ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ವೇಳೆ ತಮ್ಮನ್ನು ವಿವಸ್ತ್ರಗೊಳಿಸಿ, ಹಲ್ಲೆಗೈದು, ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಸಿಐಡಿ ವಿಭಾಗದ ಡಿವೈಎಸ್ಪಿ ಕನಕಲಕ್ಷ್ಮೀ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭೋವಿ ನಿಗಮದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹಗರಣದ ತನಿಖೆಯನ್ನು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು. ಸಿಐಡಿ ವಿಭಾಗದ ಡಿವೈಎಸ್ಪಿ ಕನಕಲಕ್ಷ್ಮೀ ನೇತೃತ್ವದ ತಂಡ ಹಗರಣದ ತನಿಖೆ ನಡೆಸುತ್ತಿತ್ತು. ತನಿಖೆ ವೇಳೆ, ವಕೀಲೆ ಜೀವಾ ಅವರನ್ನು ಸಿಐಡಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ವಿಚಾರಣೆ ಎದುರಿಸಿದ್ದ ವಕೀಲೆ ಜೀವಾ, ಆನಂತರ, ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟಿದ್ದ 13 ಪುಟಗಳ ಡೆತ್ನೋಟ್ನಲ್ಲಿ, “ಡಿವೈಎಸ್ಪಿ ಕನಕಲಕ್ಷ್ಮೀ ಮತ್ತು ಇತರ ಅದಿಕಾರಿಗಳು ತಮ್ಮನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿ, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು” ಎಂದು ಆರೋಪಿಸಿದ್ದರು. ಬಳಿಕ, ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ಜೀವಾ ಅವರ ಸಹೋದರಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಇದೀಗ, ಎಸ್ಐಟಿ ಅಧಿಕಾರಿಗಳು ಡಿವೈಎಸ್ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ;
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡಿಸುವುದಾಗಿ ಭರವಸೆ ನೀಡಿ ಹಲವಾರು ಮಂದಿಯಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಕೆ.ಎನ್. ಸೂರ್ಯಕಲಾವತಿ ಎಂಬವರು ಆರೋಪಿಸಿದ್ದರು. 2023ರ ಮಾರ್ಚ್ 18ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರಿನಲ್ಲಿ, “2021ರ ಅಕ್ಟೋಬರ್ನಲ್ಲಿ ಸರಸ್ವತಿ ಮತ್ತು ಲಕ್ಷ್ಮಿ ಎಂಬುವರು ತಮ್ಮನ್ನು ಸಂಪರ್ಕಿಸಿದ್ದರು. ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ. ನೀವು ಅರ್ಜಿ ಸಲ್ಲಿಸಬಹುದು ಎಂದು ಹೇಳಿ ಅಗತ್ಯ ದಾಖಲೆಗಳು ಮತ್ತು ಎರಡು ಖಾಲಿ ಚೆಕ್ಗಳನ್ನು ಪಡೆದುಕೊಂಡಿದ್ದರು. ಅಲ್ಲದೆ, ಖಾಲಿ ಕಾಗದಗಳಿಗೆ ತಮ್ಮಿಂದ ಸಹಿ ಹಾಕಿಸಿಕೊಂಡಿದ್ದರು. ಇದೇ ರೀತಿ ಸುಮಾರು 40 ಮಹಿಳೆಯರಿಂದ ದಾಖಲೆಗಳು, ಚೆಕ್ ಹಾಗೂ ಖಾಲಿ ಪೇಪರ್ ಮೇಲೆ ಸಹಿ ಪಡೆಯಲಾಗಿದೆ. ಒಂದು ತಿಂಗಳ ಬಳಿಕ ಎಲ್ಲ ಮಹಿಳೆಯರಿಗೂ, 50,000 ರೂ. ಸಾಲ ಮಂಜೂರು ಮಾಡಿ, ಎಲ್ಲರಿಂದಲೂ ತಲಾ 25,000 ರೂ.ಗಳನ್ನು ಲಂಚವಾಗಿ ವಾಪಸ್ ಕಿತ್ತುಕೊಂಡಿದ್ದಾರೆ” ಎಂದು ಆರೋಪಿಸಿದ್ದರು.
“ವಂಚನೆಗೆ ಒಳಗಾದ ತಾವು 2022ರ ಡಿಸೆಂಬರ್ನಲ್ಲಿ ಭೋವಿ ನಿಗಮದ ಅಧಿಕಾರಿಗಳು ಭೇಟಿ ಮಾಡಿದ್ದೆವು. ಆಗ, ಅಧಿಕಾರಿಗಳು ‘ತಮಗೆ 5 ಲಕ್ಷ ರೂ. ಸಾಲ ಮಂಜೂರಾಗಿ, ಪಾವತಿಯಾಗಿದೆ. ಆ ಸಾಲವನ್ನು ಮರುಪಾವತಿ ಮಾಡಬೇಕು’ ಎಂದಿದ್ದಾರೆ. ಇದರಿಂದ ಗಾಬರಿಗೊಂಡು ಬ್ಯಾಂಕ್ಗೆ ತೆರಳಿ ಪರಿಶೀಲಿದಾಗ, ತಾವು ನೀಡಿದ್ದ ಖಾಲಿ ಚೆಕ್ ಬಳಸಿಕೊಂಡು 4,75,000 ರೂ.ಗಳನ್ನು ‘ನ್ಯೂ ಡ್ರೀಮ್ಸ್ ಎಂಟರ್ಪ್ರೈಸಸ್’ಗೆ ವರ್ಗಾಯಿಸಲಾಗಿದೆ ಎಂಬುದು ಗೊತ್ತಾಗಿದೆ. ತಮಗೆ ಅನ್ಯಾಯವಾಗಿದೆ” ಎಂದು ಸೂರ್ಯಕಲಾವತಿ ಆರೀಪಿಸಿದ್ದರು.
ಇದೇ ರೀತಿ 40ಕ್ಕೂ ಹೆಚ್ಚು ಮಂದಿಗೆ ವಂಚಿಸಲಾಗಿದೆ ಎಂದು ಹೇಳಲಾಗಿತ್ತು. ಬಳಿಕ, ಹಗರಣ ಬೆಳಕಿಗೆ ಬಂದಿತ್ತು. ತನಿಕೆ ನಡೆಸುವ ವೇಳೆ ಹಲವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಅವರಲ್ಲಿ ವಕೀಲೆ ಜೀವಾ ಕೂಡ ಒಬ್ಬರು ಎಂದು ವರದಿಯಾಗಿದೆ.