ಬುಧವಾರ ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್ಐ) ಅಮಾನತು ರದ್ದುಗೊಳಿಸಿದ್ದಾರೆ. ಈ ಬೆನ್ನಲ್ಲೇ 2023ರಲ್ಲಿ ಡಬ್ಲ್ಯೂಎಫ್ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಸ್ತಿಪಟು- ರಾಜಕಾರಣಿ ವಿನೇಶ್ ಫೋಗಟ್ ಗೊಂದಲ ವ್ಯಕ್ತಪಡಿಸಿದ್ದಾರೆ.
“ನಾನು ಇಲ್ಲಿ ಹೆಮ್ಮೆ ಮತ್ತು ದುಃಖದಿಂದ ನಿಂತಿದ್ದೇನೆ. ಅನೇಕ ಶಾಸಕರು ಮತ್ತು ಸಚಿವರು ತಮ್ಮ ಸರ್ಕಾರ ಕ್ರೀಡೆಗಾಗಿ ಬಹಳಷ್ಟು ಮಾಡಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಈ ಮಾತನ್ನು ದುಃಖದಿಂದ ಹೇಳುತ್ತಿದ್ದೇನೆ. ಎರಡು ವರ್ಷಗಳ ಕಾಲ ನಾವು ಬೀದಿಗಳಲ್ಲಿ ಹೋರಾಡಿದೆವು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹರಿಯಾಣ ವಿಧಾನಸಭೆ: ಗೆಲುವು ಸಾಧಿಸಿದ ಕುಸ್ತಿಪಟು ವಿನೇಶ್ ಫೋಗಟ್
“ಕುಸ್ತಿ ಕ್ರೀಡೆಯನ್ನು ಉಳಿಸಲು ನಾವು ಹೋರಾಡುತ್ತಿದ್ದೆವು. ಈಗ, ಎರಡು ದಿನಗಳ ಹಿಂದೆ, ನಿಮ್ಮ ಪಕ್ಷ (ಬಿಜೆಪಿ) ಕ್ರೀಡೆಯನ್ನು ಮತ್ತೆ ಅವರ ಕೈಗೆ ನೀಡಿದೆ” ಎಂದು ಜುಲಾನಾದ ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಹರಿಯಾಣ ವಿಧಾನಸಭೆಯಲ್ಲಿ ಬ್ರಿಜ್ ಭೂಷಣ್ ಅವರ ಹೆಸರನ್ನು ಉಲ್ಲೇಖಿಸದೆಯೇ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಫೋಗಟ್ ಭಾಗಿಯಾಗಿದ್ದರು. ಬಳಿಕ ವಿಧಾನಸಭಾ ಸಂಕೀರ್ಣದ ಹೊರಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಫೋಗಟ್, “ಸದ್ಯ ಡಬ್ಲ್ಯೂಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ಒಬ್ಬ ‘ಡಮ್ಮಿ’ ಆಗಿದ್ದಾರೆ. ಈಗಲೂ ಎಲ್ಲಾ ಕಾರ್ಯವನ್ನು ನೋಡಿಕೊಳ್ಳುವುದು ಬ್ರಿಜ್ ಭೂಷಣ್” ಎಂದು ಆರೋಪಿಸಿದರು.
ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟದ ಅಮಾನತನ್ನು ರದ್ದುಗೊಳಿಸಿದೆ. ಆಡಳಿತ ಮತ್ತು ಕಾರ್ಯವಿಧಾನದಲ್ಲಿ ಲೋಪ ಕಂಡು ಬಂದ ಕಾರಣದಿಂದಾಗಿ ಸಚಿವಾಲಯವು 2023ರ ಡಿಸೆಂಬರ್ 24ರಂದು ಡಬ್ಲ್ಯೂಎಫ್ಐ ಅನ್ನು ಅಮಾನತುಗೊಳಿಸಿತ್ತು.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ನಾಮಪತ್ರ ಸಲ್ಲಿಸಿದ ವಿನೇಶ್ ಫೋಗಟ್
ಕುಸ್ತಿಪಟುಗಳಾದ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರು ಬ್ರಿಜ್ ಭೂಷಣ್ ಕಿರಿಯ ಕುಸ್ತಿಪಟುಗಳನ್ನು ಲೈಂಗಿಕವಾಗಿ ನಿಂದಿಸಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್ನಲ್ಲಿ ದೀರ್ಘ ಪ್ರತಿಭಟನೆ ನಡೆಸಿದರು. ಈ ವಿಚಾರದಲ್ಲಿ ಬಿಜೆಪಿ ನಾಯಕ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ವಿಚಾರಣೆ ನಡೆಯುತ್ತಿದೆ. ಆದರೆ ಬ್ರಿಜ್ ಭೂಷಣ್ ಮಾತ್ರ ಆರೋಪ ನಿರಾಕರಿಸುತ್ತಲೇ ಇದ್ದಾರೆ.
