ಹೆಣ್ಣುಮಕ್ಕಳು ವಿದ್ಯಾಭ್ಯಾಸದ ನಂತರದಲ್ಲಿ ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದು ಕೈಕಟ್ಟಿ ಕೂರದೆ ಸ್ವ–ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಹಾಕಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ ವಾಮದೇವಪ್ಪ ಸಲಹೆ ನೀಡಿದರು.
ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪಠ್ಯಪೂರಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಉತ್ತಮ ಸಾಧನೆ ತೋರಿರುವುದು ಸಂತಸದ ವಿಷಯ. ಎಲ್ಲರಿಗೂ ಬುದ್ಧಿಶಕ್ತಿ ಇರುತ್ತದೆ. ಅದನ್ನು ಕೆಲವರು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಉಪಯೋಗಿಸಿಕೊಳ್ಳುವುದಿಲ್ಲ. ಬಡವನಾಗಿ ಹುಟ್ಟಿದರೂ ಬಡವನಾಗಿಯೇ ಸಾಯುವುದು ತಪ್ಪು. ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಾಧನೆ ಮಾಡಬೇಕು ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಪತ್ರಕರ್ತೆ ಎಚ್ ಅನಿತಾ, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ಗಳೇ ಶ್ರೇಷ್ಠವಲ್ಲ. ಬಿಎ, ಬಿಎಸ್ಸಿ, ಬಿಕಾಂ ಓದುವವರ ಸೇವೆಯೂ ಸಮಾಜಕ್ಕೆ ಅಗತ್ಯವಿದೆ. ಕೀಳರಿಮೆಯನ್ನು ತೊರೆದು ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಉನ್ನತ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.
ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದರೂ, ದೌರ್ಜನ್ಯಗಳಿಂದ ಸಂಪೂರ್ಣ ಮುಕ್ತಳಾಗಿಲ್ಲ. ಹೆಣ್ಣುಮಕ್ಕಳ ಮೇಲಿನ ಕೆಲವು ಅಪರಾಧ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸುವಂತಿವೆ. ಪಾಲಕರು ಹೆಣ್ಣುಮಕ್ಕಳಿಗೆ ಮಾತ್ರವೇ ನಿರ್ಬಂಧಗಳನ್ನು ಹೇರದೆ ಗಂಡುಮಕ್ಕಳಿಗೂ ಲಿಂಗ ಸೂಕ್ಷ್ಮತೆ ಕುರಿತು ಅರಿವು ಮೂಡಿಸುವ, ಹೆಣ್ಣುಮಕ್ಕಳನ್ನು ಗೌರವಿಸುವ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪಾಲಿಕೆ ಮೇಯರ್ ಹುದ್ದೆ ಮತ್ತೆ ಬಿಜೆಪಿ ಪಾಲು
ಕಾರ್ಯಕ್ರಮದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ದಿಳ್ಯೆಪ್ಪ, ಕಾಲೇಜು ಪ್ರಾಂಶುಪಾಲ ಪ್ರೊ. ಎ ಎಸ್ ಶೈಲಜಾ, ಕಾಲೇಜಿನ ಐಕ್ಯುಎಸಿ ಸಂಚಾಲಕ ಭೀಮಪ್ಪ ಪಿ, ಕಚೇರಿ ಅಧೀಕ್ಷಕ ಟಿ ಶೇಷಪ್ಪ, ಉಪನ್ಯಾಸಕಿ ಪೂರ್ಣಿಮಾ, ಸಿದ್ದಲಿಂಗಮ್ಮ ಇದ್ದರು.
ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಬಿ. ಎ,. (ಕನ್ನಡ ಐಚ್ಛಿಕ) ವಿಭಾಗದಲ್ಲಿ 8ನೇ ರ್ಯಾಂಕ್ ಪಡೆದ ಕಾಲೇಜಿನ ಕಾವ್ಯಾ ಎಸ್ ಎ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ವತಿಯಿಂದ, ಪ್ರಾಂಶುಪಾಲರಾದ ಪ್ರೊ. ಎ ಎಸ್ ಶೈಲಜಾ ಮತ್ತು ಕಸಾಪ ಅಧ್ಯಕ್ಷ ಬಿ ವಾಮದೇವಪ್ಪ, ಕನ್ನಡ ವಿಭಾಗದ ಮುಖ್ಯಸ್ಥರಾದ ಮಂಜಣ್ಣ ಹಾಗೂ ಸಹ ಪ್ರಾಧ್ಯಾಪಕಿ ಕಾವ್ಯಶ್ರೀ, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ ವೈಯಕ್ತಿಕವಾಗಿ ಪ್ರೋತ್ಸಾಹಧನವನ್ನು ವಿದ್ಯಾರ್ಥಿನಿ ಕಾವ್ಯಾ ಅವರಿಗೆ ನೀಡಿದರು.