ಜಿಲ್ಲಾಧ್ಯಂತ ಭತ್ತ, ರಾಗಿ ಖರೀದಿ ಕೇಂದ್ರ ತೆರದಿದ್ದು, ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿದೆ. ಮೈಸೂರು, ನಂಜನಗೂಡು, ಟಿ ನರಸೀಪುರ, ಹುಣಸೂರು, ಕೆ ಆರ್ ನಗರ, ಸಾಲಿಗ್ರಾಮ, ಸರಗೂರು, ಪಿರಿಯಾಪಟ್ಟಣ ಎಪಿಎಂಸಿ ಆವರಣ.ಹಾರನಹಳ್ಳಿ, ಬೆಟ್ಟದಪುರ, ರಾವಂದೂರು, ಬನ್ನೂರು,ಬಿಳಿಗೆರೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 2024 – 25 ನೇ ಸಾಲಿನಲ್ಲಿ, ನೋಂದಾಯಿತ ರೈತರು ನಿಗದಿತ ದಿನಾಂಕದಂದು ರಾಗಿ, ಭತ್ತ ಮಾರಾಟ ಮಾಡಬಹುದು. ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ ) ರಾಗಿ ಕ್ವಿಂಟಾಲ್ ಗೆ ₹ 4,290 ರೂಪಾಯಿ ಹಾಗೂ ಭತ್ತಕ್ಕೆ ₹ 2,300 ರೂಪಾಯಿ ನಿಗದಿ ಮಾಡಿದೆ. ಈಗಾಗಲೇ ಖರೀದಿಗೆ ಅಗತ್ಯ ವ್ಯವಸ್ಥೆ, ತಯಾರಿಗಳು ಪ್ರಗತಿಯಲ್ಲಿವೆ.
ಇದುವರೆಗೆ ರಾಗಿ, ಭತ್ತ ಖರೀದಿ ಕೇಂದ್ರ ತೆರೆಯದೆ ರೈತರಿಗೆ ತೊಂದರೆಯಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಈಗಾಗಲೇ ರೈತರಿಂದ ಖರೀದಿ ಮಾಡಿ ಶೇಖರಿಸಿಟ್ಟಿವೆ. ರೈತರಿಗೂ ಸಹ ದಾರಿ ಕಾಣದೆ ತುರ್ತು ನಿಮಿತ್ತ ಮಾರಿದ್ದಾರೆ.
ರೈತರಿಗಾಗುತಿದ್ದ ಅನಾನುಕೂಲ ಮನಗಂಡು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿ,ಶೀಘ್ರವೇ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿತ್ತು. ಈದೀಗ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ ಅವರು ಖರೀದಿ ಕೇಂದ್ರ ತೆರೆದಿರುವುದರ ಬಗ್ಗೆ ಪ್ರಕಟಣೆ ನೀಡಿದ್ದಾರೆ. ಇದು ರೈತ ಸಂಘದ ಹೋರಾಟದ ಫಲ ಎಂದು ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಬಣ್ಣಿಸಿದ್ದಾರೆ. ಈ ಬಗ್ಗೆ ಈದಿನ. ಕಾಮ್ ಕೂಡ ವಿಸ್ತ್ರತವಾಗಿ ವರದಿ ಮಾಡಿತ್ತು ಎಂದರು.
ಈಗಾಗಲೇ ತಡವಾಗಿ ಖರೀದಿ ಕೇಂದ್ರ ತೆರೆಯಲಾಗಿದೆ, ದಲ್ಲಾಳಿಗಳು ಶೇಖರಿಸಿಟ್ಟ ಧಾನ್ಯ ರೈತರ ಹೆಸರಿನಲ್ಲಿಯೇ ಮಾರಾಟ ಆಗುತ್ತೆ. ಇನ್ನ ರೈತರು ಮಾರಾಟ ಮಾಡಿದರು ಕೂಡಲೇ ಹಣ ಏನು ಸಿಗುವುದಿಲ್ಲ. ಅದಕ್ಕೂ ಕಾಯುವಂತ ಪರಿಸ್ಥಿತಿ.
