- ಬಜೆಟ್ ಅಧಿವೇಶನದ ಬಳಿಕ ಕುಂದುಕೊರತೆ ಸಭೆ ಆಯೋಜನೆ: ಸಚಿವ
- ಪೌರಕಾರ್ಮಿಕರ ಖಾಯಂ ಭರವಸೆ ಪ್ರಣಾಳಿಕೆಯಲ್ಲಿ ಸೇರಿಸಿದ್ದ ಕಾಂಗ್ರೆಸ್
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಗುತ್ತಿಗೆ ಪದ್ದತಿ ರದ್ದುಗೊಳಿಸಿ ನೇರಪಾವತಿ ಜಾರಿಗೊಳಿಸುವುದು ಖಚಿತ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಭರವಸೆ ನೀಡಿದರು.
ಬೆಂಗಳೂರಿನ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ ಸಚಿವರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ಸಾಗಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ನಿಜವಾದ ದುಡಿಮೆಗಾರರಾಗಿದ್ದಾರೆ. ಕಸ ಗುಡಿಸುವ ಪೌರಕಾರ್ಮಿಕರನ್ನು ನೇರಪಾವತಿ ಅಡಿಗೆ ತಂದು ಇನ್ನುಳಿದ ಕಸ ಸಾಗಿಸುವ ಚಾಲಕರು, ನೀರು ಸರಬರಾಜು ಸಹಾಯಕರನ್ನು ಗುತ್ತಿಗೆ ಪದ್ದತಿಯಲ್ಲೇ ಉಳಿಸಿರುವುದು ತಾರತಮ್ಯದ ಕ್ರಮವಾಗಿದೆ. ಈ ನೌಕರರನ್ನು ನೇರಪಾವತಿ ವ್ಯವಸ್ಥೆಗೆ ತರುವ ಸಂಬಂದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಜೆಟ್ ಅಧಿವೇಶನದ ನಂತರ ಅಧಿಕಾರಿಗಳು ಮತ್ತು ಸಂಘದ ಪ್ರತಿನಿಧಿಗಳೊಂದಿಗೆ ಕುಂದುಕೊರತೆ ಸಭೆ ಆಯೋಜಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ನೌಕರರೊಂದಿಗೆ ಸಂವಾದ ನಡೆಸಿದ ಸಚಿವ
ನೌಕರರೊಂದಿಗೆ ಸಚಿವರು ಸಂವಾದ ನಡೆಸಿದರು. ಈ ವೇಳೆ ಹಾವೇರಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಗ್ಗಾಂವಿಯ ಸವಣೂರು ಪುರಸಭೆಯ ಹೊರಗುತ್ತಿಗೆ ನೌಕರರಿಗೆ 22ತಿಂಗಳಿನಿಂದ ವೇತನ ಪಾವತಿಸದಿರುವುದು, ರಾಮನಗರ ಜಿಲ್ಲೆಯಲ್ಲಿ ಪೌರಕಾರ್ಮಿಕರ ನೇಮಕಾತಿ ಪಟ್ಟಿ ಪ್ರಕಟವಾಗಿದ್ದರೂ ನೇಮಕಾತಿ ಆದೇಶ ನೀಡದ ಕುರಿತು ಹಾಗೂ ಹಲವು ಜಿಲ್ಲೆಗಳಲ್ಲಿ ಸಕಾಲಕ್ಕೆ ವೇತನ ನೀಡದೆ ಏಜೆನ್ಸಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಈ ಕುರಿತು ಶೀಘ್ರದಲ್ಲೇ ಜಿಲ್ಲಾ ಪ್ರವಾಸ ಮಾಡಿ ನೌಕರರ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಹೊರಗುತ್ತಿಗೆ ನೌಕರರ ನೇರಪಾವತಿ ಸಂಬಂಧ ಪೌರಾಡಳಿತ ಸಚಿವರಿಗೆ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ: ಮಾಜಿ ಸಿಎಂ ಬೊಮ್ಮಾಯಿ
ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್
ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ನೇರಪಾವತಿ ಜಾರಿಗಾಗಿ ತೀವ್ರ ಹೋರಾಟ ನಡೆಸಿದರೂ ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೂ ಮುನ್ನ ಪೌರಕಾರ್ಮಿಕರ ಖಾಯಂಗೊಳಿಸುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಿತ್ತು. ಇದೇ ಕಾರಣಕ್ಕೆ ಹೊರಗುತ್ತಿಗೆ ನೌಕರರು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈಗ ಪ್ರಣಾಳಿಕೆಯ ಅಂಶವನ್ನು ಜಾರಿಗೊಳಿಸುವ ಬದ್ಧತೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತೋರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ವಿರೇಶ್, ಕಲಬುರಗಿ ವಿಭಾಗ ಸಂಚಾಲಕ ಸಿದ್ದರಾಮ ಪಾಟೀಲ, ಬೆಳಗಾವಿ ವಿಭಾಗದ ರಾಜೂ ಹೊಸಮನಿ, ಬೆಂಗಳೂರು ವಿಭಾಗದ ಪುಟ್ಟಸ್ವಾಮಿ, ಕರಾವಳಿ ವಿಭಾಗದ ಅಣ್ಣಪ್ಪ ಎಂ ಎನ್ ಚಂದ್ರು, ಮಹಂತೇಶ ಸೇರಿದಂತೆ ಹಲವು ಜಿಲ್ಲೆಗಳ ನೂರಾರು ಹೊರಗುತ್ತಿಗೆ ನೌಕರರ ಮುಖಂಡರು ಭಾಗವಹಿಸಿದ್ದರು.
ನಾನು ಯಳಂದೂರು ಪಟ್ಟಣ ಪಂಚಾಯಿತಿ ಯಲ್ಲಿ ಸುಮಾರು ಎರಡು ವರೆ ವರ್ಷ ದಿಂದ ಕೆಲಸ ನಿರ್ವಹಿಸು ತಿದ್ದೇನೆ. ಅದರು ನನಗೆ ಸಂಬಳ ಎನ್ನು ಕೊಟ್ಟಿಲ್ಲ.😔