗೆಯೂ ಪ್ರಜ್ಣೆ ಇರಬೇಕು. ಬೆಳಗಾವಿ ಸುವರ್ಣ ಸೌಧ ನಿರ್ಮಾಣವಾದಾಗ ರಾಯಚೂರಿನ ಕನ್ನಡ ಪ್ರಜ್ಞೆ ಸಂಭ್ರಮಿಸಿತ್ತು. ಅದೇ ರೀತಿ ರಾಯಚೂರಿನಲ್ಲಿ ಏಮ್ಸ್ ಬಂದರೆ ಇಡೀ ಕರ್ನಾಟಕದಲ್ಲಿ ಕನ್ನಡ ಪ್ರಜ್ಞೆ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಧ್ವನಿ ಎಲ್ಲೆಡೆ ಮೊಳಗಬೇಕು” ಎಂದು ತಿಳಿಸಿದರು.
“ಇಡೀ ದೇಶದಲ್ಲಿ ಕನ್ನಡದ ಬಗ್ಗೆ ಅರಿವು ಮೂಡಬೇಕು. ಅದೊಂದು ಸಂಸ್ಕೃತಿ ಎಂಬುವುದು ಗೊತ್ತಾಗಬೇಕು. ಅಂತಹ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗನು ಮುಂದಾಗಬೇಕು. ಕನ್ನಡ ಭಾಷೆಯ ಮಮತೆಯನ್ನು ಗೌರವಿಸಿ ಪ್ರೀತಿಸುವ ಸಂದೇಶ ಕೊಡಬೇಕು. ಮಹಾರಾಷ್ಟದಲ್ಲಿ ಶಿವಾಜಿ ಮಾತನಾಡಿದರೆ ಎಲ್ಲರೂ ಸೇರಿಕೊಳ್ಳುತ್ತಾರೆ. ಅದರಂತೆ ಕನ್ನಡ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗುವ ದೃಢ ನಿಶ್ಚಯ ಹೊಂದಬೇಕು. ಕನ್ನಡದ ಸಮಸ್ಯೆಗಳ ಬಗ್ಗೆ ಜಾಗೃತರಾಗುವುದರ ಜೊತೆಗೆ ಕನ್ನಡ ಭಾಷೆಯ ಅಭಿವೃದ್ದಿಗೆ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸಬೇಕು. ಕನ್ನಡ ಭಾಷೆಯ ಸಮಸ್ಯೆ ನಿವಾರಣೆಗೆ ಪ್ರತಿಯೊಬ್ಬರು ಪ್ರಯತ್ನಿಸಬೇಕು” ಎಂದರು.
ಇದನ್ನೂ ಓದಿ: ರಾಯಚೂರು | ಸಮ್ಮೇಳನಗಳು ಕನ್ನಡ ಬಾಂಧವ್ಯ ಗಟ್ಟಿಗೊಳಿಸಲಿ; ನಾಡೋಜ ಗೊ ರು ಚನ್ನಬಸಪ್ಪ
ಈ ವೇಳೆ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಸದಸ್ಯ ಜಯಣ್ಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೇಂಚಿ, ಸಾಹಿತಿ ಬಾಬು ಬಂಢಾರಿಗಲ್, ಸಮ್ಮೇಳನಾಧ್ಯಕ್ಷ ಅಯ್ಯಪ್ಪಯ್ಯ ಹುಡಾ, ಸಾಹಿತಿ ಭಗತರಾಜ ನಿಜಾಮಕಾರಿ, ನಾಗರಾಜ ಮಸ್ಕಿ, ತಾಯಪ್ಪ ಹೊಸೂರು, ಜಿ.ಸುರೇಶ, ಬಸವರಾಜ ಸ್ವಾಮಿ, ಚನ್ನಬಸವಣ್ಣ ,ಅರವಿಂದಕುಲ್ಕರ್ಣಿ ಇದ್ದರು.