ಇನ್ನೇನು ಮಳೆ ಬಿದ್ದರೆ ಕೃಷಿ ಚಟುವಟಿಕೆ ಕಡೆಗೆ ರೈತರು ಮುಖ ಮಾಡಬೇಕು. ಖರ್ಚು ವೆಚ್ಚ ಇದ್ದೇ ಇರುತ್ತೆ. ಭತ್ತಕ್ಕೆ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆ ವೈಜ್ಞಾನಿಕವಾಗಿಲ್ಲ. ತೀರ ಕಡಿಮೆ ಬೆಲೆ ನಿಗದಿಯಾಗಿದೆ. ಖರೀದಿ ಕೇಂದ್ರ ಯಾವದೋ ಸಮಯದಲ್ಲಿ ತೆರೆಯುವಂತದ್ದು ಅಲ್ಲ. ವರ್ಷಪೂರ್ತಿ ತೆರೆದಿರಬೇಕು, ರೈತ ಬೆಳೆದ ಬೆಳೆಯನ್ನ ಆಗತ್ಯಾನುಸಾರ ಮಾರಾಟ ಮಾಡಲು ಅನುಕೂಲ ಆಗುತ್ತೆ.
ಖರೀದಿ ಕೇಂದ್ರ ಸರಿಯಾದ ಬೆಲೆಯಲ್ಲಿ ಖರೀದಿ ಮಾಡಿದರೆ ರೈತರು ಮಾರಾಟ ಮಾಡುತ್ತಾರೆ, ಇಲ್ಲವೇ, ಮಾರುಕಟ್ಟೆ ದರ ರೈತರಿಗೆ ಪೂರಕವಾಗಿ ಸಿಕ್ಕರೆ ಅಲ್ಲಿ ಮಾರಾಟ ಮಾಡಬಹುದು. ಇದ್ಯಾವುದು ಮಾಡದೆ ದಲ್ಲಾಳಿ ಪರವಾಗಿ ನಿಂತು. ಸಮಯವಲ್ಲದ ಸಮಯದಲ್ಲಿ ಖರೀದಿ ಕೇಂದ್ರ ತೆರೆದರೆ ಇದು ರೈತರಿಗೆ ಅನುಕೂಲ ಮಾಡಲು ಸಾಧ್ಯವೇ ಇಲ್ಲ. ರೈತ ಬೆಳೆದ ಬೆಳೆ ರಕ್ಷಣೆ ಮಾಡೋದ? ಇಲ್ಲ ಮಾರಾಟ ಮಾಡಬೇಕಾ! ಗೊಂದಲದಲ್ಲಿ, ಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗೆ ವ್ಯವಸ್ಥಿತವಾಗಿ ತಳ್ಳಲ್ಪಡುವ ಮಾರ್ಗವಾಗಿವೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ರಾಣಿ,ಪಕ್ಷಿ ಸಂಕುಲ ಉಳಿಸಿ : ನಟ ಪ್ರಜ್ವಲ್ ದೇವರಾಜ್
ವರ್ಷಕ್ಕೆ ಒಮ್ಮೆ ಯಾವುದೋ ಸಮಯದಲ್ಲಿ ತೆರೆದರೆ ರೈತನಿಗೆ ಲಾಭ ಆಗಲ್ಲ, ಲಾಭ ಆಗೋದು ದಲ್ಲಾಳಿಗೆ. ಈ ಸರ್ಕಾರಕ್ಕೆ ಇದರ ಬಗ್ಗೆ ಕನಿಷ್ಠ ಜ್ಞಾನವು ಇಲ್ಲ,ಎಲ್ಲದಕ್ಕೂ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಬಂದೋದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.