- ಹೊಸ ಸರ್ಕಾರ ಬಂದ ನಂತರ ಬಿಲ್ ಪಾವತಿ ಸ್ಥಗಿತ
- ಕಳೆದ 26 ತಿಂಗಳ ಬಿಲ್ ಪಾವತಿ ಮಾಡುವುದು ಬಾಕಿ
ಅಮೃತ ನಗರೋತ್ಥಾನ ಯೋಜನೆಯಡಿ ಮಂಜೂರಾಗಿರುವ ಕನಿಷ್ಠ ₹650 ಕೋಟಿ ಬಾಕಿ ಬಿಲ್ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು. ಒಂದು ವೇಳೆ, ವಿಫಲವಾದರೇ ಜೂನ್ 29 ರಿಂದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್, “ಗುತ್ತಿಗೆದಾರರಿಗೆ ನೀಡಬೇಕಾದ ₹2,500 ಕೋಟಿ ಕಾಮಗಾರಿಯ ಬಾಕಿ ಬಿಲ್ ಇನ್ನೂ ಪಾವತಿಯಾಗಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಬಿಬಿಎಂಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದಾಗ ಮೂರು ತಿಂಗಳು ಬಿಲ್ ಪಾಸ್ ಮಾಡಿದ್ದರು. ಅಂದಾಜು ₹250 ಕೋಟಿ ಬಿಲ್ ಪಾವತಿ ಮಾಡಿದ್ದಾರೆ. ಹೊಸ ಸರ್ಕಾರ ಬಂದ ನಂತರ ಬಿಲ್ ಪಾವತಿ ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಿದರು.
“ಕಳೆದ 26 ತಿಂಗಳ ಬಿಲ್ ಪಾವತಿ ಮಾಡುವುದು ಬಾಕಿ ಉಳಿದಿದೆ. ಇದರಿಂದ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಸರ್ಕಾರದ ಮೇಲೆ ಹೊರೆಯಾಗಿರುವ ಕಾಮಗಾರಿಗಳು, ಹಿಂದಿನ ಬಿಜೆಪಿ ಸರ್ಕಾರವು ಪ್ರಾರಂಭಿಸಿದ ಯೋಜನೆಗಳ ಮರುಪರಿಶೀಲನೆಯವರೆಗೂ ಬಿಲ್ಗಳಿಗೆ ತಡೆಹಿಡಿದಿದ್ದಾರೆ. ಚಾಲ್ತಿಯಲ್ಲಿದ್ದ ಕಾಮಗಾರಿಗಳನ್ನು ಕೂಡ ಸರ್ಕಾರದ ಆದೇಶ ಎಂದು ಬಿಲ್ ಪಾವತಿ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯಕ್ಕೆ ಬಿಬಿಎಂಪಿಯಲ್ಲಿ 1000 ಗುತ್ತಿಗೆದಾರರು ಇದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದರೋಡೆಗೆ ಹೊಂಚು ಹಾಕಿದ್ದ ಐವರು ಆರೋಪಿಗಳ ಬಂಧನ
“ಈ ತಿಂಗಳೊಳಗೆ ಬಾಕಿ ಬಿಲ್ ಪಾವತಿ ಮಾಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಮಾಡಿದ್ದೇವೆ. ಈ ತಿಂಗಳ ಒಳಗೆ ಬಾಕಿ ಬಿಲ್ ಪಾವತಿ ಮಾಡದಿದ್ದರೇ, ಹೋರಾಟ ಮಾಡಲಾಗುವುದು. ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ ಹುಂಡಿ ಪಾವತಿ ಮಾಡುತ್ತೇವೆ ಎಂದು ಹೇಳಿತ್ತು. ಆದರೆ, ಅದು ಅಸ್ತಿತ್ವಕ್ಕೆ ಬರಲೇ ಇಲ್ಲ” ಎಂದು ಹೇಳಿದರು.