ಇದಕ್ಕೂ ಮುನ್ನ ಫೋಗಟ್ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, “”ನೀವು ಒಂದು ರಾಜಕೀಯ ಪಕ್ಷದ ನಾಯಕಿ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ನೀವು ಒಬ್ಬ ಕ್ರೀಡಾಪಟುವಾಗಿ ದೇಶದ ಹೆಮ್ಮೆ ಎಂಬ ಕಾರಣಕ್ಕಾಗಿ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಇದರರ್ಥ ಈ ರೀತಿ ವಿಷಯ ಪ್ರಸ್ತಾಪಿಸುವುದನ್ನು ನಾವು ಒಪ್ಪುತ್ತೇವೆಂದು ಅಲ್ಲ” ಎಂದು ಸಂಸದೀಯ ವ್ಯವಹಾರಗಳ ಸಚಿವ ಮಹಿಪಾಲ್ ಧಂಡಾ ಹೇಳಿದರು.
ಸಚಿವರಿಗೆ ಪ್ರತಿಕ್ರಿಯಿಸಿದ ಫೋಗಟ್, “ನಮ್ಮ ಹೋರಾಟ, ಈ ಹೋರಾಟ (ಮಾಜಿ WFI ಮುಖ್ಯಸ್ಥರ ವಿರುದ್ಧ) ಯಾವುದೇ ನಿರ್ದಿಷ್ಟ ಪಕ್ಷದಿಂದ ಪ್ರಾರಂಭವಾಗಿಲ್ಲ. ನಾವು ಕ್ರೀಡಾಪಟುಗಳಾಗಿ ನಮ್ಮ ಧ್ವನಿ ಎತ್ತಿದ್ದೇವೆ ಮತ್ತು ಕ್ರೀಡಾಪಟು ಯಾವಾಗಲೂ ಕ್ರೀಡಾಪಟುವಾಗಿರುತ್ತಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್ಗೆ ಸೇರಿದ ದಿನವೇ ವಿನೇಶ್ ಫೋಗಟ್ಗೆ ಟಿಕೆಟ್
ಹಾಗೆಯೇ ಉದಯೋನ್ಮುಖ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಹರಿಯಾಣ ಸರ್ಕಾರವನ್ನು ಫೋಗಟ್ ಒತ್ತಾಯಿಸಿದರು.
ಇನ್ನು ಈ ಸಂದರ್ಭದಲ್ಲಿ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಸ್ಪರ್ಧೆಗೆ ಮುಂಚಿತವಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬರೀ 100 ಗ್ರಾಂ ತೂಕ ಹೆಚ್ಚಳದ ಕಾರಣ ಅನರ್ಹಗೊಂಡ ನಂತರ ಪದಕ ವಿಜೇತೆಯಂತೆ ಫೋಗಟ್ ಅವನ್ನು ಸನ್ಮಾನಿಸುವುದಾಗಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೀಡಿದ ಭರವಸೆ ನೀಡಿದ್ದರು. ಈ ಭರವಸೆಯನ್ನು ಫೋಗಟ್ ಮುಖ್ಯಮಂತ್ರಿಗೆ ನೆನಪಿಸಿದರು.
“ವಿನೇಶ್ ನಮ್ಮ ಮಗಳು ಮತ್ತು ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಬಹುಮಾನವನ್ನೇ ಅವಳಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ಭರವಸೆ ಇನ್ನೂ ಈಡೇರಿಲ್ಲ. ಇದು ಹಣದ ವಿಚಾರವಲ್ಲ, ಇದು ಗೌರವದ ವಿಚಾರವಾಗಿದೆ. ರಾಜ್ಯದಾದ್ಯಂತ ಹಲವು ಜನರು ನನಗೆ ಈಗಾಗಲೇ ನಗದು ಪ್ರಶಸ್ತಿ ಬಂದಿದೆ ಎಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಬಂದಿಲ್ಲ” ಎಂದು ಫೋಗಟ್ ತಿಳಿಸಿದರು.
